ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಜಿಲ್ಲೆಯಲ್ಲಿ ಮಳೆ ಮುಂದುವರಿದಿದೆ. ಸೋಮವಾರ ಸಂಜೆಯ ನಂತರ ಸೋನೆ ಮಳೆ ಸುರಿಯುತ್ತಿದೆ.
READ | ಸಕ್ರೆಬೈಲು ಆನೆಬಿಡಾರಕ್ಕೆ ಮತ್ತೊಂದು ಅತಿಥಿಯ ಆಗಮನ, ಬಿಡಾರದಲ್ಲಿ ಈಗ ಆನೆಗಳೆಷ್ಟಿವೆ?
ಭಾನುವಾರ ರಾತ್ರಿ ಗುಡುಗು, ಮಿಂಚು ಮತ್ತು ಬಿರುಗಾಳಿ ಸಹಿತ ಮಳೆಯಿಂದ ಹಲವೆಡೆ ಅನಾಹುತ ಸಂಭವಿಸಿದೆ. ಹೊಸನಗರ ತಾಲೂಕು ರಿಪ್ಪನ್ಪೇಟೆ ಸಮೀಪದ ಕೋಡೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಚ್.ಕುನ್ನೂರು ಗ್ರಾಮದಲ್ಲಿ ಮನೆಯ ಮೇಲೆ ಮರವೊಂದು ಬಿದ್ದು, ಮನೆಯವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಎಚ್. ಕುನ್ನೂರು ಗ್ರಾಮದ ತಿಮ್ಮಪ್ಪ ಎಂಬುವವರ ಮನೆಯ ಮೇಲೆ ಬೃಹದಾಕಾರದ ಮರ ಬುಡ ಸಮೇತ ಬಿದ್ದಿದ್ದು, ಮನೆ ಸಂಪೂರ್ಣ ಹಾನಿಗೀಡಾಗಿದೆ. ಆಶಾ ಕಾರ್ಯಕರ್ತೆಯಾದ ವಿನೂತ, ತಿಮ್ಮಪ್ಪ ದಂಪತಿಗಳು ಸಣ್ಣ-ಪುಟ್ಟ ಗಾಯಗಳಾಗಿವೆ.
ಏನೆಲ್ಲ ಹಾನಿಯಾಗಿದೆ?
ಮನೆಯಲ್ಲಿದ್ದ ಟಿವಿ ಸೇರಿದಂತೆ ದವಸ, ಧಾನ್ಯಗಳು, ಆಹಾರ ಪದಾರ್ಥಗಳು ಹಾಳಾಗಿವೆ. ಚಾವಣಿಯ ಸಿಮೆಂಟ್ ಶೀಟ್, ಹೆಂಚುಗಳು ಭಾಗಶಃ ಜಖಂಗೊಂಡಿವೆ.
ಘಟನೆಯ ಬಗ್ಗೆ ಮಾಹಿತಿ ಲಭ್ಯವಾಗಿದ್ದೇ ಸ್ಥಳಕ್ಕೆ ಕೋಡೂರು ಗ್ರಾಪಂ ಅಧ್ಯಕ್ಷ ಉಮೇಶ್, ಸದಸ್ಯ ಮಂಜಪ್ಪ, ಪಿಡಿಒ ನಾಗರಾಜ್, ತಾಪಂ ಮಾಜಿ ಸದಸ್ಯ ಚಂದ್ರಮೌಳಿ ಇತರರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಶಿವಮೊಗ್ಗದಲ್ಲೂ ಕೆಲವೆಡೆ ವಿದ್ಯುತ್ ಕಂಬಗಳು ವಾಲಿವೆ.