ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: “ಅನ್ನ ದೇವರಿಗಿಂತ ಇನ್ನು ದೇವರು ಇಲ್ಲ” ಎನ್ನುವ ಸರ್ವಜ್ಞರ ಕವಿವಾಣಿಯಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ. (Chief minister Siddaramaiah) ಅವರು ಮೊದಲ ಬಾರಿ ಮುಖ್ಯಮಂತ್ರಿಯಾದ ಅವಧಿಯಲ್ಲಿ ಉಚಿತ ಅಕ್ಕಿ (Free Rice) ನೀಡುವ ಅನ್ನಭಾಗ್ಯ ಯೋಜನೆ(Anna bhagya scheme)ಯನ್ನು ಜಾರಿಗೆ ತಂದರು.
READ | ಮಲೆನಾಡಿನ ಬೆಳೆಗಳ ಮೇಲೆ ಬರದ ಛಾಯೆ, ಅನ್ನದ ಬಟ್ಟಲಿಗೆ ಬೆಂಕಿ
ಹಸಿವು ಮುಕ್ತ ರಾಜ್ಯ ಮಾಡುವ ಗುರಿಯನ್ನಿಟ್ಟುಕೊಂಡು 2013 ರಲ್ಲಿ ರಾಜ್ಯದ ಚುಕ್ಕಾಣಿ ಹಿಡಿದಾಗ ಬಸವಣ್ಣನವರ ದಾಸೋಹ (Dasoha) ಸಂಸ್ಕೃತಿಯಂತೆ ಹಸಿವು ಮುಕ್ತ ಕರ್ನಾಟಕ (Hunger free Karnataka) ಮಾಡುವ ತಮ್ಮ ಜೀವಮಾನದ ಆಶಯ ಮತ್ತು ಕಾಳಜಿಯ ಭಾಗವಾಗಿ ರೂಪಿಸಿದ ಯೋಜನೆ ಅನ್ನಭಾಗ್ಯ.
ನಿರೀಕ್ಷೆಗೆ ತಕ್ಕಂತೆ ಅಕ್ಕಿ ಸಿಗದ ಹಿನ್ನೆಲೆಯಲ್ಲಿ ಸರ್ಕಾರ ಫಲಾನುಭವಿಗಳ ಖಾತೆಗೆ ಐದು ಕೆಜಿ ಅಕ್ಕಿ ಬದಲು ತಲಾ ಸದಸ್ಯರಿಗೆ ₹170 ಜಮೆ ಮಾಡುತ್ತಿದೆ. ಜಿಲ್ಲೆಯಲ್ಲಿ ಜುಲೈ ತಿಂಗಳಲ್ಲಿ ಒಟ್ಟು 3,08,429 ಬಿಪಿಎಲ್ ಮತ್ತು ಅಂತ್ಯೋದಯ ಕಾರ್ಡ್ ದಾರರಿದ್ದು ಈ ಕುಟುಂಬಗಳ 10,03.264 ಸದಸ್ಯರಿಗೆ ₹17,46,73,810 ಗಳನ್ನು ಜಮೆ ಮಾಡಲಾಗಿದೆ. ಹಾಗೂ ಆಗಸ್ಟ್ ನಲ್ಲಿ ಒಟ್ಟು 3,25,156 ಕಾರ್ಡುಗಳ ಕುಟುಂಬದ 11,45,683 ಸದಸ್ಯರಿಗೆ ₹18,49,56,430 ಜಮೆ ಮಾಡಲಾಗಿದೆ. ಅನ್ನಭಾಗ್ಯ ಯೋಜನೆಗೆ ಸಂಬಂಧಿಸಿದಂತೆ ಸಾರ್ವಜನಿಕರಲ್ಲಿ ಯಾವುದೇ ದೂರುಗಳಿದ್ದರೆ ಉಚಿತ ಸಹಾಯವಾಣಿ ಸಂಖ್ಯೆ 1967 ಹಾಗೂ 1800 425 9339 ಕ್ಕೆ ಕರೆ ಮಾಡಬಹುದು. ಹಾಗೂ ನ್ಯಾಯಬೆಲೆ ಅಂಗಡಿಯ ವ್ಯಾಪ್ತಿಯಲ್ಲಿ ಅಧಿಕಾರಿಯೊಬ್ಬರ ಸಮ್ಮುಖದಲ್ಲಿ ನಿರ್ದಿಷ್ಟ ದಿನಾಂಕದಂದು ಅನ್ನಭಾಗ್ಯ ಅದಾಲತ್ ನಡೆಸಲಾಗುತ್ತದೆ.
– ಆರ್.ಅವಿನ್, ಉಪ ನಿರ್ದೇಶಕರು, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ಶಿವಮೊಗ್ಗ
ಆಹಾರ ಭದ್ರತಾ ಯೋಜನೆಯಡಿ ಪ್ರತಿಯೊಬ್ಬ ಪಡಿತರದಾರನಿಗೆ ತಲಾ 10 ಕೆಜಿ ಆಹಾರಧಾನ್ಯ ಒದಗಿಸುವ ಯೋಜನೆ ಅನ್ನಭಾಗ್ಯ. ಪ್ರಸ್ತುತ ಹೆಚ್ಚುವರಿ ಅಕ್ಕಿಯ ಅಲಭ್ಯತೆಯ ಹೊರತಾಗಿಯೂ ಸರ್ಕಾರ ಕೈಚೆಲ್ಲಿ ಕುಳಿತಿಲ್ಲ. ಜನರಿಗೆ ನೀಡದ ವಾಗ್ದಾನದಂತೆ ಬಿಪಿಎಲ್ ಕುಟುಂಬದ ಸದಸ್ಯರಿಗೆ 5 ಕೆಜಿ ಅಕ್ಕಿಯ ಬದಲಾಗಿ ತಲಾ ₹170 ಕುಟುಂಬದ ಯಜಮಾನಿಯ ಖಾತೆಗೆ ಹಾಕುವ ಕ್ರಾಂತಿಕಾರಕ ಕ್ರಮಕ್ಕೆ ಸರ್ಕಾರ ಈಗಾಗಲೇ ಚಾಲನೆ ನೀಡಿದೆ.
ಅಂತ್ಯೋದಯ ಅನ್ನ ಯೋಜನೆ, ಆದ್ಯತಾ ಕುಟುಂಬ ಪಡಿತರ ಚೀಟಿಗಳು ಮತ್ತು ರಾಜ್ಯ ಸರ್ಕಾರದಿಂದ ಹೆಚ್ಚುವರಿಯಾಗಿ ವಿತರಿಸಲಾಗಿರುವ ಆದ್ಯತಾ ಪಡಿತರ ಚೀಟಿಗಳ ಪ್ರತಿ ಫಲಾನುಭವಿಗೆ ಈ ಯೋಜನೆ ಅನ್ವಯವಾಗಲಿದೆ.
ಯೋಜನೆಗಳ ಬಗ್ಗೆ ಜನರೇನು ಹೇಳುತ್ತಾರೆ?
ಅನ್ನಭಾಗ್ಯ ಯೋಜನೆ ನಮ್ಮಂತಹ ಬಡವರಿಗೆ ವರದಾನವಾಗಿದೆ. ಅನೇಕರು ಏನೇನೋ ಟೀಕೆ ಮಾಡುತ್ತಿದ್ದಾರೆ. ಆದರೆ ಆ ಟೀಕೆಗಳಿಗೆ ಅರ್ಥವಿಲ್ಲ. ಮುಖ್ಯಮಂತ್ರಿಯವರು 5 ಕೆಜಿ ಅಕ್ಕಿ ಬದಲಾಗಿ ಹಣ ನೀಡುತ್ತಿರುವುದು ಸಹ ತುಂಬಾ ಉಪಯೋಗವಾಗಿದೆ. ಈ ಹಣದಿಂದ ಅಕ್ಕಿ ಅಥವಾ ಇತರೆ ದಿನಸಿ, ಆರೋಗ್ಯ ಇನ್ನಿತರೆ ಅಗತ್ಯಗಳಿಗೆ ಬಳಸಿಕೊಳ್ಳುತ್ತಿದ್ದೇವೆ.
– ಮಂಜಣ್ಣ, ಮಾಚೇನಹಳ್ಳಿನಾನು ಮತ್ತು ನನ್ನ ಪತಿ ಕೂಲಿ ಮಾಡುತ್ತಿದ್ದು, ಅದರಿಂದಲೇ ಮಕ್ಕಳ ಶಿಕ್ಷಣ ಹಾಗೂ ನಮ್ಮ ಕುಟುಂಬ ನಿರ್ವಹಣೆ ಮಾಡಬೇಕಿದೆ. ಹಸಿದವರಿಗೇ ಗೊತ್ತು ಅನ್ನದ ಬೆಲೆ. ಸರ್ಕಾರ ನೀಡುತ್ತಿರುವ ಅಕ್ಕಿಯಿಂದ ನಮ್ಮ ಜೀವನ ಸಾಗುತ್ತಿದೆ. ಈಗ ಅಕ್ಕಿ ಬದಲು ಹಣ ನೀಡುತ್ತಿರುವುದರಿಂದ ಇತರೆ ಅಗತ್ಯಗಳನ್ನು ಪೂರೈಸಿಕೊಳ್ಳುತ್ತಿದ್ದೇವೆ. ಸರ್ಕಾರಕ್ಕೆ ಧನ್ಯವಾದಗಳು
– ರಾಮಕ್ಕ, ಸೋಗಾನೆ
ಅಕ್ಕಿ ಇಲ್ಲವೆಂದಾಗ ಹಣ ಡೆಪಾಸಿಟ್
ಸರ್ಕಾರ ರಚನೆಯಾದ ನಂತರ ಸಾರ್ವಜನಿಕ ವಿತರಣಾ ವ್ಯವಸ್ಥೆಯಲ್ಲಿ 5 ಕೆಜಿ ಅಕ್ಕಿ ನೀಡಲು ಸಿದ್ದತೆಗಳನ್ನು ನಡೆಸಲಾಯಿತು. ಆದರೆ ರಾಜ್ಯದಲ್ಲಿ ಅಷ್ಟೊಂದು ಅಕ್ಕಿ ದಾಸ್ತಾನು ಇಲ್ಲದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದಿಂದ ಅಕ್ಕಿ ಖರೀದಿಸಲು ಪ್ರಯತ್ನ ನಡೆಸಿತು. ಜೂನ್ 23 ರಂದು ಸ್ವತಃ ಮುಖ್ಯಮಂತ್ರಿ ಅವರೇ ದೆಹಲಿಗೆ ತೆರಳಿ ಕೇಂದ್ರ ಗೃಹ ಮಂತ್ರಿಗಳಾದ ಅಮಿತ್ ಷಾ ಅವರನ್ನು ಭೇಟಿ ಮಾಡಿ ತಮ್ಮ ಬೇಡಿಕೆಗಳನ್ನು ಸಲ್ಲಿಸಿ ಬಂದಿದ್ದರು.
READ | ಸಿಎಂ ಸಿದ್ದರಾಮಯ್ಯ ಅವರ ಬಗ್ಗೆ ನಿಮಗೇನು ಗೊತ್ತು? ತಿಳಿಯಬೇಕಾದ ಆರು ವಿಚಾರಗಳಿವು
ಕೇಂದ್ರ ಸರ್ಕಾರ ಅಕ್ಕಿಯನ್ನು ನೀಡಲು ಸಾಧ್ಯವಿಲ್ಲವೆಂದಾಗ, ಫಲಾನುಭವಿಗಳಿಗೆ ನಗದು ನೀಡುವುದರಿಂದ ಅನುಕೂಲವಾಗುತ್ತದೆ ಎಂದರಿತು ಈ ನಿಟ್ಟಿನಲ್ಲಿ ತೀರ್ಮಾನ ಕೈಗೊಳ್ಳಲಾಯಿತು.
‘ನೆಮ್ಮದಿಯ ಬದುಕಿಗೆ ಆಹಾರ ಭದ್ರತೆ ಅನ್ನಭಾಗ್ಯ’ ಎನ್ನುವ ಘೋಷವಾಕ್ಯದೊಂದಿಗೆ ಜುಲೈ 10 ರಂದು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಆಹಾರ, ನಾಗರೀಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳು ಹಾಗೂ ಕಾನೂನು ಮಾಪನಶಾಸ್ತ್ರ ಇಲಾಖೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಅನ್ನಭಾಗ್ಯ ಯೋಜನೆಯ ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ ನೇರ ನಗದು ವರ್ಗಾವಣೆಗೆ ಚಾಲನೆ ನೀಡಲಾಯಿತು.
ಆ.28 ಕ್ಕೆ ಪ್ರಸ್ತುತ ಸರ್ಕಾರ ಅಧಿಕಾರಕ್ಕೆ ಬಂದು 100 ದಿನ ಪೂರೈಸಲಿದೆ. ಸರ್ಕಾರದ ವಾಗ್ದಾನದಂತೆ ಗ್ಯಾರಂಟಿ ಯೋಜನೆಗಳು ಯಶಸ್ವಿಯಾಗಿ ಅನುಷ್ಠಾನಗೊಂಡಿದ್ದು, ಅತ್ಯುತ್ತಮ ಸ್ಪಂದನೆ ಮತ್ತು ಪ್ರತಿಕ್ರಿಯೆ ಜನರಿಂದ ಲಭ್ಯವಾಗಿದೆ.
ಲೇಖನ | ಭಾಗ್ಯ, ವಾರ್ತಾ ಸಹಾಯಕರು, ವಾರ್ತಾ ಇಲಾಖೆ ಶಿವಮೊಗ್ಗ