ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಇಂದಿನಿಂದ ನಗರದಲ್ಲಿ ಸಂಚರಿಸುವ ವಾಹನ ಮಾಲೀಕರು ಜಾಗರೂಕತೆ ವಹಿಸಲೇಬೇಕು. ಯಾರಿಗಾದರೂ ವಾಹನ ನೀಡಿದ್ದರೂ ಎಚ್ಚರ ಇರಲೇಬೇಕು. ಇಲ್ಲದಿದ್ದರೆ ದಂಡ ಕಟ್ಡಬೇಕಾಗುತ್ತದೆ!
ಸಿಗ್ನಲ್’ಗಳಲ್ಲಿ ಯಾರೂ ಗಮನಿಸುತ್ತಿಲ್ಲ. ಪೊಲೀಸರಿಲ್ಲ ಎಂದು ಇಷ್ಟು ದಿನ ಸಿಗ್ನಲ್ ಜಂಪ್ ಸೇರಿದಂತೆ ಹಲವು ಟ್ರಾಫಿಕ್ ನಿಯಮಗಳನ್ನು ಉಲ್ಲಂಘನೆ ಮಾಡುತ್ತಿರುವವರು ಇನ್ಮುಂದೆ ಜಾಗರೂಕತೆ ವಹಿಸಬೇಕು. ಇಲ್ಲದಿದ್ದರೆ ನಿಯಮ ಉಲ್ಲಂಘಿಸಿದ ಕೆಲವೇ ನಿಮಿಷಗಳಲ್ಲಿ ವಾಹನ ಮಾಲೀಕರ ಮೊಬೈಲ್ ಸಂಖ್ಯೆಗೆ ಎಸ್.ಎಂ.ಎಸ್ ಹಾಗೂ ಮನೆ ವಿಳಾಸಕ್ಕೆ ಅಂಚೆ ಮೂಲಕ ನೋಟಿಸ್ ಪ್ರತಿ ಬರಲಿದೆ!
ಇದಿ ಆ.28ರಿಂದ ಅಧಿಕೃತವಾಗಿ ಚಾಲನೆಗೊಳ್ಳಲಿದೆ. ಹಾಗಾಗಿ ಸವಾರರು ನಿಯಮ ಪಾಲಿಸಲೇಬೇಕು. ಇಲ್ಲದಿದ್ದರೆ, ನಿಯಮ ಉಲ್ಲಂಘನೆ ಮಾಡುವ ವಾಹನ ಸವಾರರಿಗೆ ದಂಡ ಖಚಿತ.
READ | ಶಿವಮೊಗ್ಗ ಸ್ಮಾರ್ಟ್ ಸಿಟಿಗೆ ಪ್ರಶಸ್ತಿ ಪ್ರಕಟ, ಯಾವ ಕಾರಣಕ್ಕೆ ಅವಾರ್ಡ್?
ಶಿವಮೊಗ್ಗ ಸ್ಮಾರ್ಟ್ ಸಿಟಿ (shimoga smart city) ಯೋಜನೆಯಡಿಯಲ್ಲಿ ನಗರದಲ್ಲಿ ಸುಗಮ ಸಂಚಾರಕ್ಕಾಗಿ ಸುಧಾರಿತ ಐಟಿಎಂಎಸ್ (ITMS) ತಂತ್ರಾಂಶದ ಮೂಲಕ ಕ್ಯಾಮರಾ ಅಳವಡಿಸಲಾಗಿದೆ. ನಗರದಲ್ಲಿರುವ ಎಲ್ಲ ಕ್ಯಾಮರಾಗಳ ಮೂಲಕ ಕೇಂದ್ರೀಕೃತವಾಗಿ ಕಂಬೈಂಡ್ ಅಂಡ್ ಕಂಟ್ರೋಲ್ ಸೆಂಟರ್ಗೆ ಅಳವಡಿಸಲಾಗಿದ್ದು ಈ ತಂತ್ರಾಂಶದ ಮೂಲಕ ಯಾರೇ ಸಂಚಾರಿ ನಿಯಮ ಉಲ್ಲಂಘನೆ ಮಾಡಿದರೂ ಕೂಡ ತಕ್ಷಣ ತಿಳಿಯುವುದಲ್ಲದೆ ಅದು ರೆಕಾರ್ಡ್ ಆಗುತ್ತದೆ ಎಂದರು.
ಈ ನೂತನ ವ್ಯವಸ್ಥೆಯು ಆ.28ರಿಂದ ಕಡ್ಡಾಯವಾಗಿ ಜಾರಿಗೆ ಬರಲಿದೆ. ಆದ್ದರಿಂದ ವಾಹನ ಸವಾರರು ಯಾವುದೇ ಕಾರಣಕ್ಕೂ ನಿಯಮಗಳನ್ನು ಉಲ್ಲಂಘಿಸಬಾರದು. ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಲೇಬೇಕು. ನಗರದ ಪ್ರಮುಖ 13 ವೃತ್ತಗಳಲ್ಲಿ ಬೇರೆ ಬೇರೆ ರೀತಿಯ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಹಾಗಾಗಿ ವಾಹನ ಸವಾರರು ಅತ್ಯಂತ ಎಚ್ಚರಿಕೆಯಿಂದ ಸಂಚಾರಿ ನಿಯಮಗಳನ್ನು ಪಾಲಿಸಿ ದಂಡ ಕಟ್ಟದಂತೆ ಜಾಗರೂಕರಾಗಿರಬೇಕು.
– ಜಿ.ಕೆ.ಮಿಥುನ್ ಕುಮಾರ್, ಎಸ್.ಪಿ.
ಸ್ಮಾರ್ಟ್ ಟ್ರಾಫಿಕ್’ನಲ್ಲಿ ಏನೆಲ್ಲ ಇದೆ?
- ವಾಹನ ಚಾಲಕರು ಸಿಗ್ನಲ್ ಜಂಪ್ ಮಾಡಿದಾಗ ವಾಹನದ ಫೋಟೊ ಮತ್ತು ವೀಡಿಯೋ ತುಣುಕನ್ನು ಎಸ್ವಿಡಿ ಕ್ಯಾಮೆರಾಗಳು ಸೆರೆಹಿಡಿಯುತ್ತವೆ.
- ಹೆಲ್ಮೆಟ್ ಧರಿಸದೆ ಇದ್ದರೆ, ಮೂವರು ಕುಳಿತು ದ್ವಿಚಕ್ರ ವಾಹನದಲ್ಲಿ ಚಲಿಸುತ್ತಿದ್ದರೆ, ಮೊಬೈಲ್ನಲ್ಲಿ ಮಾತನಾಡುತ್ತಾ ವಾಹನ ಚಲಾಯಿಸುತ್ತಿದ್ದರೆ, ಒನ್ವೇ, ನೋ ಎಂಟ್ರಿ, ನೋ ಪಾರ್ಕಿಂಗ್, ಕಾರಿನ ಚಾಲಕರು ಸೀಟ್ ಬೆಲ್ಟ್ ಹಾಕಿಕೊಳ್ಳುವುದು ಯಾವುದೇ ರೀತಿಯ ಸಂಚಾರಿ ನಿಯಮಗಳನ್ನು ಉಲ್ಲಂಘನೆ ಮಾಡಿದರೆ ತಕ್ಷಣವೇ ವಾಹನ ಮಾಲೀಕರ ಮೊಬೈಲ್ ಸಂಖ್ಯೆಗೆ ಎಸ್ಎಂಎಸ್ ಮೂಲಕ ಮತ್ತು ಮಾಲೀಕರ ವಿಳಾಸಕ್ಕೆ ಅಂಚೆ ಮೂಲಕ ನೋಟೀಸ್ ಕಳಿಸಲಾಗುತ್ತದೆ.
- ಜಿಲ್ಲೆಯಲ್ಲಿ ಆಟೋಗಳಿಗೆ ಮೀಟರ್ ಕಡ್ಡಾಯ ಮಾಡಿದ್ದು, ಮೀಟರ್ ಹಾಕದೆ ಇದ್ದಲ್ಲಿ ದೂರು ನೀಡಿದರೆ ಕ್ರಮ ಕೈಗೊಳ್ಳಲಾಗುವುದು.
- ಒಬ್ಬ ವ್ಯಕ್ತಿಯ ನೋಟೀಸ್ ವಿವರಗಳು ಇ-ಚಲನ್ ತಂತ್ರಾಂಶಕ್ಕೆ ಸಂಯೋಜಿಸಲಾಗಿದ್ದು, ಆ ವಾಹನಕ್ಕೆ ಸಂಬಂಧಿಸಿದ ಉಲ್ಲಂಘನೆ ಪ್ರಕರಣಗಳ ವಿವರ ದೊರೆಯಲಿದೆ.
- ದಂಡದ ಮೊತ್ತವನ್ನು ಸ್ಥಳದಲ್ಲಿಯೇ ಪಾವತಿಸಿ ನೋಟೀಸನ್ನು ಮುಕ್ತಾಯ ಮಾಡಲು ಅವಕಾಶ ನೀಡಲಾಗಿದೆ. ವಾಹನಗಳ ಮಾಲೀಕರು ತಮಗೆ ಎಸ್ಎಂಎಸ್ ಬಂದಾಗ ನೋಟೀಸಿನಲ್ಲಿ ನಮೂದಿಸಿರುವ ದಂಡವನ್ನು ಹತ್ತಿರದ ಸಂಚಾರಿ ಪೊಲೀಸ್ ಠಾಣೆಗೆ ಹೋಗಿ ಅಥವಾ ಕರ್ತವ್ಯನಿರತ ಸಂಚಾರಿ ಪೊಲೀಸ್ ಅಧಿಕಾರಿಗಳ ಬಳಿ ಹೋಗಿ ಕಟ್ಟಬಹುದಾಗಿದೆ.
ಏಕಮುಖ ಸಂಚಾರ ರಸ್ತೆಯಲ್ಲೂ ಕ್ಯಾಮರಾ ಕಣ್ಗಾವಲು
ದುರ್ಗಿಗುಡಿ ಸೇರಿದಂತೆ ಎಲ್ಲ ಏಕಮುಖ ರಸ್ತೆಯಲ್ಲಿ ಕೂಡ ಕ್ಯಾಮರಾ ಅಳವಡಿಸಲಾಗಿದೆ. ಅದರೆ ವಿರುದ್ಧ ದಿಕ್ಕಿನಿಂದ ಬಂದವರಿಗೆ ಕೂಡ ದಂಡ ವಿಧಿಸಲಾಗುವುದು. ಈ ಕುರಿತು ಈಗಾಗಲೇ ಪೊಲೀಸ್ ಇಲಾಖೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಜಾಗೃತಿಯೂ ಮೂಡಿಸಿದೆ.