ಸುದ್ದಿ ಕಣಜ.ಕಾಂ ಸೊರಬ
SORAB: ಸೊರಬ ತಾಲೂಕಿನ ಹಲವು ಗ್ರಾಮಗಳಲ್ಲಿ ವಿದ್ಯುತ್ ಪರಿವರ್ತಕಗಳು ಹಾಳಾಗಿದ್ದು ಸಕಾಲದಲ್ಲಿ ಸಕಾಲಕ್ಕೆ ವಿದ್ಯುತ್ ಸರಬರಾಜಾಗದೇ ರೈತರು ಸಂಕಷ್ಟಕ್ಕೀಡಾಗುವಂತಾಗಿದೆ. ಮೆಸ್ಕಾಂ ಅಧಿಕಾರಿಗಳು ಕೂಡಲೇ ಬದಲಿ ಟಿ.ಸಿಗಳನ್ನು ಅಳವಡಿಸಿವಂತೆ ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ (Dr.R.Selvamani) ನಿರ್ದೇಶ ನೀಡಿದರು.
ಸೊರಬ ತಾಲೂಕಿನ ಬಯಲು ರಂಗಮಂದಿರದಲ್ಲಿ ಸೋಮವಾರ ಏರ್ಪಡಿಸಲಾಗಿದ್ದ ಜನತಾ ದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
READ | ಶಿವಮೊಗ್ಗದಲ್ಲಿ ಮುಂದುವರಿದ ಮಳೆ, ಎಲ್ಲೆಲ್ಲಿ ಏನೇನು ಹಾನಿ?
14 ಟಿಸಿಗಳ ಶೀಘ್ರ ದುರಸ್ತಿಗೆ ಸೂಚನೆ
ರೈತರ ಕೃಷಿ ಚಟುವಟಕೆಗಳಿಗೆ ಸಕಾಲದಲ್ಲಿ ವಿದ್ಯುತ್ ಸರಬರಾಜಾಗದಿರುವ, ವಿದ್ಯುತ್ ಪರಿವರ್ತಕಗಳನ್ನು ದುರಸ್ತಿ ಮಾಡದಿರುವ ಬಗ್ಗೆ ಹಾಗೂ ಇಲಾಖೆಯ ಸೇವೆಗಳನ್ನು ಒದಗಿಸಲು ಹಣಕ್ಕಾಗಿ ಬೇಡಿಕೆ ಇಡುತ್ತಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ಗಂಭೀರ ಸ್ವರೂಪದ ಆರೋಪಗಳು ಕೇಳಿಬಂದಿವೆ. ಸಾರ್ವಜನಿಕ ಸೇವೆ ಒದಗಿಸುವಲ್ಲಿ ಮೆಸ್ಕಾಂ ಅಧಿಕಾರಿಗಳು ಇನ್ನಾದರೂ ತಮ್ಮ ಜವಾಬ್ದಾರಿಯರಿತು ಕಾರ್ಯನಿರ್ವಹಿಸುವಂತೆ ಹಾಗೂ ಬೆಟ್ಟದಕೂರ್ಲಿ ಗ್ರಾಮ ಸೇರಿದಂತೆ ಬಹುದಿನಗಳಿಂದ ದುರಸ್ತಿಯಾಗದೇ ಉಳಿದಿರುವ 14 ಟಿ.ಸಿ.ಗಳನ್ನು ಕೂಡಲೇ ದುರಸ್ತಿಗೊಳಿಸಿ, ತ್ರಿಫೇಸ್ ವಿದ್ಯುತ್ ನೀಡುವಂತೆ ಮೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದರು.
ತಹಶೀಲ್ದಾರರು ಕಂದಾಯ ಇಲಾಖೆಗೆ ಸಂಬಂಧಿಸಿದ ಅರ್ಜಿಗಳನ್ನು ತ್ವರಿತವಾಗಿ ವಿಲೇ ಮಾಡುವಂತೆ ಸೂಚಿಸಿದ ಅವರು, ಅಗತ್ಯವಿದ್ದಲ್ಲಿ ಖುದ್ದು ಭೇಟಿ ನೀಡಿ ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಸಲಹೆ ನೀಡಿದರು.
ಅರ್ಜಿದಾರರು ತಮ್ಮ ಅರ್ಜಿಗಳ ಮೇಲೆ ಮೊಬೈಲ್ ನಂಬರನ್ನು ನಮೂದಿಸಿ. ಇದರಿಂದಾಗಿ ತಮ್ಮ ಅರ್ಜಿಯನ್ನು ಆನ್ಲೈನ್ನಲ್ಲಿ ದಾಖಲಿಸಿ, ಅರ್ಜಿಯ ಬಗ್ಗೆ ಕೈಗೊಳ್ಳಲಾದ ಕ್ರಮದ ಬಗ್ಗೆ ತಮಗೆ ಮಾಹಿತಿ ನೀಡಲಾಗುವುದು. ಹಿರಿಯ ನಾಗರೀಕರು, ಮಹಿಳೆಯರು, ಸಾರ್ವಜನಿಕರ ವೈಯಕ್ತಿಕ ಹಾಗೂ ಗುಂಪುಗಳಿಂದ ಅರ್ಜಿಗಳನ್ನು ನಿಯಮಾನುಸಾರ ಪಡೆದುಕೊಳ್ಳಲಾಗುವುದು.
– ಸಿದ್ಧಲಿಂಗರೆಡ್ಡಿ, ಅಪರ ಜಿಲ್ಲಾಧಿಕಾರಿ
800ಕ್ಕೂ ಹೆಚ್ಚು ಅರ್ಜಿ ಬಾಕಿ
ಸಾಗರದ ಉಪವಿಭಾಗಾಧಿಕಾರಿಗಳ ಕಾರ್ಯಾಲಯದಲ್ಲಿ ಬಾಕಿ ಇರುವ 800ಕ್ಕೂ ಹೆಚ್ಚಿನ ಟ್ರಿಬ್ಯುನಲ್ ಅರ್ಜಿಗಳನ್ನು ತ್ವರಿತಗತಿಯಲ್ಲಿ ವಿಲೇಗೊಳಿಸಬೇಕು ಎಂದು ಉಪವಿಭಾಗಾಧಿಕಾರಿಗಳಿಗೆ ಸೂಚಿಸಿದ ಅವರು ಸೊರಬದ ತಹಶೀಲ್ದಾರರು ತಮ್ಮ ಕಾರ್ಯಕ್ಷೇತ್ರದ ವ್ಯಾಪ್ತಿಯಲ್ಲಿ ಬಾಕಿ ಇರುವ ಇನಾಂ ಅರ್ಜಿಗಳ ಮಾಹಿತಿಯನ್ನು ಈ ಕೂಡಲೇ ನೀಡುವಂತೆ ಸೂಚಿಸಿದರು.
ಸಾಮಾಜಿಕ ಬಹಿಷ್ಕಾರ ಸೌಹಾರ್ದಯುತವಾಗಿ ಇತ್ಯರ್ಥ ಮಾಡಿ
ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಹವಾಲುಗಳನ್ನು ಸ್ಥಳೀಯವಾಗಿಯೇ ಇತ್ಯರ್ಥಗೊಳಿಸಬೇಕು. ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಕೂಡಲೇ ಗಮನಹರಿಸಬೇಕು. ಆಧುನಿಕ ಯುಗದಲ್ಲೂ ಅದರಲ್ಲೂ ಗ್ರಾಮೀಣ ಮಟ್ಟದಲ್ಲಿ ಸಾಮಾಜಿಕ ಬಹಿಷ್ಕಾರದಂತಹ ಪ್ರಕರಣಗಳು ಕೇಳಿ ಬರುತ್ತಿರುವುದು ನಾಗರೀಕ ಸಮಾಜದ ಲಕ್ಷಣವಲ್ಲ. ತಹಶೀಲ್ದಾರರು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಖುದ್ದು ಭೇಟಿ ನೀಡಿ ಪರಿಶೀಲಿಸಿ, ಸಮಸ್ಯೆಯನ್ನು ಸೌಹಾರ್ದಯುತವಾಗಿ ಇತ್ಯರ್ಥ್ಯಗೊಳಿಸಬೇಕು. ಈ ಘಟನೆಗಳು ಪುನರಾವರ್ತನೆಯಾಗದಂತೆ ಗಮನಿಸಬೇಕು. ಪದೇಪದೇ ಪ್ರಕರಣಗಳು ಗೋಚರಿಸಿದಲ್ಲಿ ಸಂಬಂಧಿಸಿದ ವ್ಯಕ್ತಿ ಅಥವಾ ಗುಂಪುಗಳ ಮೇಲೆ ನಿಯಮಾನುಸಾರ ಮೊಕದ್ದಮೆ ದಾಖಲಿಸುವಂತೆ ತಿಳಿಸಿದರು.
ಸೊರಬ ಪಟ್ಟಣದ ಪ್ರಮುಖ ಬೀದಿಯಲ್ಲಿ ರಸ್ತೆ ಅಗಲೀಕರಣ ಕಾಮಗಾರಿಗೆ ಭೂಮಾಲಿಕರ ನಿವೇಶನ ಸ್ವಾದೀನಪಡಿಸಿಕೊಂಡು ದಶಕಗಳೇ ಉರುಳಿವೆ. ಈವರೆಗೆ ಕೈಗೊಂಡಿರುವ ಕಾಮಗಾರಿ ಅವೈಜ್ಞಾನಿಕವಾಗಿ ಕೂಡಿದೆ. ಕೆಲವು ಸ್ಥಳಗಳಲ್ಲಿ ಅಗಲೀಕರಣ ನಿಯಮಾನುಸಾರ ನಡೆಯದೇ ಇನ್ನೂ ಕಾಮಗಾರಿ ಮುಂದುವರೆಯುತ್ತಿರುವುದು ಜನಸಾಮಾನ್ಯರಲ್ಲಿ ಅಕ್ರೋಶಕ್ಕೆ ಕಾರಣವಾಗಿದೆ. ಈ ಕೂಡಲೇ ಕಾಮಗಾರಿಯನ್ನು ಪೂರ್ಣಗೊಳಿಸಿ, ಜೊತೆಗೆ ಖುದ್ದು ಭೇಟಿ ನೀಡಿ ವಾಸ್ತವವನ್ನು ಅರಿತು ಕ್ರಮ ಕೈಗೊಳ್ಳಿ.
– ಮಂಜಪ್ಪ, ಮುಖಂಡರು, ಸೊರಬ.
102 ಅರ್ಜಿ ಸಲ್ಲಿಕೆ
ಬೇಸಿಗೆಯಲ್ಲಿ ಶುದ್ಧ ಕುಡಿಯುವ ನೀರನ್ನು ಒದಗಿಸಿ. ಅದಕ್ಕಾಗಿ ಹೆಚ್ಚಿನ ಅನುದಾದನ ಬಿಡುಗಡೆಗೊಳಿಸಿ ಮುಂತಾದ ಮೆಸ್ಕಾಂ, ಕಂದಾಯ, ಲೋಕೋಪಯೋಗಿ, ಆಹಾರ, ಶಿಕ್ಷಣ ಇಲಾಖೆಗೆ ಸಂಬಂಧಿಸಿದಂತೆ ಸುಮಾರು 102 ಅರ್ಜಿಗಳು ಜನತಾದರ್ಶನದಲ್ಲಿ ಸಾರ್ವಜನಿಕರಿಂದ ಸಲ್ಲಿಕೆಯಾದವು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸ್ನೇಹಲ್ ಸುಧಾಕರ್ ಲೋಖಂಡೆ, ಅಪರ ಜಿಲ್ಲಾಧಿಕಾರಿ ಸಿದ್ದಲಿಂಗರೆಡ್ಡಿ, ಉಪವಿಭಾಗಾಧಿಕಾರಿ ಕು.ಪಲ್ಲವಿ ಸಾತೇನಹಳ್ಳಿ, ಶಿಕಾರಿಪುರ ಡಿವೈಎಸ್ಪಿ. ಶಿವಾನಂದ್, ತಹಶೀಲ್ದಾರ್ ಹುಸೇನ್ ಸರ್ಕಾರ್, ತಾಲೂಕು ಕಾರ್ಯನಿರ್ವಾಹಕ ಅಧಿಕಾರಿ ದೀಪಕ್ ಸೇರಿದಂತೆ ಜಿಲ್ಲೆಯ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಜನತಾ ದರ್ಶನದಲ್ಲಿ ಕೇಳಿ ಬಂದ ಅಹವಾಲುಗಳು
- ಸರ್ಕಾರದ ಯೋಜನೆಗಳಿಗೆ ಖಾಸಗಿ ವ್ಯಕ್ತಿಗಳ ಭೂಮಿಯನ್ನು ಸ್ವಾಧೀನಪಡಿಸಿಕೊಂಡ ಪ್ರಕರಣಗಳಿದ್ದಲ್ಲಿ ಅಂತಹ ಭೂ ಮಾಲೀಕರಿಗೆ ಪರಿಹಾರಧನ ನೀಡಿ.
- ಖಾತೆ ಬದಲಾವಣೆ ಅರ್ಜಿಗಳನ್ನು ಕೂಡಲೇ ಇತ್ಯರ್ಥಪಡಿಸಿ.
- ವಿದ್ಯುತ್ ಲೈನ್ ಒದಗಿಸಿ.
- ಖಬರಸ್ತಾನಕ್ಕೆ ನಿವೇಶನ ಒದಗಿಸಿ.
- ಪುರಸಭೆ ವ್ಯಾಪ್ತಿಯಲ್ಲಿ ನಿವೇಶನ ನೀಡಿ.
- ಮಾಸಾಶನ ನೀಡಿ.
- ಎಂ.ಎಸ್.ಐ.ಎಲ್. ಮದ್ಯ ಮಾರಾಟ ಮಳಿಗೆಯಲ್ಲಿ ನಿಗದಿತ ಬೆಲೆಗಿಂತ ಹೆಚ್ಚಿನ ಬೆಲೆಗೆ ಮದ್ಯ ಮಾರಾಟ.
- ಕೆರೆ ಒತ್ತುವರಿ ತೆರವುಗೊಳಿಸಿ.
- ಗಂಗಾಕಲ್ಯಾಣ ಯೋಜನೆಯಡಿ ಕೊಳವೆಬಾವಿ ಕೊರೆಸಿಕೊಡಿ.
Janata darshana | ಶಿವಮೊಗ್ಗ ಜನತಾದರ್ಶನದಲ್ಲಿ ಸಲ್ಲಿಕೆಯಾದ ಅರ್ಜಿಗಳೆಷ್ಟು? ಯಾವ ಇಲಾಖೆಯ ಎಷ್ಟು ಅರ್ಜಿ ಸಲ್ಲಿಕೆ