ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಬ್ಯಾಂಕ್ ಮತ್ತು ಇನ್ಶೂರೆನ್ಸ್ ಕಂಪನಿ ವಿರುದ್ದ ಸೇವಾನ್ಯೂನ್ಯತೆ ಕುರಿತು ದಾಖಲಿಸಿದ್ದ ಪ್ರಕರಣದಲ್ಲಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷರ ಪೀಠವು ಅರ್ಜಿದಾರರಿಗೆ ಪರಿಹಾರ ಒದಗಿಸುವಂತೆ ಆದೇಶಿಸಿದೆ.
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಹೊನ್ನೇಕೆರೆ ಗ್ರಾಮದ ಪೂರ್ವಾನಾಯ್ಕ್ ಎಂಬುವವರು 1ನೇ ಎದುರುದಾರರಾದ ಬ್ಯಾಂಕ್ ಆಫ್ ಬರೋಡ ತೀರ್ಥಹಳ್ಳಿ ಮತ್ತು 2ನೇ ಎದುರುದಾರರಾದ ಟಾಟಾ ಎಐಜಿ ಜನರಲ್ ಇನ್ಸೂರೆನ್ಸ್ ಕಂಪನಿ ಲಿ. ಎಂಬುವವರ ವಿರುದ್ಧ ಸೇವಾನ್ಯೂನ್ಯತೆ ಕುರಿತು ಆಪಾದಿಸಿ ಪ್ರಕರಣ ದಾಖಲಿಸಿದ್ದರು.
READ | ಟ್ರಾಫಿಕ್ ನಿಯಮ ಉಲ್ಲಂಘಿಸಿದ ವಾಹನಗಳಿಗೆ ಮೀಟರ್ ಉದ್ದದ ದಂಡದ ಚಲನ್, ಎಷ್ಟುದಂಡ ವಿಧಿಸಲಾಗಿದೆ?
ಪ್ರಕರಣದ ವಿವರ
ಅರ್ಜಿದಾರರು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಹೊನ್ನೇಕೆರೆಯಲ್ಲಿ 2 ಎಕರೆ ಜಮೀನನ್ನು ಹೊಂದಿದ್ದು, 2017ರಲ್ಲಿ ಬ್ಯಾಂಕ್ ಆಫ್ ಬರೋಡದವರಿಂದ ಸಾಲ ಪಡೆದು ಇಲ್ಲಿ ಒಂದು ಕಟ್ಟಡವನ್ನು ನಿರ್ಮಿಸಿರುತ್ತಾರೆ. ಈ ಕಟ್ಟಡಕ್ಕೆ 2ನೇ ಎದುರುದಾರರಾದ ವಿಮಾ ಕಂಪನಿಯವರಿಂದ 2021ರ ಮಾರ್ಚ್ 22ರಲ್ಲಿ ಪ್ರಿಮಿಯಮ್ ಮೊತ್ತವನ್ನು ಪಾವತಿಸಿ ಪಾಲಿಸಿಯನ್ನು ಕೂಡ ಪಡೆದಿದ್ದು 2022ರ ಫೆಬ್ರವರಿ 28ರಂದು ಈ ಕಟ್ಟಡವು ಗುಡುಗು ಮತ್ತು ಸಿಡಿಲಿನ ಹೊಡೆತದಿಂದಾಗಿ ಹಾನಿಗೊಳಗಾಗಿರುತ್ತದೆ.
ಅರ್ಜಿದಾರರು 1 ಮತ್ತು 2ನೇ ಎದುರುದಾರರನ್ನು ಸಂಪರ್ಕಿಸಿ ಕಟ್ಟಡಕ್ಕೆ ಉಂಟಾದ ಹಾನಿಗೆ ಸಂಬಂಧಿಸಿದಂತೆ, ಇಂಜಿನಿಯರ್ ನೀಡಿರುವ ಅಂದಾಜು ಪಟ್ಟಿ ಪ್ರಕಾರ ₹18,15,000 ಗಳನ್ನು ವಿಮಾ ಪರಿಹಾರವಾಗಿ ಪಾವತಿಸುವಂತೆ ಕೋರಿರುತ್ತಾರೆ. ಆದರೆ 2ನೇ ಎದುರುದಾರರು ವಿಮಾ ಕಂಪನಿಯವರು ಈ ಕಟ್ಟಡವನ್ನು ಫಿರ್ಯಾದಿದಾರರು ಕೋಳಿ ಸಾಕಾಣಿಕೆಗೆ ಮತ್ತು ಆಹಾರ ಸಂಗ್ರಹಣೆಗೆ ಬಳಸಿದ್ದರಿಂದ ಮತ್ತು ಆ ರೀತಿಯ ಕಟ್ಟಡದ ಬಳಕೆಯು ವಿಮಾ ಪಾಲಿಸಿಯ ಷರತ್ತು ಮತ್ತು ನಿಬಂಧನೆಗಳ ಉಲ್ಲಂಘನೆ ಆಗಿರುವುದರಿಂದ ವಿಮಾ ಪರಿಹಾರವನ್ನು ನೀಡಲಾಗುವುದಿಲ್ಲ ಎಂದು ಅರ್ಜಿಯನ್ನು ತಿರಸ್ಕರಿಸಿರುತ್ತಾರೆ.
ಪರಿಹಾರ ಪಾವತಿಸಲು ಸೂಚನೆ
ಪ್ರಕರಣದ ಅಂಶಗಳು, ಎದುರುದಾರರ ಹೇಳಿಕೆಗಳು ಉಭಯ ಪಕ್ಷೇತರರು ಹಾಜರುಪಡಿಸಿದ ಎಲ್ಲ ಸೂಕ್ತ ದಾಖಲೆಗಳನ್ನು ಆಯೋಗವು ಕುಲಂಕುಶವಾಗಿ ಪರಿಶೀಲಿಸಿ 1ನೇ ಎದುರುದಾರರು ಫರ್ಯಾದಿದಾರರು ನಿರ್ಮಿಸಿರುವ ಕಟ್ಟಡಕ್ಕೆ ಆರ್ಥಿಕ ಸಹಾಯವನ್ನು ಮಾತ್ರ ಮಾಡಿದವರಾಗಿದ್ದು, 2ನೇ ಎದುರುದಾರರಾದ ವಿಮಾ ಕಂಪನಿಯವರು ಈ ಕಟ್ಟಡಕ್ಕೆ ವಿಮಾ ಪಾಲಿಸಿಯನ್ನು ನೀಡಿದವರಾಗಿರುವುದರಿಂದ, ಕಟ್ಟಡದ ಹಾನಿಗೆ ಸಂಬಂಧಿಸಿದಂತೆ ₹18,15,000 ಗಳ ವಿಮಾ ಪರಿಹಾರ ಮೊತ್ತವನ್ನು ಪಾವತಿಸಲು ಬಾಧ್ಯರಾಗಿರುತ್ತಾರೆ ಎಂದು ತೀರ್ಮಾನಿಸಿರುತ್ತದೆ. ಹಾಗೂ ವಿಮಾ ಕಂಪನಿಯವರು ಕೇವಲ ತಾಂತ್ರಿಕ ಅಂಶಗಳ ಆಧಾರದ ಮೇಲೆ ವಿಮಾ ಪರಿಹಾರವನ್ನು ನಿರಾಕರಿಸುವಂತಿಲ್ಲವೆಂದು ಆದೇಶಿಸಿ ಪ್ರಕರಣವನ್ನು ಭಾಗಶಃ ಪುರಸ್ಕರಿಸಿರುತ್ತದೆ.
ವಿಮಾ ಕಂಪನಿಯವರು ಫಿರ್ಯಾದುದಾರರಿಗೆ ವಿಮಾ ಪರಿಹಾರ ₹18,15,000 ಗಳನ್ನು ವಾರ್ಷಿಕ ಶೇ.6 ಬಡ್ಡಿಯೊಂದಿಗೆ ಮರು ಪಾವತಿಸಬೇಕೆಂದು ಮತ್ತು ₹5,000 ಗಳನ್ನು ಮಾನಸಿಕ ಹಾನಿಗೆ ಸಂಬಂಧಿಸಿದಂತೆ ಹಾಗೂ ₹10,000 ಗಳನ್ನು ವ್ಯಾಜ್ಯದ ಖರ್ಚು ವೆಚ್ಚಗಳ ಬಾಬ್ತನ್ನು ಈ ಆದೇಶವಾದ 45 ದಿನದೊಳಗಾಗಿ ಪಾವತಿಸಬೇಕೆಂದು ಶಿವಮೊಗ್ಗ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ಟಿ. ಶಿವಣ್ಣ, ಮಹಿಳಾ ಸದಸ್ಯೆ ಸವಿತಾ ಬಿ. ಪಟ್ಟಣಶೆಟ್ಟಿ ಮತ್ತು ಸದಸ್ಯ ಬಿ.ಡಿ ಯೋಗಾನಂದ ಭಾಂಡ್ಯ ಇವರ ಪೀಠವು ಆದೇಶಿಸಿರುತ್ತದೆ.
Consumer court | ಕೋವಿಡ್ನಿಂದ ಮೃತಪಟ್ಟ ಪತಿ, ವಿಮಾ ಹಣ ನೀಡದ್ದಕ್ಕೆ ದಂಡ