ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಉತ್ಪಾದಕರಿಂದ ಹಾಲು ಖರೀದಿ ದರ ಇಳಿಕೆ ಮಾಡಿರುವುದನ್ನು ಖಂಡಿಸಿ ಭಾರತೀಯ ಕಿಸಾನ್ ಸಂಘ ದಕ್ಷಿಣ ಪ್ರಾಂತ್ಯದ ನೇತೃತ್ವದಲ್ಲಿ ಹಾಲು ಉತ್ಪಾದಕ ರೈತರು ಶಿಮುಲ್ ಎದುರು ರಸ್ತೆಗೆ ಹಾಲು ಸುರಿದು ಬೃಹತ್ ಪ್ರತಿಭಟನೆ ನಡೆಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯ ಸರ್ಕಾರ ಈ ಹಿಂದೆ 2023ರ ಅಗಸ್ಟ್ 1 ರಂದು 1 ಲೀಟರ್ಗೆ ₹3 ಏರಿಕೆ ಮಾಡಿತ್ತು. ಆಗ ರೈತರಿಗೆ ₹33.50 ಸಿಗುತ್ತಿತ್ತು. ಮತ್ತೆ ಅಕ್ಟೋಬರ್ 1 ರಂದು ಪ್ರತಿ ಲೀಟರ್ಗೆ ₹1.25 ಕಡಿತವಾಗಿ ₹31.75 ಸಿಗುತ್ತಿತ್ತು. ಆದರೆ ಈಗ ಮತ್ತೆ ಲೀಟರ್ಗೆ ₹2 ಕಡಿಮೆ ಮಾಡಿ ₹29.75 ಕೊಡುತ್ತಿದ್ದಾರೆ. ಕಳೆದ 8 ತಿಂಗಳಿನಲ್ಲಿ ₹3 ಏರಿಕೆ ಮಾಡಿ ₹3.70 ಕಡಿತ ಮಾಡಿದ್ದಾರೆ. ಅಂದರೆ ಮೂಲ ದರಕ್ಕಿಂತ 70 ಪೈಸೆ ಕಡಿಮೆಯಾಗಿದೆ ಎಂದು ಪ್ರತಿಭಟನಕಾರರು ಆರೋಪಿಸಿದರು.
ಹಾಲು ಉತ್ಪಾದಕರು ಸಂಕಷ್ಟ ಎದುರಿಸುತ್ತಿದ್ದಾರೆ. ಪಶು ಆಹಾರ ದರ ಕೂಡ ಏರಿಕೆಯಾಗಿದೆ. ಉತ್ಪಾದನಾ ವೆಚ್ಚ ಹೆಚ್ಚಾಗಿದೆ. ಅತಿವೃಷ್ಟಿ ಇಲ್ಲವೇ ಅನಾವೃಷ್ಟಿಗೆ ರೈತರು ತೊಂದರೆಗೆ ಒಳಗಾಗಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಹೈನುಗಾರಿಕೆಯಿಂದ ಜೀವನ ಸಾಗಿಸೋಣ ಎಂದರೆ ಸರ್ಕಾರ ಹಾಲಿನ ದರದ ಹಾವು ಏಣಿ ಆಡವಾಡುತ್ತಿದೆ ಎಂದು ಪ್ರತಿಭಟನಕಾರರು ಆಕ್ರೊಶ ವ್ಯಕ್ತಪಡಿಸಿದರು.
READ | ಶರಾವತಿ ಹಿನ್ನೀರು ಪ್ರದೇಶದಲ್ಲಿ ಭೀತಿ ಹುಟ್ಟಿಸಿದ್ದ ಗ್ಯಾಂಗ್ ಮೆಂಬರ್ ಅರೆಸ್ಟ್, ನಡೆದಿದೆ ಉಳಿದವರ ಶೋಧ
ರೈತರ ಬೇಡಿಕೆಗಳೇನು?
- ಹಾಲು ಉತ್ಪಾದಕರಿಗೆ ಪ್ರತಿ ಲೀಟರ್ಗೆ ಕನಿಷ್ಠ 3.5 ಫ್ಯಾಟ್ ಗೆ ₹50 ನಿಗದಿ ಮಾಡಬೇಕು.
- ಪಶು ಆಹಾರ ದರವನ್ನು 50 ಕೆ.ಜಿ. ಚೀಲಕ್ಕೆ ₹800 ನಿಗದಿ ಮಾಡಬೇಕು.
- ಪಶು ಕಾರ್ಖಾನೆಗಳಿಗೆ ಕರ್ನಾಟಕ ರೈತರಿಂದ ಬೆಳೆದ ಮೆಕ್ಕೆಜೋಳವನ್ನು ಖರೀದಿ ಮಾಡಬೇಕು.
- ಉತ್ಪಾದಕರ ಹಸುಗಳಿಗೆ ಮೇವಿನ ಬೀಜ ನೀಡಬೇಕು.
- ಕೃತಕ ಗರ್ಭಧಾರಣೆ ಉಚಿತವಾಗಿ ನೀಡಬೇಕು.
- ಸಹಾಯಧನವನ್ನು ಲೀಟರ್ ಗೆ ₹10 ವರೆಗೆ ಹೆಚ್ಚಿಸಬೇಕು.
- ನಷ್ಟ ತಪ್ಪಿಸಲು ಹೆಚ್ಚುವರಿ ನೌಕರರನ್ನು ಕೈಬಿಡಬೇಕು.
- ನಷ್ಟಕ್ಕಾಗಿ ಹಾಲಿನ ದರ ಕಡಿಮೆ ಮಾಡಿದಂತೆ ನೌಕರರ ವೇತನವನ್ನೂ ಕಡಿಮೆ ಮಾಡಬೇಕು.
ಬೇಡಿಕೆ ಈಡೇರದಿದ್ದರೆ ಹೋರಾಟ ತೀವ್ರ
ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ರೈತ ಮುಖಂಡರು, ಬೇಡಿಕೆಗಳನ್ನು ಸರ್ಕಾರ ಈಡೇರಿಸಬೇಕು. ಇಳಿಸಿದ ಹಾಲಿನ ದರವನ್ನು ತಕ್ಷಣವೇ ಏರಿಸಬೇಕು. ಇಲ್ಲದಿದ್ದರೆ, ಗ್ರಾಮಗಳಲ್ಲಿ ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಮೂರು ಜಿಲ್ಲೆಗಳ ನೂರಾರು ಹಾಲು ಉತ್ಪಾದಕರು ಭಾಗವಹಿಸಿದ್ದರು. ಭಾರತೀಯ ಕಿಸಾನ್ ಸಂಘದ ಕರ್ನಾಟಕ ದಕ್ಷಿಣ ಪ್ರಾಂತ್ಯದ ಉಪಾಧ್ಯಕ್ಷ ಕೆ.ಸಿ. ಸದಾಶಿವಪ್ಪ ಪ್ರವೀಣ್ ಪಟೇಲ್, ಗಂಗಾಧರ ಕಾಸರಗೂಡು, ಭೀಮರಾವ್, ಸುಧಾಪರಮೇಶ್ವರಪ್ಪ, ಅಮೃತಾ ಚಳ್ಳಕೆರೆ ಇತರರು ಉಪಸ್ಥಿತರಿದ್ದರು.
ವಾಹನ ಸಂಚರಿಸಲಾಗದೇ ಟ್ರಾಫಿಕ್ ಜಾಮ್
ಪ್ರತಿಭಟನಾಕಾರರು ಶಿಮುಲ್ ಎದುರುಗಡೆಯೇ ಪ್ರತಿಭಟನೆ ಹಾಗೂ ರಸ್ತೆ ತಡೆ ನಡೆಸಿದ್ದರಿಂದ ಶಿವಮೊಗ್ಗ-ಭದ್ರಾವತಿ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ವಾಹನಗಳು ಗಂಟೆಗಟ್ಟಲೆ ನಿಲ್ಲುವಂತಾಯಿತು.