ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: 75ನೇ ವರ್ಷದ ಹುಟ್ಟು ಹಬ್ಬದ ಅಂಗವಾಗಿ ಜ.27 ರಂದು ಅಮೃತಮಯಿ ಶೀರ್ಷಿಕೆಯಡಿ ನಗರದ ಸವಳಂಗ ರಸ್ತೆಯ ಸರ್ಜಿ ಕನ್ವೆನ್ಶನ್ ಹಾಲ್(Sarji Convention hall) ನಲ್ಲಿ ಅದ್ಧೂರಿ ಅಭಿನಂದನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಅಭಿನಂದನಾ ಸಮಿತಿಯ ಅಧ್ಯಕ್ಷರು ಹಾಗೂ ನಂಜಪ್ಪ ಗ್ರೂಪ್ ಆಫ್ ಹಾಸ್ಪಿಟಲ್ ಮ್ಯಾನೇಜಿಂಗ್ ಟ್ರಸ್ಟಿ ಡಿ.ಜಿ. ಬೆನಕಪ್ಪ (D.G.Benakappa) ಹೇಳಿದರು.
ಮಾಧ್ಯಮಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಅವರು, ಅಂದು ಸಂಜೆ 5.30 ಗಂಟೆಗೆ ಅಭಿನಂದನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸುಪ್ರೀಂ ಕೋರ್ಟ್ನ ವಿಶ್ರಾಂತ ನ್ಯಾಯಮೂರ್ತಿ ಶಿವರಾಜ್ ವಿ.ಪಾಟೀಲ್ ಉಪಸ್ಥಿತರಿರುವರು. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕಾರ್ಯಕ್ರಮ ಉದ್ಘಾಟಿಸುವರು. ಗೌಡರ ಬದುಕು- ಸಾಧನೆ ಕುರಿತ “ಎಸ್. ರುದ್ರೇಗೌಡ-ದಿ ಐರನ್ ಮ್ಯಾನ್” (S.Rudregowda- The Iron man) ಪುಸ್ತಕವನ್ನು ವಿಧಾನ ಪರಿಷತ್ ಸಭಾಪತಿಗಳಾದ ಬಸವರಾಜ್ ಹೊರಟ್ಟಿ ಅವರು ಬಿಡುಗಡೆ ಮಾಡಲಿದ್ದಾರೆ. ವಿಧಾನ ಪರಿಷತ್ ಮಾಜಿ ಸಭಾಪತಿಗಳಾದ ಬಿ.ಎಲ್.ಶಂಕರ್ ಅವರು ಗೌಡರ ಕುರಿತು ಅಭಿನಂದನಾ ನುಡಿಗಳನ್ನಾಡಲಿದ್ದಾರೆ ಎಂದು ತಿಳಿಸಿದರು.
ಅಭಿನಂದನಾ ಸಮಿತಿ ರಚನೆ
ಸಮಿತಿಯ ಪ್ರಧಾನ ಕಾರ್ಯದರ್ಶಿ ಡಾ.ಧನಂಜಯ ಸರ್ಜಿ ಮಾತನಾಡಿ, ಅಭಿನಂದನಾ ಸಮಿತಿಯನ್ನು ರಚಿಸಲಾಗಿದ್ದು, ಸಂಸದ ಬಿ.ವೈ.ರಾಘವೇಂದ್ರ ಅವರು ಗೌರವಾಧ್ಯಕ್ಷರಾಗಿದ್ದಾರೆ ಎಂದರು.
READ | ಜ.17ರಿಂದ ಸರಕು ಸಾಗಣೆ ವಾಹನಗಳ ಸೇವೆ ಸ್ಥಗಿತ, ಕಾರಣವೇನು?
ನಡೆಯಲಿವೆ 3 ಗೋಷ್ಠಿಗಳು
- ಗೋಷ್ಠಿ 1: ರಾಜಕೀಯ, ಶೈಕ್ಷಣಿಕ, ಸಾಮಾಜಿಕ ಮತ್ತು ಧಾರ್ಮಿಕವಾಗಿ ರುದ್ರೇಗೌಡರ ಕೊಡುಗೆ ದೊಡ್ಡದು. ಪರಿಸರ ಪ್ರಜ್ಞೆಯೇ ಸಮಾಜಸೇವೆ ಕುರಿತ ಮೊದಲ ಗೋಷ್ಠಿಯಲ್ಲಿ ತೇಜಸ್ವಿನಿ ಅನಂತಕುಮಾರ್ ಮಾತನಾಡುವರು.
- ಗೋಷ್ಠಿ 2: “ಮೌಲ್ಯಾಧಾರಿತ ರಾಜಕಾರಣ” ಗೋಷ್ಠಿಯಲ್ಲಿ ಕಾರ್ಕಳ ಶಾಸಕ ಸುನೀಲ್ ಕುಮಾರ್ ಮಾತನಾಡುವರು.
- ಗೋಷ್ಠಿ 3: “ಸಾಧನೆಗೊಂದು ಗುರಿ” ಗೋಷ್ಠಿಯಲ್ಲಿ ಕಿರ್ಲೋಸ್ಕರ್ ಕಂಪನಿಯ ಇಂಡಿಪೆಂಡೆಂಟ್ ಡೈರೆಕ್ಟರ್ ಬಿ.ಎಸ್. ಗೋವಿಂದ್ ಅವರು ಮಾತನಾಡುವರು. ಈ ಗೋಷ್ಠಿಗಳ ಅಧ್ಯಕ್ಷತೆ ಮತ್ತು ಉದ್ಘಾಟನೆಯನ್ನು ನಾಡೋಜ ಷಡಕ್ಷರಿ ಅವರು ನೆರವೇರಿಸಲಿದ್ದಾರೆ.
3 ರಿಂದ ಸಂಜೆ 5 ಗಂಟೆಯವರೆಗೆ ವಿವಿಧ ಕ್ಷೇತ್ರಗಳ ಆಯ್ದ ಯುವಕರೊಂದಿಗೆ ಶ್ರೀ ರುದ್ರೇಗೌಡರ ಬದುಕು-ಸಾಧನೆ ಕುರಿತು “ಅಂತರಂಗ-ಬಹಿರಂಗ” ಸಂವಾದ ಕಾರ್ಯಕ್ರಮವನ್ನು ಆಯೋಜಿಸಿದ್ದು, ಅವರ ಬೆಳವಣಿಗೆ, ಕಷ್ಟಗಳನ್ನು ಅವಕಾಶಗಳನ್ನಾಗಿಸಿಕೊಂಡು ಸಾಧಿಸಿದ ರೀತಿ, ಉದ್ಯಮಗಳನ್ನು ಕಟ್ಟಿದ ಶ್ರಮ, ಎಲ್ಲರನ್ನೂ ಜೊತೆಯಾಗಿ ಬೆಳೆಸಿದ ಪರಿ, ಈ ಎಲ್ಲ ವಿಚಾರಗಳನ್ನೂ ಅವರೊಂದಿಗಿನ ಆತ್ಮೀಯ ಸಂವಾದದಲ್ಲಿ ಅವರ ಪುತ್ರಿ ಶ್ರೀಮತಿ ಚೈತ್ರ ಅರುಣ್ ನಿರ್ವಹಿಸಲಿದ್ದಾರೆ ಎಂದರು.
ರುದ್ರೇಗೌಡರ ಬಗ್ಗೆ ಒಂದಿಷ್ಟು ಮಾಹಿತಿ
ಮಲೆನಾಡಿನ ಹೆಸರಾಂತ ಕೈಗಾರಿಕೋದ್ಯಮಿ ಮತ್ತು ವಿಧಾನ ಪರಿಷತ್ ಸದಸ್ಯರೂ ಆಗಿರುವ ಶ್ರೀ. ಎಸ್. ರುದ್ರೇಗೌಡರು ಚನ್ನಗಿರಿ ತಾಲ್ಲೂಕಿನ ಪುಟ್ಟ ಗ್ರಾಮ ಲಿಂಗದಹಳ್ಳಿಯ ಸಾಮಾನ್ಯ ರೈತ ಕುಟುಂಬದಿಂದ ಬಂದು ಅತ್ಯುನ್ನತ ಸಾಧನೆಗೈದವರು. ಶ್ರೀ ರುದ್ರೇಗೌಡರ ವ್ಯಕ್ತಿತ್ವದ ಭಾಗವಾದ ರಾಜಕಾರಣ, ಸಮಾಜ ಸೇವೆ, ಕೈಗಾರಿಕೆಗಳ ವಿಸ್ತೃತ ಚರ್ಚೆಯನ್ನು ಯುವ ಪೀಳಿಗೆಗೆ ದಾಟಿಸಲು “ಶ್ರಮದಿಂದ ಸಾರ್ಥಕತೆಯೆಡೆಗೆ” ಎನ್ನುವ ವಿಚಾರ ಸಂಕಿರಣವನ್ನು ಆಯೋಜಿಸಲಾಗಿದೆ. ಮೂವರು ಸ್ಪೂರ್ತಿದಾಯಕ ಸಾಧಕರಿಂದ ಯುವಕರಿಗೆ ಮಾರ್ಗದರ್ಶನ ಮಾಡಲಾಗುವುದು ಎಂದರು.
ವಿಧಾನ ಪರಿಷತ್ ಮಾಜಿ ಸದಸ್ಯರು ಹಾಗೂ ಅಭಿನಂದನಾ ಸಮಿತಿಯ ಪ್ರಮುಖ ಆರ್. ಕೆ. ಸಿದ್ರಾಮಣ್ಣ ಮಾತನಾಡಿದರು. ಅಭಿನಂದನಾ ಸಮಿತಿಯ ಪ್ರಮುಖರಾದ ಎಸ್.ಎಸ್. ಜ್ಯೋತಿ ಪ್ರಕಾಶ್, ಉದ್ಯಮಿ ಎನ್ . ಗೋಪಿನಾಥ್, ಓಪನ್ ಮೈಂಡ್ ವಲ್ರ್ಡ್ ಸ್ಕೂಲ್ ನ ಟ್ರಸ್ಟಿ ಕೆ.ಕಿರಣ್ ಕುಮಾರ್, ಮಾಚೇನಹಳ್ಳಿ ಕೈಗಾರಿಕಾ ಸಂಘದ ಅಧ್ಯಕ್ಷರಾದ ರಮೇಶ್ ಹೆಗಡೆ, ಮಾಜಿ ಪಾಲಿಕೆ ಸದಸ್ಯ ವಿ.ವಿಶ್ವಾಸ್, ಹರ್ಷ ಕಾಮತ್, ಹಂಜಿ ರುದ್ರಣ್ಣ, ಬಾಳೆಕಾಯಿ ಮೋಹನ್ ಮತ್ತಿತರರು ಉಪಸ್ಥಿತರಿದ್ದರು.
Arecanut shell | ಅಡಿಕೆ ಬೆಳೆಗಾರರಿಗೆ ಶುಭಸುದ್ದಿ, ಶಬ್ದ ನಿರೋಧಕವಾಗಿಯೂ ಅಡಿಕೆ ಸಿಪ್ಪೆ ಬಳಕೆ!