ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಮಾಸ್ಕ್ (Mask) ಧರಿಸಿಲ್ಲ ಎಂಬ ಕಾರಣಕ್ಕೆ ಕರೋನಾ (corona) ಸಂದರ್ಭದಲ್ಲಿ ವ್ಯಕ್ತಿಯೊಬ್ಬರ ವಿರುದ್ಧ ಪ್ರಕರಣ ದಾಖಲಿಸಿದ್ದು, ಮೂರು ವರ್ಷವಾದರೂ ಕೋರ್ಟ್ ಅಲೆಯುವುದು ಮಾತ್ರ ನಿಂತಿಲ್ಲ.
2019-20ರಲ್ಲಿ ಕರೋನಾ ಸಾಂಕ್ರಾಮಿಕ ಕಾಯಿಲೆ ಸಂದರ್ಭದಲ್ಲಿ ಕಾಯಿಲೆ ಹರಡುವುದನ್ನು ತಡೆಗಟ್ಟುವುದಕ್ಕೆ ಸರ್ಕಾರವು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕೆಂಬ ನಿಯಮ ವಿಧಿಸಿತ್ತು.
READ | ಮೂರು ಹಂತದ ಹೋರಾಟಕ್ಕೆ ಶಿವಮೊಗ್ಗದಲ್ಲಿ ನಡೆದಿದೆ ಸಿದ್ಧತೆ, ಬೇಡಿಕೆಗಳೇನು?
ಮಾಸ್ಕ್ ಧರಿಸದೇ ಸಾರ್ವಜನಿಕವಾಗಿ ಸಂಚರಿಸಿದ ಆರೋಪದ ಹಿನ್ನೆಲೆಯಲ್ಲಿ ಹೊಸನಗರ ತಾಲೂಕಿನ ರಿಪ್ಪನ್ ಪೇಟೆಯ ಸಾಮಾಜಿಕ ಹೋರಾಟಗಾರ ಟಿ.ಆರ್.ಕೃಷ್ಣಪ್ಪ ಎಂಬುವವರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.
ಸೈಕಲ್ ತುಳಿದೇ ನ್ಯಾಯಾಲಯಕ್ಕೆ ಬಂದ ಕೃಷ್ಣಪ್ಪ
ಶುಕ್ರವಾರ ಸೈಕಲ್ ತುಳಿದುಕೊಂಡೇ ನ್ಯಾಯಾಲಯಕ್ಕೆ ಬಂದಿದ್ದರು. ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, “ಕೇಂದ್ರ ಸರ್ಕಾರವು ಯಾರಿಗೆ ಕರೋನಾ ಲಕ್ಷಣಗಳಿವೆಯೋ ಅಂಥವರು ಮಾಸ್ಕ್ ಧರಿಸಬೇಕೆಂದು ಸೂಚಿಸಿತ್ತು. ನನ್ನಲ್ಲಿ ಯಾವುದೇ ಲಕ್ಷಣಗಳು ಇಲ್ಲದ್ದರಿಂದ ಮಾಸ್ಕ್ ಧರಿಸಿರಲಿಲ್ಲ. ಆದರೂ ಪ್ರಕರಣ ದಾಖಲಿಸಲಾಗಿದೆ. ಕಳೆದ ಮೂರು ವರ್ಷಗಳಿಂದ ಸೈಕಲ್ ತುಳಿದುಕೊಂಡು ಬಂದು ನ್ಯಾಯಾಲಯಕ್ಕೆ ಹಾಜರಾಗುತ್ತಿದ್ದೇನೆ” ಎಂದು ತಿಳಿಸಿದ್ದಾರೆ.