ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಸೋಗಾನೆ (Sogane) ಗ್ರಾಮದಲ್ಲಿ ನಿರ್ಮಾಣಗೊಂಡಿರುವ ವಿಮಾನ ನಿಲ್ದಾಣ(airport)ದ ಕಾಮಗಾರಿ ಆರಂಭವಾದಾಗಿಂದಲೂ ನಿರಂತರ ಹೆಸರಿನ ವಿಚಾರವಾಗಿ ನಿರಂತರ ಹೋರಾಟಗಳು ನಡೆಯುತ್ತಲೇ ಇವೆ. ಉದ್ಘಾಟನೆ ದಿನಾಂಕ ನಿಗದಿಯಾಗಿದ್ದೇ ಈ ಹೋರಾಟಗಳು ಮತ್ತಷ್ಟು ಚುರುಕು ಪಡೆದಿವೆ.
ಯಾರದ್ದೇನು ಬೇಡಿಕೆ?
ರಾಷ್ಟ್ರೀಯ ಬಸವದಳ ಟ್ರಸ್ಟ್ (Rashtriya basavadal trust)
ವಿಮಾನ ನಿಲ್ದಾಣಕ್ಕೆ 12ನೇ ಶತಮಾನದ ಮಹಾನ್ ಸಂತ, ಶ್ರೇಷ್ಠ ತತ್ವಜ್ಞಾನಿ ಹಾಗೂ ಜಗತ್ತಿನ ಮೊಟ್ಟಮೊದಲ ಸಂಸತ್ತಿನ ಅಧ್ಯಕ್ಷ ಅಲ್ಲಮಪ್ರಭುದೇವರ (allamaprabhu) ಹೆಸರಿಡುವಂತೆ ಮಾಧ್ಯಮಗೋಷ್ಠಿಯಲ್ಲಿ ಮನವಿ ಮಾಡಲಾಗಿದೆ.
ಮಾತನಾಡಿದ ಭದ್ರಾವತಿಯ ಎಚ್. ಎಸ್. ಬಸವರಾಜ್, ’ಅನುಭವ ಮಂಟಪ’ದ (anubhava mantapa) ಮೊದಲ ಅಧ್ಯಕ್ಷರಾಗಿ ಪ್ರಜಾಪ್ರಭುತ್ವ ಮೌಲ್ಯಗಳ ಸಿದ್ಧಾಂತವನ್ನು ಜಗತ್ತಿಗೆ ಪಸರಿಸಿದ ಹಿರಿಮೆ ಮಹಾನ್ ಅನುಭಾವಿ ಅಲ್ಲಮ ಪ್ರಭುದೇವರದ್ದು. ಇಂತಹವರ ಹೆಸರು ಇಡುವುದು ಸೂಕ್ತ ಎಂದರು.
ನಿಲ್ದಾಣಕ್ಕೆ ’ಅಲ್ಲಮ ಪ್ರಭುದೇವರ’ ಹೆಸರಿಡುವುದು ಸರ್ವ ರೀತಿಯಿಂದಲೂ ಸರ್ವೋತ್ತಮ ಆಯ್ಕೆ ಎನಿಸಿದೆ ಎಂದು ಹೇಳಿದರು.
ಟ್ರಸ್ಟ್ ಜಿಲ್ಲಾಧ್ಯಕ್ಷ ರಾಮಪ್ಪ, ಬಾಣೂರು ಹಿರಣ್ಣಯ್ಯ, ಎ ಸಿ ಮೂಲಿಮನಿ, ಬಸವರಾಜಯ್ಯ, ದೇವರಾಜ್, ಚಂದ್ರಪ್ಪ, ಶಿವಕುಮಾರ್ ಇದ್ದರು.
ಶಿವಮೊಗ್ಗ ಬಸವ ಕೇಂದ್ರ (Basava kendra)
ಅಲ್ಲಮ ಪ್ರಭು ದೇವರು ಅಥವಾ 25 ವರ್ಷಕ್ಕಿಂತ ಹೆಚ್ಚು ಕಾಲ ಮಲೆನಾಡಿನಲ್ಲಿ ಮೊಘಲರನ್ನು ಸದೆಬಡಿದು ಸಮರ್ಥ ಆಡಳಿತ ನೀಡಿದ ರಾಣಿ ಚೆನ್ನಮ್ಮ (Rani chennamma) ಅವರ ಹೆಸರನ್ನು ಇಡಲು ಒತ್ತಾಯಿಸಿ ಜಿಲ್ಲಾಧಿಕಾರಿ ಮೂಲಕ ಪ್ರಧಾನ ಮಂತ್ರಿಗೆ ಮನವಿ ಸಲ್ಲಿಸಲಾಯಿತು. ಬಸವಕೇಂದ್ರದ ಅಧ್ಯಕ್ಷ ಬೆನಕಪ್ಪ, ಕಾರ್ಯದರ್ಶಿ ಚಂದ್ರಶೇಖರ್ ತೆಲಗಿಹಾಳ, ವೀರಶೈವ ಮಹಾಸಭಾದ ಜಿಲ್ಲಾಧ್ಯಕ್ಷರಾದ ರುದ್ರಮುನಿ ಸಜ್ಜನ್, ಚಂದ್ರಪ್ಪ, ಪ್ರೊ.ಚಂದ್ರಶೇಖರ್, ಹೆಚ್.ಡಿ.ನಾಗರಾಜ್, ಬಿ.ಜಿ.ಬೆನಕಪ್ಪ ಇದ್ದರು.
READ | ಕರ್ನಾಟಕ ಬಜೆಟ್’ನಲ್ಲಿ ಮಲೆನಾಡಿಗೆ ಭರ್ಜರಿ ಕೊಡುಗೆ, ಶಿವಮೊಗ್ಗ, ಚಿಕ್ಕಮಗಳೂರಿಗೆ ಸಿಕ್ಕಿದ್ದೇನು?
ಆಮ್ ಆದ್ಮಿ ಪಾರ್ಟಿ (aam aadmi party- AAP)
ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಮಾಜಿ ಮುಖ್ಯಮಂತ್ರಿ ಬಿಎಸ್. ಯಡಿಯೂರಪ್ಪ (BS Yediyurappa) ಅವರ ಹೆಸರು ಇಡುವಲ್ಲಿ ಇಡೀ ಬಿಜೆಪಿಯೇ ನಿರ್ಲಕ್ಷ್ಯ ತೋರಿದೆ. ಅವರನ್ನು ಮೂಲೆಗುಂಪು ಮಾಡುವ ಹುನ್ನಾರ ಇದರಲ್ಲಿ ಅಡಗಿದೆ ಎಂದು ಆಮ್ ಆದ್ಮಿ ಪಕ್ಷದ ರಾಜ್ಯ ಕಾರ್ಯದರ್ಶಿ ಕೆ. ದಿವಾಕರ್ ಆರೋಪಿಸಿದರು.
ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣ ನಿರ್ಮಾಣವಾಗಲು ಮಾಜಿ ಸಿಎಂ ಯಡಿಯೂರಪ್ಪ ಅವರೇ ಕಾರಣರಾಗಿದ್ದಾರೆ. ಅವರ ಸತತ ಪರಿಶ್ರಮದಿಂದ ವಿಮಾನ ನಿಲ್ದಾಣ ಈಗ ಉದ್ಘಾಟನೆಗೆ ಸಿದ್ಧವಾಗಿದೆ. ಅವರ ಹೆಸರನ್ನು ವಿಮಾನ ನಿಲ್ದಾಣಕ್ಕೆ ಇಡುವುದು ಸೂಕ್ತವಾಗಿತ್ತು. ಆದರೆ ರಾಜ್ಯ ಬಿಜೆಪಿ ಮುಖಂಡರು ಯಡಿಯೂರಪ್ಪ ಅವರ ಹೆಸರನ್ನು ಕೆಂದ್ರಕ್ಕೆ ಶಿಫಾರಸು ಮಾಡಿಯೇ ಇಲ್ಲ. ಹೋಗಲಿ, ಸಂಪುಟದಲ್ಲೂ ಚರ್ಚಿಸಿಯೂ ಇಲ್ಲ ಎಂದು ಟೀಕಿಸಿದರು.
ಕುವೆಂಪುರವರ ಹೆಸರು ಈಗಾಗಲೇ ಎಲ್ಲ ಕಡೆ ಇದೆ. ಒಂದುವೇಳೆ ಯಡಿಯೂರಪ್ಪ ತಮ್ಮಹೆಸರು ಬೇಡವೇ ಬೇಡ ಎಂದು ಹೇಳಿದರೆ ಕೆಳದಿ ಅರಸರ ಕಾಲದಲ್ಲಿ ಸುಮಾರು 25 ವರ್ಷಗಳ ಕಾಲ ಆಡಳಿತ ನಡೆಸಿ ಬಿದನೂರ(bidanur)ನ್ನು ಉಳಿಸಿ ಇತಿಹಾಸದಲ್ಲಿ ಅತ್ಯಂತ ಹೆಸರು ಮಾಡಿರುವ ಕೆಳದಿ ಚೆನ್ನಮ್ಮ ಹೆಸರು ಇಡಬೇಕು ಎಂದು ಆಗ್ರಹಿಸಿದರು.
ಪ್ರಮುಖರಾದ ಕಿರಣ್, ನಜೀರ್, ಶಿವಕುಮಾರ್, ಸತೀಶ್ ಗೌಡ, ಲಕ್ಷ್ಮೀಶ, ಹರೀಶ್, ಸುರೇಶ್ ಕುಮಾರ್ ಇದ್ದರು.
ಶಾಂತವೇರಿ ಗೋಪಾಲಗೌಡ ಸಮಾಜವಾದಿ ಅಧ್ಯಯನ ಕೇಂದ್ರ
ಯಾವುದೇ ವಿವಾದವನ್ನು ಸೃಷ್ಟಿ ಮಾಡದೆ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ವಿಶ್ವಮಾನವ ಕುವೆಂಪು ಅವರ ಹೆಸರನ್ನು ಇಡಬೇಕು ಎಂದು ಕೇಂದ್ರದ ವ್ಯವಸ್ಥಾಪಕ ಟ್ರಸ್ಟಿ ಕಲ್ಲೂರು ಮೇಘರಾಜ್ (Kallur Megharaj) ಆಗ್ರಹಿಸಿದರು.
ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ಈ ಮುಂಚೆ ಬಿಜೆಪಿಯ ಹಿರಿಯ ಮುಖಂಡ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಹೆಸರನ್ನು ಇಡುವುದಾಗಿ ತಿಳಿದುಬಂದಿತ್ತು. ಆದರೆ ಅವರು ಅದನ್ನು ತಿರಸ್ಕರಿಸಿ ಕುವೆಂಪು ಅವರ ಹೆಸರನ್ನು ಇಡಲು ಹೇಳಿರುವುದನ್ನು ನಮ್ಮ ಸಂಘಟನೆ ಸ್ವಾಗತಿಸುತ್ತದೆ. ಹಾಗಾಗಿ ಒಮ್ಮೆ ಕುವೆಂಪು ಅವರ ಹೆಸರನ್ನು ಇಡಲು ನಿರ್ಧಾರ ಮಾಡಿದ ಮೇಲೆ ಬೇರೆ ಬೇರೆ ಸಂಘಟನೆಗಳು, ಸಮಾಜಗಳು ಬೇರೆ ಹೆಸರನ್ನು ಸೂಚಿಸುವುದು, ವಿವಾದಗಳನ್ನು ಸೃಷ್ಟಿಸುವುದು ಸರಿಯಲ್ಲ ಎಂದರು.
ಕುವೆಂಪು ಈ ಜಿಲ್ಲೆಯ ಹೆಮ್ಮೆ. ರಾಷ್ಟ್ರಕವಿ ನಾಡೋಜ ಪ್ರಶಸ್ತಿ ವಿಜೇತ, ಜೊತೆಗೆ ವಿಶ್ವಮಾನವ ಸಂದೇಶ ಸಾರಿದವರು. ಯಡಿಯೂರಪ್ಪನವರೆ ಇವರ ಹೆಸರನ್ನು ಸೂಚಿಸಿದ್ದಾರೆ. ಇದು ಸರ್ವಸಮ್ಮತ ಕೂಡ. ಹಾಗಾಗಿ ಕುವೆಂಪು ಅವರ ಹೆಸರನ್ನೇ ಅಂತಿಮಗೊಳಿಸಬೇಕು ಬೇರೆ ಹೆಸರನ್ನು ಇಡುವುದಾದರೆ ನಮ್ಮ ವಿರೋಧವಿದೆ ಎಂದರು.
ಪ್ರಮುಖರಾದ ಎಸ್.ವಿ.ರಾಜಮ್ಮ, ಚಾಬುಸಾಬ್, ಬಿ.ಲಿಂಗರಾಜು, ಡಾ.ನೇತ್ರಾವತಿ, ಗೋಪಾಲಕೃಷ್ಣ. ಟಿ.ಬಿ.ಕೃಷ್ಣಪ್ಪ, ಶಂಕ್ರಾನಾಯ್ಕ ಇದ್ದರು.
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ
ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಕೆಳದಿ ಅರಸರ ಅಥವಾ ಜಿಲ್ಲೆಯ ಶರಣರ ಹೆಸರನ್ನು ಇಡಬೇಕು ಎಂದು ಜಿಲ್ಲಾಧ್ಯಕ್ಷ ಅಧ್ಯಕ್ಷ ರುದ್ರಮನಿ ಸಜ್ಜನ್ ಆಗ್ರಹಿಸಿದರು.
ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಯಡಿಯೂರಪ್ಪ ಹೆಸರು ಇಡಬೇಕಿತ್ತು. ಆದರೆ, ಅವರು ಅದಕ್ಕೆ ಒಪ್ಪಿಲ್ಲ. ಆದ್ದರಿಂದ ಜಿಲ್ಲೆಯಲ್ಲಿ ರಾಜ್ಯಭಾರ ಮಾಡಿದ ಕೆಳದಿ ಅರಸರ ಹೆಸರಿಡಬೇಕು ಎಂದು ಹೇಳಿದರು.
ಕೆಳದಿ ಶಿವಪ್ಪನಾಯಕ ಶಿಸ್ತಿಗೆ ಹೆಸರಾದವರು. ಹಲವು ವರ್ಷಗಳ ಕಾಲ ಆಡಳಿತ ನಡೆಸಿದ್ದಾರೆ. ಗೋವಾ ಮತ್ತು ಕೇರಳದವರೆಗೂ ಅವರ ರಾಜ್ಯ ವಿಸ್ತಾರವಾಗಿತ್ತು. ಕಂದಾಯ ವ್ಯವಸ್ಥೆಯನ್ನು ಒಂದು ಶಿಸ್ತಿಗೆ ಒಳಪಡಿಸಿದ ಕೀರ್ತಿ ಅವರದ್ದು. ಆದ್ದರಿಂದ ಅವರ ಹೆಸರನ್ನೇ ವಿಮಾನ ನಿಲ್ದಾಣಕ್ಕೆ ಇಡಬೇಕು ಎಂದರು.
ಆಕಸ್ಮಾತ್ ಶಿವಪ್ಪನಾಯಕ ಹೆಸರಿಡಲು ಆಗದಿದ್ದರೆ ಕೆಳದಿ ಚೆನ್ನಮ್ಮ ಅವರ ಹೆಸರನ್ನಾದರೂ ಇಡಬೇಕು. ಇಲ್ಲವೇ, ಅಕ್ಕಮಹಾದೇವಿ, ಅಲ್ಲಮಪ್ರಭು ಶರಣರ ಪಟ್ಟಿಯಲ್ಲಿ ಆದ್ಯತೆಯ ಸ್ಥಾನ ಪಡೆದಿದ್ದಾರೆ. ಹಾಗಾಗಿ ಅಲ್ಲಮಪ್ರಭು ಅಥವಾ ಅಕ್ಕಮಹಾದೇವಿ ಅವರ ಹೆಸರನ್ನಾದರೂ ಇಡಬೇಕು ಎಂದರು.
ಪ್ರಮುಖರಾದ ಸಿ.ಮಹೇಶಮೂರ್ತಿ, ಆನಂದಮೂರ್ತಿ, ಪಾಲಾಕ್ಷಪ್ಪ ಇದ್ದರು.