ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಪದ್ಮಶ್ರೀ ಪುರಸ್ಕೃತ ಹೊಸಹಳ್ಳಿ ಎಚ್.ಆರ್.ಕೇಶವಮೂರ್ತಿ(89) (Hosahalli HR Keshava Murthy) ಅವರು ನಿಧನರಾದರು.
ಕೇಶವಮೂರ್ತಿ ಅವರು ಶಿವಮೊಗ್ಗದ ಮತ್ತೂರು (Mattur) ಹೊಸಹಳ್ಳಿಯ ರಾಮಸ್ವಾಮಿಶಾಸ್ತ್ರೀ ಲಕ್ಷ್ಮೀದೇವಮ್ಮ ದಂಪತಿಯ ಪುತ್ರರಾಗಿ 1934ರ ಫೆಬ್ರವರಿ 22ರಂದು ಜನಿಸಿದ್ದರು. ಇವರು ಬಾಲ್ಯದಿಂದಲೇ ಗಮಕವನ್ನು ಮೈಗೂಡಿಸಿಕೊಂಡಿದ್ದರು. ತಮ್ಮ 16ನೇ ವಯಸ್ಸಿನಲ್ಲಿಯೇ ಗಮಕ ವಾಚನ ಅಧ್ಯಯನ ಆರಂಭಿಸಿದ್ದರು. ರಾಮಾಯಣ, ಮಹಾಭಾರತ, ಕನ್ನಡ, ಸಂಸ್ಕೃತದ ಕಾವ್ಯಗಳನ್ನು ರಾಗಗಳಲ್ಲಿ ವಾಚಿಸುತ್ತಿದ್ದು ವಿಶೇಷ.
ಕೇಶವಮೂರ್ತಿ ಬಗ್ಗೆ ತಿಳಿಯಬೇಕಾದ 8 ವಿಚಾರಗಳು
- 2022ರಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಪದ್ಮಶ್ರೀ ಪ್ರಶಸ್ತಿಯನ್ನು ಪ್ರದಾನ ಮಾಡಿದ್ದರು.
- 100ಕ್ಕೂ ಹೆಚ್ಚು ಶೈಲಿಯಲ್ಲಿ ವಾಚನ ಮಾಡುವ ಮೂಲಕ ‘ಶತರಾಗಿ’ ಹೆಗ್ಗಳಿಕೆಗೆ ಪಾತ್ರರಾಗಿದ್ದರು.
- ರಾಜ್ಯದ ಮೂಲೆ- ಮೂಲೆಗೂ ಅವರು ಗಮಕ ಕಲೆಯ ಮೂಲಕ ಮನೆ ಮಾತಾಗಿದ್ದರು. ಉದಯ ಟಿವಿಯಲ್ಲಿ ಕುಮಾರವ್ಯಾಸ ಭಾರತ ಕಾರ್ಯಕ್ರಮ ದೊಡ್ಡ ಸಂಖ್ಯೆಯ ಜನರನ್ನು ತಲುಪಿತ್ತು.
- ಕರ್ನಾಟಕ ಸರ್ಕಾರವು ಶಾಸ್ತ್ರೀಯ ನೃತ್ಯಕ್ಕೆ ನೀಡಿದ ಕೊಡುಗೆಗಾಗಿ ಮೂರ್ತಿ ಅವರಿಗೆ 1998 ರಲ್ಲಿ ಶಾಂತಲಾ ನಾಟ್ಯಶ್ರೀ ಪ್ರಶಸ್ತಿಯನ್ನು ನೀಡಲಾಯಿತು. 2002ರಲ್ಲಿ ಕರ್ನಾಟಕ ಸರ್ಕಾರದಿಂದ ರಾಜ್ಯೋತ್ಸವ ಪ್ರಶಸ್ತಿ ಮತ್ತು ಕರ್ನಾಟಕ ರತ್ನ ಪ್ರಶಸ್ತಿಯನ್ನು ನೀಡಲಾಗಿತ್ತು.
- 2022ರಲ್ಲಿ ಕೇಂದ್ರ ಸರ್ಕಾರವು ಅವರಿಗೆ ದೇಶದ ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿತ್ತು
- ಎಚ್.ಆರ್.ಕೇಶವಮೂರ್ತಿ ಅವರು ಹೆಗ್ಗೋಡು, ಮತ್ತೂರು, ಶಿವಮೊಗ್ಗ, ಮೈಸೂರು, ಬೆಂಗಳೂರು, ಗದಗ ಹಾಗೂ ಹೊರ ರಾಜ್ಯಗಳು ಸೇರಿದಂತೆ ಅನೇಕ ಕಡೆ ಸುಮಾರು 40ಕ್ಕೂ ಹೆಚ್ಚು ವರ್ಷಗಳಿಂದ ನಿರಂತರವಾಗಿ ಗಮಕ ಕಾರ್ಯಕ್ರಮಗಳನ್ನು ನೀಡುತ್ತ ಬಂದಿದ್ದರು.
- ಹಿರಿಯ ವ್ಯಾಖ್ಯಾನಕಾರರಾಗಿದ್ದ ವ್ಯಾಖ್ಯಾನ ವಾಚಸ್ಪತಿ ಮತ್ತೂರು ಲಕ್ಷ್ಮೀಕೇಶವ ಶಾಸ್ತ್ರಿ ಅವರ ವ್ಯಾಖ್ಯಾನದೊಂದಿಗೆ ಸಮಗ್ರ ಕುಮಾರವ್ಯಾಸ ಭಾರತದ 135 ಧ್ವನಿ ಸುರುಳಿಗಳು, ಮಾರ್ಕಂಡೇಯ ಅವಧಾನಿ ಅವರ ವ್ಯಾಖ್ಯಾನದೊಂದಿಗೆ 35 ಧ್ವನಿ ಸುರುಳಿಗಳಲ್ಲಿ ಜೈಮಿನಿ ಭಾರತ ಹೊರಬಂದಿದೆ.
- ಡಾ. ಮತ್ತೂರು ಕೃಷ್ಣಮೂರ್ತಿ ಮತ್ತು ಕೇಶವಮೂರ್ತಿಗಳ ಜೋಡಿ ಜಗತ್ಪ್ರಸಿದ್ಧವಾಗಿದೆ. ಇವರಿಬ್ಬರ ವಾಚನ ವ್ಯಾಖ್ಯಾನದಲ್ಲಿ ಕುಮಾರವ್ಯಾಸ ಭಾರತದ 200 ಕ್ಯಾಸೆಟ್ಟುಗಳು ಬಿಡುಗಡೆಯಾಗಿವೆ.
ಗಣ್ಯರು ಸಂಘ, ಸಂಸ್ಥೆಗಳ ಸಂತಾಪ
ಕೇಶವಮೂರ್ತಿ ಅವರ ನಿಧನಕ್ಕೆ ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಸಂಸದ ಬಿ.ವೈ.ರಾಘವೇಂದ್ರ, ಗೃಹ ಸಚಿವ ಆರಗ ಜ್ಞಾನೇಂದ್ರ, ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣಗೌಡ, ಶಾಸಕರಾದ ಕೆ.ಎಸ್.ಈಶ್ವರಪ್ಪ, ಡಿ.ಎಸ್.ಅರುಣ್, ಮಾಜಿ ಶಾಸಕ ಕೆ.ಬಿ.ಪ್ರಸನ್ನ ಕುಮಾರ್ ಸೇರಿದಂತೆ ಹಲವರು ಸಂತಾಪ ಸೂಚಿಸಿದ್ದಾರೆ.
ಕೇಶವಮೂರ್ತಿ ನಿಧನಕ್ಕೆ ಪತ್ರಕರ್ತರ ಸಂಘ ಸಂತಾಪ
ಪಶ್ಮಶ್ರೀ ಪುರಸ್ಕೃತ, ಗಮಕ ಗಾನ ಗಂಧರ್ವ, ಗಮಕ ಸಾಮ್ರಾಟ ಹೊಸಹಳ್ಳಿ ಎಚ್.ಆರ್.ಕೇಶವಮೂರ್ತಿ ಅವರ ನಿಧನಕ್ಕೆ ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಪ್ರೆಸ್ ಟ್ರಸ್ಟ್ ಪದಾಧಿಕಾರಿಗಳು ತೀವ್ರ ಸಂತಾಪ ಸೂಚಿಸಿದ್ದಾರೆ.
ಎಚ್.ಆರ್.ಕೇಶವಮೂರ್ತಿ ಅವರು ಗಮಕ ಕಲೆಯಲ್ಲಿ 70 ವರ್ಷಗಳ ಕಾಲ ಅಗಾದ ಸಾಧನೆ ಮಾಡಿದವರು. ಗಮಕ ಕಲೆಗೊಂದು ಗತ್ತು- ಗೈರತ್ತು ತಂದುಕೊಟ್ಟವರು. ರಾಮಾಯಣ, ಮಹಾಭಾರತ, ಕನ್ನಡ ಹಾಗೂ ಸಂಸ್ಕೃತದ ಕಾವ್ಯಗಳನ್ನು ಹಲವು ರಾಗಗಳಲ್ಲಿ ವಾಚನ ಮಾಡುವುದನ್ನು ರೂಢಿಸಿಕೊಂಡವರು. 100ಕ್ಕೂ ಹೆಚ್ಚು ವಿಭಿನ್ನ ರಾಗಗಗಳಲ್ಲಿ ವಾಚನ ಮಾಡುವ ಮೂಲಕ ‘ಶತಕರಾಗಿ’ ಎಂಬ ಬಿರುದಿಗೆ ಇವರು ಪಾತ್ರರಾದವರು. ರಾಜ್ಯ ಹಾಗೂ ದೇಶದ ಹಲವಡೆ ನಡೆದ ಸಂಗೀತ ಕಾರ್ಯಕ್ರಮ ನಡೆಸಿ ಗಮಕ ವಾಚನದ ಮೂಲಕ ಗಮನ ಸೆಳೆದಿರುವ ಕೇಶವಮೂರ್ತಿ ಸಾಧನೆಗೆ ಪದ್ಮಶ್ರೀ, ಕುಮಾರವ್ಯಾಸ, ರಾಜ್ಯೋತ್ಸವ ಸೇರಿದಂತೆ ಹಲವು ಪ್ರಶಸ್ತಿಗಳು ಸಂದಿವೆ. ಗಮಕ ಕಲೆಗಾಗಿಯೇ ತಮ್ಮನ್ನು ಸಮರ್ಪಿಸಿಕೊಂಡಿದ್ದ ಕೇಶವ ಮೂರ್ತಿಯವರ ನಿಧನದಿಂದ ಸಾಂಸ್ಕೃತಿಕ ಲೋಕ ಬಡವಾಗಿದೆ.
ಸಂಘದ ಅಧ್ಯಕ್ಷ ಗೋಪಾಲ್ ಯಡಗೆರೆ, ಗೌರವಾಧ್ಯಕ್ಷ ಎಸ್.ಚಂದ್ರಕಾಂತ್, ಉಪಾಧ್ಯಕ್ಷ ಕೆ.ತಿಮ್ಮಪ್ಪ, ಪ್ರಧಾನ ಕಾರ್ಯದರ್ಶಿ ಸಂತೋಷ್ ಕಾಚಿನಕಟ್ಟೆ. ಕಾರ್ಯದರ್ಶಿ ಗೋ.ವಾ ಮೋಹನಕೃಷ್ಣ, ಖಜಾಂಚಿ ಶಿವಮೊಗ್ಗ ನಂದನ್, ಪ್ರೆಸ್ ಟ್ರಸ್ಟ್ ಅಧ್ಯಕ್ಷ ಎನ್.ಮಂಜುನಾಥ್, ಪ್ರಧಾನ ಕಾರ್ಯದರ್ಶಿ ನಾಗರಾಜ್ ನೇರಿಗೆ, ಖಜಾಂಚಿ ಜೇಸುದಾಸ್ ಸೇರಿದಂತೆ ಸಂಘದ ಸದಸ್ಯರು ಹಾಗೂ ಪದಾಧಿಕಾರಿಗಳು ಸಂತಾಪ ಸೂಚಿಸಿದ್ದಾರೆ.
ಖ್ಯಾತ ಗಮಕ ಕಲಾವಿದರೂ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಹೊಸಳ್ಳಿ ಕೇಶವ ಮೂರ್ತಿ ಅವರು ನಿಧನರಾದ ಸುದ್ದಿ ತಿಳಿದು ಅಪಾರ ದುಃಖವಾಗಿದೆ. ಶ್ರೀಯುತರ ಆತ್ಮಕ್ಕೆ ಚಿರ ಶಾಂತಿ ದೊರಕಲಿ. ಅವರ ಕುಟುಂಬ ವರ್ಗಕ್ಕೆ ದುಃಖವನ್ನು ಭರಿಸುವ ಶಕ್ತಿ ಕೊಡಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ.
ಆರಗ ಜ್ಞಾನೇಂದ್ರ, ಗೃಹ ಸಚಿವಗಮಕವನ್ನೇ ಉಸಿರಾಗಿಸಿಕೊಂಡಿದ್ದ ಶ್ರೀ ಕೇಶವಮೂರ್ತಿ ಅವರು ಗಮಕ ಕಲಾ ಪ್ರಪಂಚಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದರು. ಮಹಾನ್ ಕಲಾವಿದರನ್ನು ಕಳೆದುಕೊಂಡು ಕಲಾ ಪ್ರಪಂಚ ಬಡವಾಗಿದೆ. ಶ್ರೀ ಕೇಶವಮೂರ್ತಿ ಅವರ ಆತ್ಮಕ್ಕೆ ಭಗವಂತ ಸದ್ಗತಿ ನೀಡಲಿ, ಅಪರ ಪ್ರಮಾಣದ ಶಿಷ್ಯಂದಿರು, ಬಂಧುಗಳಿಗೆ ಶ್ರೀಯುತರ ಅಗಲಿಕೆ ನೋವನ್ನು ಭರಿಸುವ ಶಕ್ತಿ ನೀಡಲಿ.
ಡಾ.ನಾರಾಯಣಗೌಡ, ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ
ಅಪರೂಪದ ಕ್ಷಣಕ್ಕೆ ಸಾಕ್ಷಿಯಾಗಿದ್ದನ್ನು ಸ್ಮರಿಸಿದ ಸಚಿವರು
ಗಮಕ ಕೇಶವಮೂರ್ತಿ ಅವರಿಗೆ ಪದ್ಮಶ್ರೀ ಸಂದ ಸಂದರ್ಭದಲ್ಲಿ ಸನ್ಮಾನಿಸಿದ್ದ ಕ್ಷಣವನ್ನು ಸಚಿವ ಡಾ.ನಾರಾಯಣಗೌಡ ಅವರು ಸ್ಮರಿಸಿದ್ದಾರೆ.
ಪದ್ಮಶ್ರೀ ಪ್ರಶಸ್ತಿ ಬಂದ ಸಂದರ್ಭದಲ್ಲಿ ಗಮಕ ಕೇಶವಮೂರ್ತಿಯವರ ಹೊಸಹಳ್ಳಿ ನಿವಾಸಕ್ಕೆ ಭೇಟಿ ನೀಡಿ ಅವರನ್ನು ಸನ್ಮಾನಿಸಲಾಗಿತ್ತು. ಈ ವೇಳೆ ಆತ್ಮೀಯತೆಯಿಂದ ಮಾತನಾಡಿಸಿದ್ದ ಶ್ರೀಯುತರು, ಅವರ ಕುಟುಂಬ ಹಾಗೂ ಕೆಆರ್ ಪೇಟೆ ನಡುವಿನ ಒಡನಾಟದ ಬಗ್ಗೆ ಮೆಲುಕು ಹಾಕಿದ್ದರು. ಇದೇ ವೇಳೆ ಅವರ ಗಮಕದ ಚಮತ್ಕಾರವನ್ನೂ ಕಣ್ತುಂಬಿಕೊಳ್ಳುವ ಅವಕಾಶ ಸಿಕ್ಕಿದ್ದನ್ನು ಸಚಿವ ಡಾ.ನಾರಾಯಣಗೌಡ ಸ್ಮರಿಸಿಕೊಂಡಿದ್ದಾರೆ.