ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಹಲವು ಚೊಚ್ಚಲುಗಳ ತವರೂರು ಶಿವಮೊಗ್ಗ. ಇಲ್ಲಿ ಜನ್ಮ ತಳೆದ ಸ್ವಾತಂತ್ರ್ಯ ಸಂಗ್ರಾಮ ಬ್ರಿಟಿಷರ ಮೈನಡುಗುವಂತೆ ಮಾಡಿತ್ತು ಎಂದರೆ ನಂಬಲೇಬೇಕು. ಈ ಕುರಿತು ತಿಳಿದುಕೊಳ್ಳೋಣ.
ಸ್ವಾತಂತ್ರ್ಯ ಚಳವಳಿಯಲ್ಲಿ 726 ಜನ ಭಾಗಿ
ಸ್ವಾತಂತ್ರ್ಯ ಚಳವಳಿಯ ಸಾಗರಕ್ಕೆ ಹಲವು ಹಳ್ಳಿ, ಊರುಗಳು ಕೆರೆ, ನದಿಗಳಂತೆ ಸೇರಿದ್ದವು. ಜಿಲ್ಲೆಯಿಂದ ಸುಮಾರು 40 ಮಹಿಳೆಯರೂ ಸೇರಿ 726ಕ್ಕೂ ಅಧಿಕ ಜನ ಭಾಗವಹಿಸಿದ್ದು ವಿಶೇಷ. ಇದರಲ್ಲಿ ಬ್ರಿಟಿಷರಿಂದ ಬಂಧನಕ್ಕೆ ಒಳಗಾದ, ಜೀವಾವಧಿ, ಗಲ್ಲು ಶಿಕ್ಷೆಗೆ ಒಳಪಟ್ಟವರೂ ಇದ್ದಾರೆ.
ಸಾಮ್ರಾಜ್ಯಶಾಹಿಯನ್ನೇ ಅಲುಗಾಡಿಸಿದ ‘ಈಸೂರು ದಂಗೆ’
ಅದು 1942ರ ಘಟ್ಟ. ಆಗ ಮಹಾತ್ಮ ಗಾಂಧೀಜಿ ಅವರು ಕ್ವಿಟ್ ಇಂಡಿಯಾ ಚಳವಳಿಗೆ ಕರೆ ನೀಡಿದ್ದರು. ಗಾಂಧೀಜಿ ಬಾಯಿಯಿಂದ ಹೊರಟ ಆ ಮಾತು ದೇಶದಲ್ಲೇ ಸಂಚಲನವನ್ನು ಮೂಡಿಸಿತ್ತು. ಆಗಿನ ಮೈಸೂರು ಸಂಸ್ಥಾನಕ್ಕೆ ಒಳಪಟ್ಟ ಶಿಕಾರಿಪುರದ ಈಸೂರು ಗ್ರಾಮ ಇತಿಹಾಸದಲ್ಲಿ ಅಚ್ಚಳಿಯದೇ ಉಳಿಯುವಂತೆ ಮಾಡಿತು. “ಏಸೂರು ಕೊಟ್ಟರೂ ಈಸೂರು ಬಿಡೆವು” ಘೋಷಣೆ ಸಣ್ಣ ಹಳ್ಳಿಯಲ್ಲಿ ಮೊಳಗಿದರೂ ಅದು ಇಡೀ ಸಾಮ್ರಾಜ್ಯಶಾಹಿಯನ್ನೇ ಅಲುಗಾಡಿಸಿತ್ತು. ಆ ರೋಷಾಗ್ನಿ ಹತ್ತಿಕ್ಕಲು ಗ್ರಾಮದೊಳಗೆ ನುಗ್ಗಿದ್ದ ಅಮಲ್ದಾರ್ ಮತ್ತು ಪೊಲೀಸರು ಪ್ರಾಣ ಕಳೆದುಕೊಂಡರು. ಈಸೂರು ಗ್ರಾಮದ ಜನ 1942 ಸೆಪ್ಟೆಂಬರ್ 27ರಂದು ಈಸೂರಿನ ವೀರಭದ್ರೇಶ್ವರ ದೇವಸ್ಥಾನದಲ್ಲಿ ದೇಶದ ಬಾವುಟ ಹಾರಿಸಿದರು. ಇದರಿಂದ ದೇಶದ ಮೊದಲ ಸ್ವಾತಂತ್ರ್ಯಘೋಷಿತ ಗ್ರಾಮ ಎಂದು ಹೆಸರು ಪಡೆದುಕೊಂಡಿತು.
ಆರು ಮಂದಿಗೆ ಗಲ್ಲು ಶಿಕ್ಷೆ
ಈಸೂರು ಗ್ರಾಮಕ್ಕೆ ನುಗ್ಗಿದ ಮಿಲಿಟರಿ ಪಡೆಯಿಂದ ತಪ್ಪಿಸಿಕೊಳ್ಳಲು ಊರಿನ ಜನ ಕಾಡು ಸೇರುತ್ತಾರೆ. ಈ ಸಂದರ್ಭ ಊರನ್ನು ಲೂಟಿ ಮಾಡಿದ ಮಿಲಿಟರಿ ಪಡೆ ಮಹಿಳೆಯರ ಮೇಲೆ ಅತ್ಯಾಚಾರ ಎಸಗುತ್ತದೆ. ಕೊನೆಗೆ ಮಹಿಳೆಯರು ಸೇರಿದಂತೆ ಸುಮಾರು 41ಕ್ಕೂ ಹೆಚ್ಚು ಜನ ಬಂಧಿಸಲಾಗುತ್ತದೆ. 22 ಮಂದಿಗೆ ಜೀವಾವಧಿ ಶಿಕ್ಷೆ 11 ಮಂದಿಗೆ ಗಲ್ಲು ಶಿಕ್ಷೆ ವಿಧಿಸಲಾಗುತ್ತದೆ. ಬೆಂಗಳೂರು ಹೈಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಲಾಗುತ್ತದೆ. ಅಲ್ಲಿ 6 ಮಂದಿಗೆ ಗಲ್ಲು, ಉಳಿದವರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗುತ್ತದೆ.
ಪ್ರಥಮ ಸ್ವಾತಂತ್ರ್ಯ ಸೇನಾನಿ ಇವರು
ಮೂಲತಃ ಚನ್ನಗಿರಿಯ ಧೋಂಡಿವಾಘ್ ಅವರನ್ನು ಶಿವಮೊಗ್ಗ ಜಿಲ್ಲೆಯಲ್ಲಿ ನಡೆದ ಸ್ವಾತಂತ್ರ್ಯ ಚಳವಳಿಯ ಹರಿಕಾರ ಎಂದು ಹೇಳಲಾಗುತ್ತದೆ. ಕಿರು ವಯಸ್ಸಲ್ಲೇ ಯುದ್ಧ ವಿದ್ಯೆಗಳಲ್ಲಿ ಪರಿಣತಿ ಸಾಧಿಸಿದ್ದ ಇವರು ಹಲವರಿಗೆ ಸಿಂಹಸ್ವಪ್ನವಾಗಿದ್ದರು.
1780ರಲ್ಲಿ ಹೈದರಾಲಿ ಸೈನ್ಯಕ್ಕೆ ಸೇರಿಕೊಂಡ ಇವರು ತಮ್ಮ ಸಾಹಸದ ಮೂಲಕ ಚಿರಪರಿಚಿತರಾಗಿದ್ದರು. ಧೋಡಿಯಾವಾಘ್ ಅವರ ಬಗ್ಗೆ ಅರಿತುಕೊಂಡ ಟಿಪ್ಪು ಸುಲ್ತಾನ್ ತಮ್ಮ ಸೈನ್ಯಕ್ಕೆ ಸೇರಿಸಿಕೊಂಡರು. 1799 ರಲ್ಲಿ ಟಿಪ್ಪು ಸುಲ್ತಾನ್ ಸೈನ್ಯದಿಂದ ಹೊರಬಂದು ಬಿದನೂರಿನಲ್ಲಿ ಸಣ್ಣ ಸಂಸ್ಥಾನವನ್ನು ತಾವೇ ಕಟ್ಟಿಕೊಂಡರು. ಮಲೆನಾಡು ಬಯಲುಸೀಮೆ ಅರೆಮಲೆನಾಡು ಭಾಗದಲ್ಲಿ ತಮ್ಮ ಸಂಸ್ಥಾನವನ್ನು ಕಟ್ಟಿಕೊಂಡ ಇವರು ಬ್ರಿಟಿಷ್ ಅಧಿಕಾರಿಗಳಿಗೆ ತಲೆ ನೋವಾಗಿ ಪರಿಣಮಿಸಿದ್ದರು 1800 ರಲ್ಲಿ ಬ್ರಿಟಿಷರೊಂದಿಗೆ ನಡೆದ ಯುದ್ಧದಲ್ಲಿ ಧೋಡಿಯಾವಾಘ್ ಮೃತಪಟ್ಟರು ಎಂದು ಉಲ್ಲೇಖಿಸಲಾಗಿದೆ.
ಚಳವಳಿಯ ರೂಪುರೇಷೆ ಚರ್ಚೆಯ ತಾಣ
ಈಗಿನ ರಾಮಣ್ಣ ಶ್ರೇಷ್ಠ ಪಾರ್ಕ್ ನಲ್ಲಿ ಹೋರಾಟ ಸಂದರ್ಭದಲ್ಲಿ ಹೋರಾಟಗಾರರು ಕುಳಿತು ಸಭೆ ನಡೆಸುತ್ತಿದ್ದರು ಹಾಗೂ ಹೋರಾಟದ ರೂಪುರೇಷೆಗಳನ್ನು ಅಲ್ಲಿಯೇ ರೂಪಿಸುತ್ತಿದ್ದರು. ಇದು ಸ್ವಾತಂತ್ರ್ಯ ಚಳುವಳಿಗೆ ಹೊಸ ದಿಕ್ಕು ನೀಡಲು ಸಾಧ್ಯವಾಯಿತು.
ಗಾಂಧೀಜಿ ನೆನಪು ಸಾರುವ ಪಾರ್ಕ್
1927ರಲ್ಲಿ ಮಹಾತ್ಮ ಗಾಂಧೀಜಿ ಮತ್ತು ಕಸ್ತೂರಬಾ ಅವರು ಶಿವಮೊಗ್ಗಕ್ಕೆ ಆಗಮಿಸಿದ್ದರು. ಅವರು ಗಾಂಧಿ ಬಜಾರ್ ಸರ್ಕಾರಿ ಪ್ರೌಢಶಾಲೆ ಗಾಂಧಿ ಪಾರ್ಕ್ ಸೇರದಂತೆ ಹಲವಡೆ ಸಭೆಗಳನ್ನು ನಡೆಸಿದ್ದರು.
ಗಾಂಧೀಜಿ ಅವರು ಶಿವಮೊಗ್ಗಕ್ಕೆ ಬಂದು ಹೋದ ನೆನಪಿಗಾಗಿ ನಗರದ ಪ್ರಮುಖ ವ್ಯಾಪಾರ ಕೇಂದ್ರಕ್ಕೆ ‘ಗಾಂಧಿ ಬಜಾರ್’ ಮತ್ತು ಅವರು ನಗರದ ಜನತೆಗೆ ಸ್ವಾತಂತ್ರ್ಯದ ಮಹತ್ವವನ್ನು ಬಹಿರಂಗ ಸಮಾವೇಶದ ಮೂಲಕ ತಿಳಿಸಿಕೊಟ್ಟಿದ್ದ ಉದ್ಯಾನವನಕ್ಕೆ ‘ಗಾಂಧಿ ಪಾರ್ಕ್’ ಎಂದು ಹೆಸರಿಡಲಾಗಿತು.
ಗಾಂಧೀಜಿ ದಂಪತಿ ನೆಟ್ಟ ಕಲ್ಪವೃಕ್ಷ
ಶಿವಮೊಗ್ಗಕ್ಕೆ ಆಗಮಿಸಿದಾಗ ಗಾಂಧೀಜಿ ದಂಪತಿ ನ್ಯಾಷನಲ್ ಲಾಡ್ಜ್ನಲ್ಲಿ ಉಳಿದುಕೊಂಡಿದ್ದರು. ಅದರ ಮಾಲೀಕರು ಗಾಂಧೀಜಿ ಅವರ ನೆನಪನ್ನು ಚಿರಸ್ಥಾಯಿಗೊಳಿಸಲು ಬಯಸಿ ಲಾಡ್ಜ್ ಮುಂಭಾಗದಲ್ಲಿ ಗಾಂಧೀಜಿ ಮತ್ತು ಕಸ್ತೂರಬಾ ಅವರಿಂದ ತೆಂಗಿನ ಸಸಿಗಳನ್ನು ನೆಡಿಸಿದ್ದರು. ನ್ಯಾಷನಲ್ ಲಾಡ್ಜ್ ಆನಂತರದಲ್ಲಿ ಬೃಂದಾವನ ಹೋಟೆಲ್ ಆಗಿ ಬದಲಾವಣೆಗೊಂಡಿತಲ್ಲದೆ ಆನಂತರದಲ್ಲಿ ಶಿಥಿಲಗೊಂಡ ಕಾರಣಕ್ಕೆ ಕಟ್ಟಡವನ್ನೂ ಉರುಳಿಸಲಾಯಿತು. ಆದರೆ, ಗಾಂಧಿ ದಂಪತಿ ನೆಟ್ಟ ತೆಂಗಿನ ಸಸಿಗಳು ಹೆಮ್ಮರವಾಗಿ ಈಗಲೂ ಉಳಿದಿವೆ.