ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಕುಡಿಯಲು ಹಾಗೂ ಖರ್ಚಿಗೆ ಹಣ ಕೊಡದಿದ್ದಕ್ಕೆ ಕೊಲೆ ಮಾಡಿದ ಆರೋಪಿಗಳ ವಿರುದ್ಧ ಆರೋಪಗಳು ದೃಢಪಟ್ಟ ಹಿನ್ನೆಲೆಯಲ್ಲಿ ಅಪರಾಧಿಗೆ ಜೀವಾವಧಿ ಶಿಕ್ಷೆ, ₹10,000 ದಂಡ ವಿಧಿಸಿ ನ್ಯಾಯಾಲಯ ತೀರ್ಪು ನೀಡಿದೆ.
ಶಿವಮೊಗ್ಗದ ಗುತ್ಯಪ್ಪ ಕಾಲೋನಿಯ ಜಯ್ಯಣ್ಣ (42) ಮತ್ತು ಅಶೋಕ ರಸ್ತೆಯ ವಾಸು(42) ಅವರ ವಿರುದ್ಧ ಕಲಂ 302 ಸಹಿತ 34 ಐಪಿಸಿ ಅಡಿಯಲ್ಲಿ ಆರೋಪ ದೃಢಪಟ್ಟ ಹಿನ್ನೆಲೆಯಲ್ಲಿ ಆರೋಪಿತರಿಗೆ ಶಿಕ್ಷೆ ನೀಡಿ ಆದೇಶಿಸಲಾಗಿದೆ.
READ | ಡಿಸಿಸಿ ಬ್ಯಾಂಕ್ ಸಂದರ್ಶನ ದಿನಾಂಕ ಬದಲಾವಣೆ, ಯಾವಾಗ ನಡೆಯಲಿವೆ ಇಂಟರ್ ವ್ಯೂ?
ನಡೆದಿದ್ದೇನು?
2017ರ ಜನವರಿ 23ರಂದು ಬಾಪೂಜಿನಗರದ ರಾಜು(36) ಎಂಬಾತನಿಗೆ ಪರಿಚಯಸ್ಥರಾದ ಜಯ್ಯಣ್ಣ ಮತ್ತು ವಾಸು ಅವರು ಕುಡಿಯಲು ಮತ್ತು ಖರ್ಚಿಗೆ ಹಣ ಕೊಡು ಎಂದು ಕೇಳಿದ್ದು, ರಾಜುವು ಕೊಡುವುದಿಲ್ಲ ಎಂದು ಹೇಳಿದ್ದಾನೆ. ಪರಿಣಾಮ ಜಗಳವಾಗಿದ್ದು, ಈ ದ್ವೇಷದ ಹಿನ್ನೆಲೆಯಲ್ಲಿ ಆರೋಪಿತರಾದ ಜಯ್ಯಣ್ಣ ಮತ್ತು ವಾಸು ಅವರು ಸೇರಿಕೊಂಡು ಹೆವನ್ ಇನ್ ಬಾರ್ ಮುಂಭಾಗ ವಾಸದ ಶೆಡ್ ನಲ್ಲಿ ರಾಜುವಿನ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿರುತ್ತಾರೆಂದು ಮೃತನ ಮಾವ ನೀಡಿದ ದೂರಿನ ಮೇರೆಗೆ ತುಂಗಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಆಗಿನ ತನಿಖಾಧಿಕಾರಿಗಳಾದ ಗ್ರಾಮಾಂತರ ಠಾಣೆಯ ಪಿಐ ಮಹಾಂತೇಶ್ ಬಿ.ಹೋಳಿ ಪ್ರಕರಣದ ತನಿಖೆ ಕೈಗೊಂಡು ಆರೋಪಿತರ ವಿರುದ್ಧ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ದರು.
1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಶಿವಮೊಗ್ಗದಲ್ಲಿ ಪ್ರಕರಣದ ವಿಚಾರಣೆ ನಡೆದು ನ್ಯಾಯಾಧೀಶ ಎಸ್.ಕೆ.ಮಾನು ತೀರ್ಪು ನೀಡಿದ್ದಾರೆ. ಪ್ರಕರಣದಲ್ಲಿ ಸರ್ಕಾರಿ ಅಭಿಯೋಜಕಿ ಮಮತಾ ವಾದ ಮಂಡಿಸಿದ್ದರು.