ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ (DK Shivakumar) ಅವರು ಜಿಲ್ಲೆಗೆ ಫೆ.8ರಂದು ಭೇಟಿ ನೀಡಲಿದ್ದು, ಪ್ರಜಾಧ್ವನಿ ಯಾತ್ರೆ (Praja Dhwani) ಪ್ರಯುಕ್ತ ನಡೆಯಲಿರುವ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಎಸ್.ಸುಂದರೇಶ್ (HS Sundresh) ತಿಳಿಸಿದರು.
READ | ಲೋಕಾಯುಕ್ತರಿಗೆ ದೂರು ನೀಡಬೇಕೇ? ನಿಮ್ಮೂರಿಗೆ ಬರಲಿದ್ದಾರೆ ಅಧಿಕಾರಿಗಳು, ಇಲ್ಲಿದೆ ವೇಳಾಪಟ್ಟಿ
ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ನಿಂದ ‘ಪ್ರಜಾಧ್ವನಿ ಯಾತ್ರೆ’ ಆಯೋಜಿಸಿದ್ದು, ರಾಜ್ಯಾದ್ಯಂತ ಉತ್ತಮ ಸ್ಪಂದನೆ ಇದೆ. 8ರಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನೇತೃತ್ವದ ತಂಡ ಜಿಲ್ಲೆಯ ಭದ್ರಾವತಿ ಮತ್ತು ತೀರ್ಥಹಳ್ಳಿಗೆ ಆಗಮಿಸಲಿದೆ ಎಂದರು.
ರಾಜ್ಯದಲ್ಲಿ 140 ಸೀಟುಗಳನ್ನು ಪಡೆದು ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಲಿದೆ. ಜತೆಗೆ, ತೀರ್ಥಹಳ್ಳಿ ವಿಧಾನಸಭೆ ಕ್ಷೇತ್ರದ ಟಿಕೆಟ್ ವಿಚಾರದಲ್ಲಿನ ಗೊಂದಲವೂ ಬಗೆಹರಿದಿದೆ. ಟಿಕೆಟ್ ಯಾರಿಗೇ ಸಿಗಲಿ ಕಿಮ್ಮನೆ ರತ್ನಾಕರ್ ಮತ್ತು ಆರ್.ಎಂ.ಮಂಜುನಾಥ್ ಗೌಡ ಅವರು ಪರಸ್ಪರ ಹೊಂದಿಕೊಂಡು ಪಕ್ಷಕ್ಕಾಗಿ ಕೆಲಸ ಮಾಡಲಿದ್ದಾರೆ.
– ಎಚ್.ಎಸ್.ಸುಂದರೇಶ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ
ಯಾವ್ಯಾವ ಕಾರ್ಯಕ್ರಮಗಳಲ್ಲಿ ಭಾಗಿ?
ಅಂದು ಬೆಳಗ್ಗೆ 11.30ಕ್ಕೆ ಡಿಕೆಶಿ ಅವರು ಭದ್ರಾವತಿಗೆ ಆಗಮಿಸಲಿದ್ದಾರೆ. ಅಲ್ಲಿನ ಕನಕ ಮಂಟಪದಲ್ಲಿ ಬಹಿರಂಗ ಸಭೆ ನಡೆಯಲಿದೆ. ಬಳಿಕ ‘ವಿಐಎಸ್ಎಲ್ ಕಾರ್ಖಾನೆ ಉಳಿಸಿ’ ಹೋರಾಟದಲ್ಲಿ ಮೃತಪಟ್ಟ ಕಾರ್ಮಿಕರ ಮನೆಗಳಿಗೆ ಭೇಟಿ ನೀಡುವರು. ಪ್ರತಿಭಟನಾ ಸ್ಥಳಕ್ಕೂ ಭೇಟಿ ನೀಡಿ ಕಾರ್ಖಾನೆ ಉಳಿಸುವತ್ತ ಕಾರ್ಮಿಕರ ಜತೆ ಮಾತನಾಡಲಿದ್ದಾರೆ ಎಂದರು.
ನಂತರ 4.30 ಗಂಟೆಗೆ ತೀರ್ಥಹಳ್ಳಿಗೆ ಆಗಮಿಸಲಿದ್ದು, ಬಹಿರಂಗ ಸಭೆಯಲ್ಲಿ ಮಾತನಾಡುವರು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವೈಫಲ್ಯವನ್ನು ಜನರಿಗೆ ತಲುಪಿಸುವುದು ಇದರ ಉದ್ದೇಶವಾಗಿದೆ ಎಂದು ತಿಳಿಸಿದರು.
ಪ್ರಮುಖರಾದ ಡಾ. ಶ್ರೀನಿವಾಸ ಕರಿಯಣ್ಣ, ಶಂಕರಘಟ್ಟ ರಮೇಶ್, ಬಲದೇವಕೃಷ್ಣ, ಎಸ್.ಪಿ. ಶೇಷಾದ್ರಿ, ಚಂದ್ರಶೇಖರ್, ಟಿ.ಎನ್. ಶಶಿಧರ್, ಚಂದ್ರಭೂಪಾಲ್, ಗಂಗಾಧರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.