ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಶಿರಾಳಕೊಪ್ಪ (shiralkoppa) ಕಣಸೋಗಿ ಗ್ರಾಮದ ಬಂಗಾರಪ್ಪ(40) ಎಂಬುವವರ ಕೊಲೆ ಪ್ರಕರಣದಲ್ಲಿ ಐದು ಜನರಿಗೆ ಶಿಕ್ಷೆ ವಿಧಿಸಿ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ನ್ಯಾಯಾಧೀಶ ಕೆ.ಎಸ್. ಮಾನು ತೀರ್ಪು ನೀಡಿದ್ದಾರೆ.
ಜಮೀನಿನ ವಿಚಾರವಾಗಿ ನಡೆದ ಜಗಳ
ಜಮೀನಿನ ವಿಚಾರವಾಗಿ ಜಗಳವಿದ್ದು, ಈ ದ್ವೇಷದ ಹಿನ್ನೆಲೆಯಲ್ಲಿ 2019ರಲ್ಲಿ ಮಂಜಪ್ಪ, ನೀಲಮ್ಮ, ಮಂಜು, ರವಿ ಹಾಗೂ ರೂಪಾ ಅವರು ಬಂಗಾರಪ್ಪನೊಂದಿಗೆ ಜಗಳ ತೆಗೆದು ಅವಾಚ್ಯ ಶಬ್ದಗಳಿಂದ ಬೈದು ಮಂಜು ಅಲಿಯಾಸ್ ಮಂಜುನಾಥ್ ಎಂಬಾತ ಕಬ್ಬಿಣದ ರಾಡಿನಿಂದ ಬಂಗಾರಪ್ಪನ ತಲೆಗೆ ಬಲವಾಗಿ ಹೊಡೆದು ರಕ್ತಗಾಯ ಪಡಿಸಿರುತ್ತಾನೆ. ಉಳಿದವರೂ ಸಹ ತಮ್ಮ ಕೈಗಳಿಂದ ಹಲ್ಲೆ ಮಾಡಿ ಹೋಗಿರುತ್ತಾರೆ. ನಂತರ ಬಂಗಾರಪ್ಪನನ್ನು ಚಿಕಿತ್ಸೆಗೆಂದು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಮಾರಣಾಂತಿಕ ಹಲ್ಲೆಯಿಂದ ಅವರು ಚೇತರಿಸಿಕೊಳ್ಳಲಾಗದೇ ಆಸ್ಪತ್ರೆಯಲ್ಲಿಯೇ ಮೃತ ಪಟ್ಟಿದ್ದರು. ಮೃತನ ಪತ್ನಿಯು ನೀಡಿದ ದೂರಿನ ಮೇರೆಗೆ ಶಿರಾಳಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.
READ | ರೈಲ್ವೆ ಪ್ರಯಾಣಿಕರ ಗಮನಕ್ಕೆ, ಕೆಲವು ರೈಲ್ವೆ ಸೇವೆಗಳಲ್ಲಿ ಬದಲಾವಣೆ,ಕಾರಣವೇನು?
ಯಾರಿಗೆಷ್ಟು ಶಿಕ್ಷೆ?
ಪ್ರಕರಣದ 1ನೇ ಆರೋಪಿಯಾದ ಸೊರಬ ತಾಲೂಕು ಕೊಲಗುಣಸೇ ಗ್ರಾಮದ ಮಂಜು ಅಲಿಯಾಸ್ ಮಂಜುನಾಥ್ (25) ವಿರುದ್ಧ ಕೊಲೆ ಆರೋಪ ದೃಢಪಟ್ಟ ಹಿನ್ನೆಲೆಯಲ್ಲಿ ಜೀವಾವಧಿ ಶಿಕ್ಷೆ ಮತ್ತು ₹1,40,000 ದಂಡ, ದಂಡ ಕಟ್ಟಲು ವಿಫಲನಾದಲ್ಲಿ 6 ತಿಂಗಳು ಸಾಧಾ ಕಾರಾವಾಸ ಶಿಕ್ಷೆ ವಿಧಿಸಲು ಆದೇಶಿಸಲಾಗಿದೆ. ಇನ್ನುಳಿದ ಆರೋಪಿತರಾದ ಶಿಕಾರಿಪುರ ತಾಲೂಕು ಕಣಸೋಗಿಯ ನೀಲಮ್ಮ(45), ಮಂಜಪ್ಪ(51), ರವಿ(21), ರೂಪ (22) ಅವರ ವಿರುದ್ಧ ಹಲ್ಲೆ ಮಾಡಿ, ಅವಾಚ್ಯವಾಗಿ ಬೈದಿರುವ ಆರೋಪ ದೃಢಪಟ್ಟ ಹಿನ್ನೆಲೆಯಲ್ಲಿ ತಲಾ 1 ತಿಂಗಳು ಸಾಧಾ ಕಾರಾವಾಸ ಶಿಕ್ಷೆ ಮತ್ತು ₹30,000 ದಂಡ ವಿಧಿಸಿ ಆದೇಶಿಸಲಾಗಿದೆ. ಪ್ರಕರಣದಲ್ಲಿ ಸರ್ಕಾರಿ ಅಭಿಯೋಜಕ ಶಾಂತರಾಜ್ ವಾದ ಮಂಡಿಸಿದ್ದರು.
Job Interview | ಮಾ.20ರಂದು ಶಿವಮೊಗ್ಗದಲ್ಲಿ ನಡೆಯಲಿದೆ ನೇರ ಸಂದರ್ಶನ, ಯಾರೆಲ್ಲ ಭಾಗವಹಿಸಲು ಅವಕಾಶ?