ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಜಿಲ್ಲೆಯ ಭದ್ರಾವತಿ ತಾಲೂಕಿನ ಮೂವರಿಗೆ ಗಡಿಪಾರು ಮಾಡಿ ಆದೇಶಿಸಲಾಗಿದ್ದು, ಈ ಮೂವರನ್ನು ಒಂದು ವರ್ಷಗಳ ಕಾಲ ನೆರೆಯ ಚಿಕ್ಕಮಗಳೂರು ಜಿಲ್ಲೆಗೆ ಗಡಿಪಾರು ಮಾಡಿ ಆದೇಶಿಸಲಾಗಿದೆ.
READ | ಮೆಗ್ಗಾನ್ ಆಸ್ಪತ್ರೆ, ದುರ್ಗಿಗುಡಿ ಸುತ್ತ ಪೊಲೀಸರ ದಿಢೀರ್ ದಾಳಿ, ಕಾರಣವೇನು?
ಯಾರೆಲ ಗಡಿಪಾರು, ಕಾರಣವೇನು?
ಭದ್ರಾವತಿ ತಾಲೂಕಿನ ಸೀಗೆಬಾಗಿ ಗ್ರಾಮದ ನಿವಾಸಿಗಳಾದ ಶೇಕ್ ಹುಸೇನ್(39), ತನ್ವೀರ್ ಪಾಶಾ(33) ಮತ್ತು ಬಂಡಾರಳ್ಳಿಯ ಧನುಶ್ ಅಲಿಯಾಸ್ ಧನು(23) ಗಡಿಪಾರು ಶಿಕ್ಷೆಗೆ ಒಳಪಟ್ಟವರು.
ಶೇಕ್ ಹುಸೇನ್ ಮತ್ತು ತನ್ವೀರ್ ಸಮಾಜಕ್ಕೆ ಧಕ್ಕೆಯಾಗುವಂತಹ ಹಾಗೂ ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡುವ ಕೃತ್ಯಗಳಾದ ಓಸಿ/ ಮಟಕಾ ಜೂಜಾಟ ಆಡುವ ಮತ್ತು ಆಡಿಸುವ ಪ್ರವೃತ್ತಿ ಹೊಂದಿದ್ದರು. ರೌಡಿ ಚಟುವಟಿಕೆಯಲ್ಲೂ ಸಹ ಭಾಗಿಯಾಗಿರುತ್ತಾರೆ. ಧನುಶ್ ಸಾರ್ವಜನಿಕರ ಮೇಲೆ ಹಲ್ಲೆ ಮಾಡಿ ಕೊಲೆಗೆ ಯತ್ನ ಮಾಡುವುದು ಮತ್ತು ಸಾರ್ವಜನಿಕವಾಗಿ ಅಪಾಯಕಾರಿ ಆಯುಧಗಳನ್ನು ತೋರಿಸುತ್ತಾ ಜನರಲ್ಲಿ ಭೀತಿಯನ್ನುಂಟು ಮಾಡುವ ಮೂಲಕ ಸಾರ್ವಜನಿಕರ ಆಸ್ತಿ ಮತ್ತು ಜೀವ ಹಾನಿಪಡಿಸುವ ಅಪಾಯವಿದ್ದು, ಕೃತ್ಯಗಳನ್ನು ಯಾವುದೇ ಕಾನೂನಿನ ಭಯವಿಲ್ಲದೇ ಮುಂದುವರೆಸಿಕೊಂಡು ಬಂದಿರುತ್ತಾರೆ.
ಠಾಣೆಗಳಲ್ಲಿ ಇವರ ವಿರುದ್ಧ ಹಲವು ಕೇಸ್
ಶೇಕ್ ಹುಸೇನ್ ವಿರುದ್ಧ ಒಟ್ಟು 8 ಪ್ರಕರಣಗಳು ದಾಖಲಾಗಿದ್ದು, ಭದ್ರಾವತಿ ಹಳೆನಗರ ಪೊಲೀಸ್ ಠಾಣೆಯಲ್ಲಿ ರೌಡಿ ಹಾಳೆಯನ್ನು (ರೌಡಿಶೀಟರ್) ತೆರೆಯಲಾಗಿರುತ್ತದೆ. ತನ್ವಿರ್ ಈತನ ವಿರುದ್ಧ ಒಟ್ಟು 16 ಪ್ರಕರಣಗಳು ದಾಖಲಾಗಿದ್ದು, ಭದ್ರಾವತಿ ಹಳೆನಗರ ಪೊಲೀಸ್ ಠಾಣೆಯಲ್ಲಿ ರೌಡಿ ಹಾಳೆಯನ್ನು ತೆರೆಯಲಾಗಿರುತ್ತದೆ. ಧನು ವಿರುದ್ಧ ಒಟ್ಟು 3 ಪ್ರಕರಣಗಳು ದಾಖಲಾಗಿದ್ದು, ಭದ್ರಾವತಿ ನ್ಯೂ ಟೌನ್ ಪೊಲೀಸ್ ಠಾಣೆಯಲ್ಲಿ ರೌಡಿ ಹಾಳೆಯನ್ನು ತೆರೆಯಲಾಗಿರುತ್ತದೆ.
ನಡವಳಿಕೆಯಲ್ಲಿ ಕಾಣದ ಸುಧಾರಣೆ
ವಿವಿಧ ಪ್ರಕರಣಗಳನ್ನು ದಾಖಲಿಸಿದರೂ ತಮ್ಮ ನಡವಳಿಕೆಯಲ್ಲಿ ಸುಧಾರಣೆ ಮಾಡಿಕೊಳ್ಳದೇ ತಮ್ಮ ಚಟುವಟಿಕೆಯನ್ನು ಮುಂದುವರಿಸಿಕೊಂಡು ಬಂದಿರುವುದರಿಂದ, ಕಾನೂನು ಬಾಹಿರ ಚಟುವಟಿಕೆಗಳನ್ನು ತಡೆಯುವ ಸಲುವಾಗಿ ಶೇಕ್ ಹುಸೇನ್, ತನ್ವಿರ್ ಪಾಶಾ ಮತ್ತು ಧನುಶ್ ಅವರುಗಳನ್ನು ಗಡಿಪಾರು ಮಾಡುವಂತೆ ಭದ್ರಾವತಿ ನಗರ ವೃತ್ತದ ಪೊಲೀಸ್ ವೃತ್ತ ನಿರೀಕ್ಷಕರು ನೀಡಿದ ವರದಿಯ ಮೇರೆಗೆ ಶಿವಮೊಗ್ಗದ ಉಪ ವಿಭಾಗೀಯ ದಂಡಾಧಿಕಾರಿ ಮತ್ತು ಉಪ ವಿಭಾಗಾಧಿಕಾರಿಗಳು, ಮೂರು ಜನರನ್ನು 13-03-2023 ರಿಂದ 13-03-2024 ರ ವರೆಗೆ ಒಂದು ವರ್ಷದ ಅವಧಿಗೆ ಚಿಕ್ಕಮಗಳೂರು ಜಿಲ್ಲೆಗೆ ಗಡಿಪಾರು ಮಾಡಿ ಆದೇಶಿಸಿರುತ್ತಾರೆ.
Deportation | ಇಬ್ಬರನ್ನು ಗಡಿಪಾರು ಮಾಡಿ ಆದೇಶ, ಒಬ್ಬೊಬ್ಬರ ಮೇಲಿವೆ ಹತ್ತಾರು ಕೇಸ್