ಸುದ್ದಿ ಕಣಜ.ಕಾಂ ತೀರ್ಥಹಳ್ಳಿ
THIRTHAHALLI: ಗಾಂಜಾವನ್ನು ಕಾರಿನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಮೂವರನ್ನು ಬಂಧಿಸಲಾಗಿದೆ.
ತೀರ್ಥಹಳ್ಳಿ ಪಟ್ಟಣದ ಯೂನಸ್ ಖಾನ್(29), ಬಾಳೆ ಬೈಲಿನ ಅತೀಫ್ ಖಾನ್(32), ಸೊಪ್ಪುಗುಡ್ಡೆಯ ಇ.ವಿ.ಮನೋಜ್(32) ಎಂಬುವರನ್ನು ಬಂಧಿಸಲಾಗಿದೆ. ಅವರ ಬಳಿಯಿಂದ ಅಂದಾಜು ₹10 ಸಾವಿರ ಮೌಲ್ಯದ 173 ಗ್ರಾಂ ಗಾಂಜಾ ಮತ್ತು ₹2 ಸಾವಿರ ನಗದು ಹಾಗೂ ಕೃತ್ಯಕ್ಕೆ ಬಳಸಿದ ಅಂದಾಜು ₹20 ಲಕ್ಷ ಮೌಲ್ಯದ ಟಯೋಟ ಫಾರ್ಚುನರ್ ಕಾರ್ ವಶಪಡಿಸಿಕೊಳ್ಳಲಾಗಿದೆ.
ಖಚಿತ ಮಾಹಿತಿ ಮೇರೆಗೆ ಪರಿಶೀಲನೆ
ಶಿವಮೊಗ್ಗ ಕಡೆಯಿಂದ ತೀರ್ಥಹಳ್ಳಿಗೆ ಬರುತ್ತಿರುವ ಕಾರಿನಲ್ಲಿ ಗಾಂಜಾವನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿಯ ಮೇರೆಗೆ ತೀರ್ಥಹಳ್ಳಿ ಉಪ ವಿಭಾಗದ ಪೊಲೀಸ್ ಉಪಾಧಿಕ್ಷಕ ಗಜಾನನ ವಾಮನ ಸುತರ, ಮಾರ್ಗದರ್ಶನದಲ್ಲಿ ಮಾಳೂರು ಪಿಎಸ್ಐ ನವೀನ್ ಕುಮಾರ್ ಮಠಪತಿ ನೇತೃತ್ವದ ತಂಡವು ಮಾಳೂರಿನ ಹತ್ತಿರ ವಾಹನ ತಪಾಸಣೆ ಮಾಡುತ್ತಿದ್ದಾಗ ಅಲ್ಲಿಗೆ ಬಂದ ಟಯೋಟ ಫಾರ್ಚುನರ್ ಕಾರ್ ಅನ್ನು ತಡೆದು ತಪಾಸಣೆ ಮಾಡಿದಾಗ ಕಾರಿನ ಹಿಂಭಾಗದ ಡಿಕ್ಕಿಯಲ್ಲಿ ಕಪ್ಪು ಬಣ್ಣದ ಕವರ್ ನಲ್ಲಿ ಗಾಂಜಾ ಇರುವುದು ಕಂಡುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿತರ ವಿರುದ್ಧ ಮಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.