ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಜನರಿಗೆ ಒದಗಿಸುತ್ತಿರುವ ಶುದ್ಧ ಕುಡಿಯುವ ನೀರಿನ ಗುಣಮಟ್ಟವನ್ನು (drinking water quality test) ಪರೀಕ್ಷಿಸಿ, ಪೂರೈಸಲು ಕ್ರಮ ಕೈಗೊಳ್ಳುವಂತೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸ್ನೇಹಲ್ ಸುಧಾಕರ್ ಲೋಖಂಡೆ (Snehal sudhakar lokhande) ಅವರು ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆಯ (Department of Rural Drinking Water Supply) ಅಭಿಯಂತರರಿಗೆ ಸೂಚಿಸಿದರು.
READ | ಶಿವಮೊಗ್ಗದಲ್ಲಿ ಪಾರ್ಕಿಂಗ್ ವ್ಯವಸ್ಥೆಗೆ ಮೇಜರ್ ಸರ್ಜರಿ, ಏನೆಲ್ಲ ಬದಲಾವಣೆ, ಇಲ್ಲಿದೆ ಕಂಪ್ಲೀಟ್ ರಿಪೋರ್ಟ್
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾ ವ್ಯಾಪ್ತಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದಡಿ ಜನವಸತಿಗಳಿಗೆ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಹಾಗೂ ಜಿಲ್ಲಾ ನೀರು ಮತ್ತು ನೈರ್ಮಲ್ಯ ಸಮಿತಿ ರಚಿಸುವ ಸಲುವಾಗಿ ಏರ್ಪಡಿಸಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪ್ರಸ್ತುತ ಈಗಾಗಲೇ ಸರ್ಕಾರದಿಂದ ಅನುಮೋದನೆಗೊಂಡಿರುವ ಕಾಮಗಾರಿಗಳನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸುವಂತೆ ಸೂಚಿಸಿದ ಅವರು, ‘ಬರುವ ಬೇಸಿಗೆಯಲ್ಲಿ ಗ್ರಾಮೀಣ ಜನರ ಬೇಡಿಕೆಗನುಸಾರವಾಗಿ ಕುಡಿಯುವ ನೀರನ್ನು ಒದಗಿಸಬೇಕಾದ ಅನಿವಾರ್ಯತೆ ಎದುರಾಗಬಹುದಾದ ಸಂದರ್ಭಗಳಲ್ಲಿ ನೀರನ್ನು ಪೂರೈಸುವ ಅಗತ್ಯಗಳಿಗೆ ಹಣಕಾಸನ್ನು ಕಾಯ್ದಿರಿಸಿಕೊಂಡು ಯೋಜನೆಗಳನ್ನು ರೂಪಿಸಿ, ಸಮಿತಿ ಸಭೆಯಲ್ಲಿ ಅನುಮೋದನೆ ಪಡೆದು, ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತರಬೇಕು’ ಎಂದು ಸಲಹೆ ನೀಡಿದರು.
ನೀರಿನಲ್ಲಿ ಫ್ಲೋರೈಡ್ನ ಅಂಶ ಹೆಚ್ಚಳದಿಂದ ಅನೀಮಿಯದಂತಹ ರೋಗಗಳು ಉಲ್ಬಣಗೊಳ್ಳುವ ಸಾದ್ಯತೆ ಹೆಚ್ಚಾಗಿದೆ. ಆದ್ದರಿಂದ ಶುದ್ಧೀಕರಿಸಿ, ಯೋಗ್ಯವಾದ ನೀರನ್ನು ಜನರು ಬಳಸಬೇಕು.
–ಡಾ.ನಾಗರಾಜ್ ನಾಯ್ಕ್, ಆರ್.ಸಿ.ಎಚ್.
ಜಿಪಂ ಸಿಇಒ ನೀಡಿದ ಸೂಚನೆಗಳಿವು
- ಯಾವುದೇ ಬೇಡಿಕೆಗಳಿಲ್ಲದೆ ಅನಗತ್ಯವಾಗಿ ಕೊಳವೆ ಬಾವಿ ಕೊರೆಯುವುದು, ನೀರಿನ ಕೊಳವೆಗಳನ್ನು ಅಳವಡಿಸುವುದು ಮತ್ತಿತರ ವಿಷಯಗಳಿಗೆ ಹಣ ವ್ಯಯ ಮಾಡದಂತೆ ಸೂಚಿಸಿದ ಅವರು, ಸ್ಥಳೀಯ ಜನರ ಅಭಿಪ್ರಾಯ ಸಂಗ್ರಹಿಸಿ, ಅಗತ್ಯತೆಗನುಸಾರವಾಗಿ ಯೋಜನೆಗಳನ್ನು ಕೈಗೊಳ್ಳಬೇಕು.
- ಪ್ರತಿವರ್ಷ ಕೆಲವು ಆಯ್ದ ಗ್ರಾಮೀಣ ಪ್ರದೇಶಗಳಲ್ಲಿ ಡಿಸೆಂಬರ್ ನಂತರದ ತಿಂಗಳುಗಳಲ್ಲಿ ನೀರಿನ ಕೊರತೆ ಉಲ್ಬಣಗೊಳ್ಳುತ್ತದೆ. ಅಂತಹ ಸಂದರ್ಭಗಳಲ್ಲಿ ಸಾರ್ವಜನಿಕರಿಂದ ದೂರುಗಳು ಬಾರದಂತೆ ಗಮನಹರಿಸಬೇಕು. ಬೇಸಿಗೆಯನ್ನು ಸಕಾಲದಲ್ಲಿ ಶುದ್ಧ ಕುಡಿಯುವ ನೀರನ್ನು ಒದಗಿಸಲು ಬದ್ಧರಾಗಬೇಕು.
- ಶಿವಮೊಗ್ಗ ಸಮೀಪದ ಬುಳ್ಳಾಪುರದಲ್ಲಿ ಸರಬರಾಜಾಗುತ್ತಿರುವ ನೀರು ಕಲುಷಿತವಾಗಿದೆ. ಪ್ಲೋರೈಡ್ (fluoride) ಯುಕ್ತವಾಗಿದೆ ಹಾಗೂ ದುರ್ವಾಸನೆ (stench)ಯಿಂದ ಕೂಡಿದೆ. ಇಂತಹ ನೀರು ಕುಡಿಯಲು ಯೋಗ್ಯವಲ್ಲದ ಕಾರಣ ಅದನ್ನು ನಿಯಮಾನುಸಾರ ಸಂಸ್ಕರಿಸಿ, ಶುದ್ಧ ನೀರನ್ನು ಒದಗಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು.
- ಸ್ವಚ್ಛ ಭಾರತ್ ಮಿಷನ್ (swacha bharat mission) ಯೋಜನೆಯಡಿ ಜಿಲ್ಲೆಯ ಅಂತರಗಂಗೆ, ತೊಗರ್ಸಿ, ಆವಿನಹಳ್ಳಿ ಮತ್ತು ಹುಂಚದಕಟ್ಟೆ ಗ್ರಾಮಗಳಲ್ಲಿ ಮಲತ್ಯಾಜ್ಯ ನಿರ್ವಹಣಾ ಘಟಕಗಳನ್ನು ಸ್ಥಾಪಿಸಲು ಕ್ರಿಯಾಯೋಜನೆ ರೂಪಿಸಿ, ಅಂದಾಜುಪಟ್ಟಿಯನ್ನು ಸರ್ಕಾರಕ್ಕೆ ಸಲ್ಲಿಸಬೇಕು.
ರೂಪಿಸಬೇಕಿದೆ ಕ್ರೀಯಾಯೋಜನೆ
ಜಿಲ್ಲೆಯ ತೊಗರ್ಸಿ, ಕೋಣಂದೂರು, ಹೆಚ್ಚೆ, ರಿಪ್ಪನ್ಪೇಟೆ ಮತ್ತು ಹರಮಘಟ್ಟ ಗ್ರಾಮ ಪಂಚಾಯಿತಿಗಳಲ್ಲಿ ಸಮಗ್ರ ತ್ಯಾಜ್ಯ ನಿರ್ವಹಣಾ ಘಟಕಗಳನ್ನು ಆರಂಭಿಸಲು ಕ್ರಿಯಾಯೋಜನೆ ರೂಪಿಸಬೇಕಿದೆ ಎಂದು ಪಂ.ರಾ.ಇಂ. ಸಾಗರ ವಿಭಾಗಕ್ಕೆ ಸಲ್ಲಿಸುವಂತೆ ಅವರು ಸಲಹೆ ನೀಡಿದರು.
READ | ಶಿವಮೊಗ್ಗದ ಹಲವೆಡೆ ಎರಡು ದಿನ ಕರೆಂಟ್ ಇರಲ್ಲ, ಎಲ್ಲೆಲ್ಲಿ ವಿದ್ಯುತ್ ವ್ಯತ್ಯಯ?
ಗೋಭರ್ದನ್ ಘಟಕಕ್ಕೆ ₹50 ಲಕ್ಷ
ಕೇಂದ್ರ ಪುರಸ್ಕೃತ ಗೋಭರ್ದನ್ ಘಟಕ ಅನುಷ್ಠಾನಗೊಳಿಸಲು ಎರಡು ಯೋಜನೆಗಳಿಗೆ ಅನುಮೋದನೆಯಾಗಿದ್ದು, ಒಂದು ಘಟಕಕ್ಕೆ ₹50 ಲಕ್ಷ ಬಿಡುಗಡೆಯಾಗಿದೆ. ಇನ್ನೂ ಎರಡು ಘಟಕಗಳಿಗೆ ಅನುಮೋದನೆ ಪಡೆಯಬೇಕಾಗಿದ್ದು, ಆ ಪೈಕಿ ಬೀರನಕೆರೆಯ ಮಠದಲ್ಲಿ ಹಸುಗಳಿರುವ ಬಗ್ಗೆ ಮಾಹಿತಿ ಇದೆ. ಆದರೆ, ಶಿಕಾರಿಪುರ ತಾಲೂಕಿನ ಕಡೇನಂದಿಹಳ್ಳಿಯ ಮಠದಲ್ಲಿ ಗೋವುಗಳಲ್ಲಿದಿರುವುದು ಕಂಡುಬಂದಿದೆ. ಆದ್ದರಿಂದ ಅಭಿಯಂತರ ಸಂಗಪ್ಪ ಅವರು ಸೇರಿದಂತೆ ಒಂದು ತಂಡದ ಸದಸ್ಯರು ಸ್ಥಳಕ್ಕೆ ಖುದ್ದು ಭೇಟಿ ನೀಡಿ ಪರಿಶೀಲಿಸಿ, ಯೋಜನೆಯ ಅನುಷ್ಠಾನಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಜಿಪಂ ಸಿಇಓ ಸೂಚಿಸಿದರು.
7,500 ವೈಯಕ್ತಿಕ ಶೌಚಾಲಯಗಳ ಗುರಿ
ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯಲ್ಲಿ 7,500 ವೈಯಕ್ತಿಕ ಶೌಚಾಲಯ ನಿರ್ಮಾಣದ ಗುರಿ ಹೊಂದಲಾಗಿದ್ದು, ಈವರೆಗೆ ಸಿಟಿಜೆನ್ ಪೋರ್ಟಲ್ ಮೂಲಕ ಇಂಡೀಕರಿಸಲಾದ 6,326 ಫಲಾನುಭವಿಗಳ ಪ್ರಸ್ತಾವನೆಗೆ ಸರ್ಕಾರದ ಅನುಮೋದನೆ ದೊರೆತಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಸೊರಬ ಮತ್ತು ಶಿಕಾರಿಪುರ ತಾಲೂಕಿನಲ್ಲಿ ಜನಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುವಂತೆ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿಗಳಿಗೆ ಸೂಚಿಸಿದರು.
ತುಂಗಾನದಿ ನೀರಲ್ಲಿ ಅಲ್ಯುಮಿನಿಯಮ್
ತುಂಗಾನದಿಯ ನೀರಿನಲ್ಲಿ ಅಲ್ಯುಮಿನಿಯಮ್ (Aluminum in tunga river water) ಅಂಶ ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿರುವುದನ್ನು ಕೆಲವು ದೈನಿಕಗಳಲ್ಲಿ ಬಿತ್ತರಗೊಂಡಿದೆ. ಆದ್ದರಿಂದ ಜಿಲ್ಲೆಯಲ್ಲಿ ಪ್ರಸ್ತುತ ಪರೀಕ್ಷಿಸಲಾಗುತ್ತಿರುವ ನೀರಿನಲ್ಲಿಯೂ ಅಲ್ಯುಮಿನಿಯಂ ಅಂಶ ಇರುವ ಬಗ್ಗೆ ಪರೀಕ್ಷಿಸಬೇಕು. ಅದಕ್ಕಾಗಿ ಅಗತ್ಯವಿರುವ ರಾಸಾಯಿನಿಕ ಹಾಗೂ ಯಂತ್ರಗಳನ್ನು ಖರೀದಿಸುವಂತೆ ಸೂಚಿಸಿದರು.
ಸಭೆಯಲ್ಲಿ ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆಯ ಅಭಿಯಂತರ ರಾಜೇಂದ್ರ ಪ್ರಸಾದ್, ಜಯಲಕ್ಷ್ಮಮ್ಮ, ಪೂರ್ಣಿಮಾ, ಸಂಗಪ್ಪ, ಮತ್ತಿತರರು ಉಪಸ್ಥಿತರಿದ್ದರು.
Smart Traffic | ಟ್ರಾಫಿಕ್ ನಿಯಮ ಉಲ್ಲಂಘಿಸುವ ಮುನ್ನ ಎಚ್ಚರ, ಮನೆಗೆ ಬರಲಿದೆ ದಂಡದ ನೋಟಿಸ್, ಯಾವಾಗಿಂದ ಅನ್ವಯ?