ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಸೈಯದ್ ಸಾದಿಕ್ ಎಂಬಾತನ ಬಳಿ ಟಾಟಾ ಇನ್ನೋವಾ ಕಾರು ಪಡೆದು ವಾಪಸ್ ನೀಡದೇ ವಂಚನೆ ಮಾಡಿರುವ ಆರೋಪದ ಮೇರೆಗೆ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ. ಆತನ ಬಳಿ ಇದ್ದ ವಿವಿಧ ಕಂಪನಿಗಳ ಕಾರುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಸ್ವಾಮಿ ವಿವೇಕಾನಂದ ಬಡಾವಣೆ ನಿವಾಸಿ ಎ.ಕಿರಣ್ ಕುಮಾರ್ ಅಲಿಯಾಸ್ ಗುಂಡ (35) ಬಂಧಿತ ಆರೋಪಿ. ಇವನ ಬಳಿಯಿಂದ ಅಂದಾಜು ₹10 ಲಕ್ಷ ಮೌಲ್ಯದ 2 ಟೊಯೋಟಾ ಇನ್ನೋವಾ ಕಾರು, 3 ಸ್ವಿಫ್ಟ್ ಡಿಸೈರ್ ಕಾರು ಮತ್ತು 3 ಮಾರುತಿ ಸುಜುಕಿ ಎರ್ಟಿಗಾ ಕಾರು ಸೇರಿದಂತೆ ಒಟ್ಟು 8 ಕಾರುಗಳನ್ನು ವಶಪಡಿಸಿಕೊಳ್ಳಲಾಗಿದೆ.
READ | ಶಿವಮೊಗ್ಗದಲ್ಲಿ ಮುಂದುವರಿದ ಮಳೆ, ಎಲ್ಲೆಲ್ಲಿ ಏನೇನು ಹಾನಿ?
ಪೊಲೀಸರ ಕಾರ್ಯಾಚರಣೆ
ಆರ್.ಎಂ.ಎಲ್ ನಗರದ ಸೈಯದ್ ಸಾದಿಕ್ ಅವರ ಕಾರನ್ನು ಆತನ ಪರಿಚಯಸ್ಥನಾದ ಕಿರಣ್ ಕುಮಾರ್ ತೆಗೆದುಕೊಂಡು ಹೋಗಿ ವಾಪಾಸ್ ಕೊಡದೇ, ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಮೋಸ ಮಾಡಿರುತ್ತಾನೆಂದು ಸಾದಿಕ್ ನೀಡಿದ ದೂರಿನ ಮೇರೆಗೆ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.
ಆರೋಪಿ ಹಾಗೂ ಕಾರಿನ ಪತ್ತೆಗೆ ಎಸ್.ಪಿ ಮಿಥುನ್ ಕುಮಾರ್, ಹೆಚ್ಚುವರಿ ಎಸ್.ಪಿ ಅನಿಲ್ ಕುಮಾರ್ ಭೂಮರಡ್ಡಿ ಮಾರ್ಗದರ್ಶನದಲ್ಲಿ ಡಿವೈಎಸ್.ಪಿ ಬಿ.ಬಾಲರಾಜು ಮೇಲ್ವಿಚಾರಣೆಯಲ್ಲಿ ದೊಡ್ಡಪೇಟೆ ಪಿಐ ಅಂಜನ್ ಕುಮಾರ್ ನೇತೃತ್ವದ ಪಿಎಸ್ಐ ಮಂಜಮ್ಮ ಸಿಬ್ಬಂದಿ ಲಚ್ಚಾನಾಯ್ಕ, ಪಾಲಾಕ್ಷನಾಯ್ಕ, ರಮೇಶ್, ನಿತಿನ್ ಮತ್ತು ಚಂದ್ರನಾಯ್ಕ ಅವರುಗಳನ್ನೊಳಗೊಂಡ ತನಿಖಾ ತಂಡವನ್ನು ರಚಿಸಲಾಗಿತ್ತು. ತನಿಖಾ ತಂಡದ ಕಾರ್ಯವನ್ನು ಎಸ್.ಪಿ ಪ್ರಶಂಸಿಸಿದ್ದಾರೆ.