ಸುದ್ದಿ ಕಣಜ.ಕಾಂ ತೀರ್ಥಹಳ್ಳಿ
THIRTHAHALLI: ಪಟ್ಟಣದ ಸಂತೆ ಮೈದಾನದಲ್ಲಿ ಮಾ.23ರಂದು ನಡೆದಿದ್ದ ಕೊಲೆ ಪ್ರಕರಣದ ಆರೋಪಿಯನ್ನು ಎರಡೇ ದಿನಗಳಲ್ಲಿ ಬೇಧಿಸಲು ಪೊಲೀಸರು ಸಫಲರಾಗಿದ್ದಾರೆ.
ಗದಗ ಜಿಲ್ಲೆ ನರಗುಂದ ತಾಲೂಕು ಅರ್ಬನ್ ಓಣಿ ಗಲ್ಲಿ ನಿವಾಸಿ ಪ್ರಕಾಶ್ ಜಂಬಗಿ ಅಲಿಯಾಸ್ ಫಕೀರಪ್ಪ(24) ಎಂಬಾತನನ್ನು ಮಾ.26ರಂದು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.
READ | ಬಿ.ಎಸ್.ಯಡಿಯೂರಪ್ಪ ಅವರ ಮನೆಯ ಮೇಲೆೆ ಕಲ್ಲು ತೂರಾಟ, ಇದುವರೆಗೆ ದಾಖಲಾದ ಪ್ರಕರಣಗಳೆಷ್ಟು?
ಆ ರಾತ್ರಿ ನಡೆದಿದ್ದೇನು?
ತೀರ್ಥಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಸಂತೆ ಮೈದಾನದಲ್ಲಿ ಮಲಗಿದ್ದ ಹೊಸನಗರ ತಾಲೂಕು ರಾವೆ ಗ್ರಾಮದ ನಿವಾಸಿ ಪೂರ್ಣೇಶ್ (39) ಈತನ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿರುತ್ತಾರೆಂದು ಮೃತನ ಸಹೋದರ ಪ್ರಕಾಶ್ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
ವಿಚಾರಣೆ ವೇಳೆ ಗೊತ್ತಾಯ್ತು ಕಾರಣ
ಪ್ರಕರಣದ ಆರೋಪಿತರ ಪತ್ತೆಗಾಗಿ ಎಸ್.ಪಿ. ಮಿಥುನ್ ಕುಮಾರ್ ಮತ್ತು ಹೆಚ್ಚುವರಿ ಎಸ್.ಪಿ ಅನಿಲ್ ಕುಮಾರ್ ಭೂಮರೆಡ್ಡಿ ಮಾರ್ಗದರ್ಶನದಲ್ಲಿ ತೀರ್ಥಹಳ್ಳಿ ಡಿವೈಎಸ್.ಪಿ ಗಜಾನನ ವಾಮನ ಸುತಾರ ಮೇಲ್ವಿಚಾರಣೆಯಲ್ಲಿ ತೀರ್ಥಹಳ್ಳಿ ಠಾಣೆ ಪಿಐ ಜೆ.ಅಶ್ವತ್ಥ ಗೌಡ, ಪಿಎಸ್.ಐ ಗಾದಿಲಿಂಗಪ್ಪ, ಸಿಬ್ಬಂದಿ ಸುಧಾಕರ್, ಪರಮೇಶ್ವರ ನಾಯ್ಕ, ದಿವಾಕರ, ದೀಪಕ್, ರವಿ, ಅವಿನಾಶ್ ಅವರನ್ನು ಒಳಗೊಂಡ ತಂಡ ರಚಿಸಲಾಗಿತ್ತು.
ಆರೋಪಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ “ಪೂರ್ಣೇಶ್ ಮತ್ತು ಆರೋಪಿ ಪ್ರಕಾಶ ಜಂಬಗಿ ಇಬ್ಬರೂ ಮದ್ಯಪಾನ ಮಾಡಿದ್ದು, ಕುಡಿದ ಅಮಲಿನಲ್ಲಿ ಪೂರ್ಣೇಶನು ಆರೋಪಿ ಪ್ರಕಾಶ್ ಜಂಬಗಿಗೆ ಬೈದು ಜಗಳ ತೆಗೆದಿದ್ದು, ಆಗ ಆರೋಪಿಯು ಸಿಟ್ಟಿನಿಂದ ಪೂರ್ಣೇಶನ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿರುವುದು ಈವರೆಗಿನ ತನಿಖೆಯಿಂದ ತಿಳಿದು ಬಂದಿರುತ್ತದೆ” ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣದ ಆರೋಪಿಯನ್ನು ತ್ವರಿತವಾಗಿ ಪತ್ತೆ ಹಚ್ಚಿ ಉತ್ತಮ ಕರ್ತವ್ಯ ನಿರ್ವಹಿಸಿದ ತನಿಖಾ ತಂಡಕ್ಕೆ ಪೊಲೀಸ್ ಅಧೀಕ್ಷಕರು ಪ್ರಶಂಸಿಸಿ ಅಭಿನಂದಿಸಿದ್ದಾರೆ.