ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ನಡೆಸಿರುವ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯಾದ ಕಾಂತರಾಜ್ ವರದಿ (Kantharaj Commission report)ಯನ್ನು ಶೀಘ್ರವೇ ಅಂಗೀಕರಿಸಬೇಕು. ಇಲ್ಲದಿದ್ದರೆ ವಿವಿಧ ಹಂತಗಳಲ್ಲಿ ಹೋರಾಟ ರೂಪಿಸಲಾಗುವುದು ಎಂದು ಹಿಂದುಳಿದ ಜಾತಿಗಳ ಒಕ್ಕೂಟದ ಪ್ರಧಾನ ಸಂಚಾಲಕ ಆರ್.ಕೆ. ಸಿದ್ದರಾಮಣ್ಣ ಹೇಳಿದರು.
READ | ಶಿವಮೊಗ್ಗ ದಸರಾದ ಪೂರ್ಣ ವೇಳಾಪಟ್ಟಿ ಇಲ್ಲಿದೆ, ಯಾವ ದಿನ ಏನು ಕಾರ್ಯಕ್ರಮ? ನಮ್ಮೂರ ದಸರಾಕ್ಕೆ ನಟ, ನಟಿಯರ ದಂಡು
ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ₹180 ಕೋಟಿ ವೆಚ್ಚದಲ್ಲಿ ಸರ್ಕಾರದ ಅಧಿಕೃತ ಸಂಸ್ಥೆಯಿಂದ ಕಾಂತರಾಜ್ ನೇತೃತ್ವದಲ್ಲಿ ವರದಿ ಮಂಡಿಸಲಾಗಿದೆ. ಆದರೆ ಸರ್ಕಾರಕ್ಕೆ ಸಲ್ಲಿಸಲಾಗಿಲ್ಲ. ಇದರ ಹಿಂದೆ ರಾಜಕೀಯ ಇಚ್ಛಾಶಕ್ತಿ ಕೊರತೆಯೂ ಇದೆ ಎಂದು ಆರೋಪಿಸಿದರು.
ಒಕ್ಕೂಟದಿಂದ ಸರ್ಕಾರಕ್ಕೆ ಬೇಡಿಕೆಗಳು
- ರಾಜ್ಯ ಸರ್ಕಾರ ಮತ್ತು ಹಿಂದುಳಿದ ವರ್ಗಗಳ ಆಯೋಗ ಶೀಘ್ರವೇ ವರದಿಯನ್ನು ಬಹಿರಂಗಪಡಿಸಬೇಕು. ಆಯೋಗವು ತಕ್ಷಣವೇ ಸರ್ಕಾರಕ್ಕೆ ಸಲ್ಲಿಸಬೇಕು.
- ಸರ್ಕಾರ ಪರಿಷ್ಕರಣೆಯ ನೆಪ ಹೇಳದೆ ವರದಿಯನ್ನು ಯಥಾವತ್ತಾಗಿ ಜಾರಿಗೆ ತರಬೇಕು.
- ಕೋಟಿಗಟ್ಟಲೇ ಹಣ ಖರ್ಚು ಮಾಡಿ ಸಿದ್ಧಪಡಿಸಿರುವ ವರದಿಯು ಶೈತ್ಯಾಗಾರ ಸೇರಿದ್ದು, ಅದಕ್ಕೆ ಮರುಜೀವ ನೀಡುವ ಕೆಲಸ ಶೀಘ್ರ ಆಗಬೇಕು.
- ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ತನ್ನ ಪ್ರಣಾಳಿಕೆಯಲ್ಲಿ ಹೇಳಿದಂತೆ ಕಾಂತರಾಜ್ ವರದಿಯನ್ನು ಅನುಷ್ಠಾನಕ್ಕೆ ತರಬೇಕು.
ಮೂರು ಹಂತಗಳಲ್ಲಿ ಹೋರಾಟ
ಒಕ್ಕೂಟದ ಪ್ರೊ. ರಾಚಪ್ಪ ಮಾತನಾಡಿ, ಕಾಂತರಾಜ್ ವರದಿಯ ಅನುಷ್ಠಾನಕ್ಕೆ ಆಗ್ರಹಿಸಿ ಮೂರು ಹಂತದ ಹೋರಾಟಗಳನ್ನು ಹಿಂದುಳಿದ ಜನಜಾಗೃತಿ ವೇದಿಕೆ ಹಾಗೂ ಹಿಂದುಳಿದ ಜಾತಿಗಳ ಒಕ್ಕೂಟದಿಂದ ಹಮ್ಮಿಕೊಳ್ಳಲಾಗುವುದು. ಬರುವ ಸೋಮವಾರ ಮುಖ್ಯಮಂತ್ರಿ ಹಾಗೂ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗಡೆಯವರನ್ನು ಭೇಟಿ ಮಾಡುತ್ತೇವೆ. ನಂತರ ಎರಡನೇ ಹಂತವಾಗಿ ಧರಣಿ ಸತ್ಯಾಗ್ರಹ ಹಾಗೂ ಪಂಜಿನ ಮೆರವಣಿಗೆ ಮಾಡುತ್ತೇವೆ. ಮೂರನೇ ಹಂತದಲ್ಲಿ ಹಿಂದುಳಿದ ವರ್ಗಗಳ ಎಲ್ಲಾ ಸ್ವಾಮೀಜಿಗಳನ್ನು ಒಳಗೊಂಡಂತೆ ಮಹಾ ಪಂಚಾಯತ್ ಹೆಸರಲ್ಲಿ ಪ್ರತಿಭಟನೆಯನ್ನು ತೀವ್ರಗೊಳಿಸುತ್ತೇವೆ. ಸರ್ಕಾರಕ್ಕೆ ಇದು ಕೊನೆಯ ಎಚ್ಚರಿಕೆಯಾಗಿದೆ ಎಂದರು.
ಹಿಂದುಳಿದ ವರ್ಗಗಳ ಒಕ್ಕೂಟದ ಅಧ್ಯಕ್ಷ ವಿ. ರಾಜು, ಪ್ರಮುಖರಾದ ಎನ್. ಉಮಾಪತಿ, ಡಿ.ಆರ್.ಉಮೇಶ್ ಯಾದವ್, ರಾಜೇಶ್, ಮನೋಹರ್, ಜನಮೇಜಿ ರಾವ್, ನಟರಾಜ್, ಲೋಕೇಶ್ ಉಪಸ್ಥಿತರಿದ್ದರು.