ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಮಳೆ ಪ್ರಮಾಣ (rain decline) ಕಡಿಮೆಯಾಗಿರುವುದರಿಂದ ಮೀನು ಕೃಷಿಕರಿಂದ ‘ರೋಹು’ ಜಾತಿಯ ಮೀನುಮರಿಗಳ ಬೇಡಿಕೆ ಕುಸಿದಿದೆ. ಹೀಗಾಗಿ, ಗಾಜನೂರು ಮೀನುಮರಿ ಉತ್ಪಾದನಾ ಕೇಂದ್ರದಿಂದ ರೋಹು (Rohu) ಜಾತಿ ಸ್ಪಾನ್ (spawn) ಮರಿಗಳನ್ನು ತಾಲೂಕಿನ ತುಂಗಾ ಜಲಾಶಯದ ಹಿನ್ನೀರಿಯಲ್ಲಿ ಬಿಡಲಾಯಿತು.
ಗಾಜನೂರು ಮೀನುಮರಿ ಉತ್ಪಾದನಾ ಕೇಂದ್ರದಿಂದ ಉತ್ಪಾದಿಸಬಹುದಾದ ಸ್ಪಾನ್ ಮೀನು ಮರಿಗಳನ್ನು ಮಳೆಯ ಅಭಾವದಿಂದ ಮೀನುಕೃಷಿಕರಿಂದ ಯಾವುದೇ ಬೇಡಿಕೆ ಇಲ್ಲ. ಹೀಗಾಗಿ, ಹಿನ್ನೀರಿನಲ್ಲಿ ಬಿತ್ತನೆ ಮಾಡಲಾಗಿದೆ.
READ | ಎಂಟು ವರ್ಷದ ಹುಡುಗ ದೊಡ್ಡಪೇಟೆ ಇನ್’ಸ್ಪೆಕ್ಟರ್
ಕಾರಣಗಳೇನು?
ತಾಯಿ ಮೀನುಗಳನ್ನು ವರ್ಷಪೂರ್ತಿ ಪೌಷ್ಟಿಕಾಂಶಯುಕ್ತ ಆಹಾರ ನೀಡಿ ಸಾಕಾಣಿಕೆ ಮಾಡಿ ಅವುಗಳನ್ನು ಸಂತಾನೋತ್ಪತ್ತಿಗೆ ಉಪಯೋಗಿಸದೇ ಇದ್ದಲ್ಲಿ ಗರ್ಭಕಟ್ಟಿದ ಮೊಟ್ಟೆಯು ಮರುಹೀರಿಕೆಯಾಗುತ್ತದೆ. ಇದರಿಂದಾಗಿ ಮಾಂಸಖಂಡಗಳಲ್ಲಿ ಕೊಬ್ಬು ಶೇಖರಣೆಗೊಂಡು ಮುಂದಿನ ದಿನಗಳಲ್ಲಿ ಸಂತಾನೋತ್ಪತ್ತಿ ಸಮಯದಲ್ಲಿ ಪ್ಲಗಿಂಗ್ ಆಗುವ ಸಾಧ್ಯತೆ ಇರುತ್ತದೆ. ಮುಂದಿನ ವರ್ಷಗಳಲ್ಲಿಯೂ ಸಹ ತಾಯಿ ಮೀನುಗಳು ಸಂತಾನೋತ್ಪತ್ತಿ ಮಾಡದಿರಬಹುದಾದ ಸಂಭವವಿರುತ್ತದೆ.
ಹಿನ್ನೀರಿಗೆ 2.16 ಕೋಟಿ ಮೀನುಮರಿ
ಗಾಜನೂರು ಮೀನುಮರಿ ಉತ್ಪಾದನಾ ಕೇಂದ್ರದಿಂದ ಹಂತ ಹಂತವಾಗಿ ಉತ್ಪಾದಿಸಬಹುದಾದ 2.16 ಕೋಟಿ ಸ್ಟಾನ್ ಮೀನುಮರಿಗಳನ್ನು ತುಂಗಾ ಜಲಾಶಯದಲ್ಲಿ ದಾಸ್ತಾನಿಕರಿಸಲು ಬೆಂಗಳೂರು ಮೀನುಗಾರಿಕೆ ನಿರ್ದೇಶಕರು ಆದೇಶಿಸಿರುವ ಮೇರೆಗೆ ಆ.17 ರಂದು ಅಪರ ನಿರ್ದೇಶಕರಾದ(ಒಳನಾಡು) ಡಿ.ತಿಪ್ಪೇಸ್ವಾಮಿ ಅವರ ನೇತೃತ್ವದಲ್ಲಿ 53 ಲಕ್ಷ ರೋಹು ಜಾತಿ ಸ್ಪಾನ್ ಮರಿಗಳನ್ನು ಶಿವಮೊಗ್ಗ ತಾಲೂಕಿನ ತುಂಗಾ ಜಲಾಶಯದ ಹಿನ್ನೀರಿಯಲ್ಲಿ ದಾಸ್ತಾನು ಮಾಡಲಾಯಿತು.
ಶಿವಮೊಗ್ಗ ವಲಯ ಜಂಟಿ ನಿರ್ದೇಶಕ ಒ.ಗಿರೀಶ್, ಜಿಲ್ಲೆ ಮೀನುಗಾರಿಕೆ ಉಪ ನಿರ್ದೇಶಕ ಜಿ.ಎಂ. ಶಿವಕುಮಾರ್, ಶಿವಮೊಗ್ಗ ಜಲಾಶಯ ವಿಭಾಗದ ಮೀನುಗಾರಿಕೆ ಉಪ ನಿರ್ದೇಶಕ ಎಸ್.ಕೆ.ಸತೀಶ್, ಗಾಜನೂರು ಗಂಗಾಪರಮೇಶ್ವರಿ ಮೀನುಗಾರರ ಸಹಕಾರ ಸಂಘದ ಅಧ್ಯಕ್ಷ ಅರಸಯ್ಯ, ಸಂಘದ ಆಡಳಿತ ಮಂಡಳಿ ಸದಸ್ಯರು, ಮೀನುಗಾರರು, ಮೀನುಗಾರಿಕೆ ಸಹಾಯಕ ನಿರ್ದೇಶಕರಾದ ಪ್ರದೀಪ್, ಕೆ.ಎಸ್.ರಾಘವೇಂದ್ರ ಹಾಗೂ ಇಲಾಖೆಯ ಸಹೋದ್ಯೋಗಿಗಳು ಇದ್ದರು.