Consumer court | ಕೈಕೊಟ್ಟ ಇ-ಬೈಕ್, ಕಂಪನಿಗೆ ಬಿತ್ತು ದಂಡ, ಏನೇನಾಯ್ತು?

Judgement

 

 

ಸುದ್ದಿ‌ ಕಣಜ.ಕಾಂ ಶಿವಮೊಗ್ಗ
SHIVAMOGGA: ಜೀವನ್ ಧಾರ್ ಕುಮಾರ್ ಎಂಬುವವರು ಬೆಂಗಳೂರಿನ ಪಿ.ಎಂ.ರಾಮನಾಥ್ ಮತ್ತು ಮ್ಯಾನೇಜರ್ ಡೆಕ್ಸ್ ಪ್ರೆಸ್ ಮುಂಬೈ ಇವರ ವಿರುದ್ಧ ಸೇವಾ ನ್ಯೂನ್ಯತೆಗಾಗಿ ಆಪಾದಿಸಿ, ಶಿವಮೊಗ್ಗ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಮುಂದೆ ಸೂಕ್ತ ಪರಿಹಾರ ಕೋರಿ ಸಲ್ಲಿಸಿದ್ದ ಪ್ರಕರಣದಲ್ಲಿ ಆಯೋಗವು ಎದುರುದಾರ ಕಂಪನಿಯು ಅರ್ಜಿದಾರರಿಗೆ ತಯಾರಿಕಾ ನ್ಯೂನ್ಯತೆಯ ಪರಿಹಾರ ನೀಡುವಂತೆ ಆದೇಶಿಸಿದೆ.

READ | ಎರಡು ವರ್ಷ ಕಟ್ಟಿದ ಪಾಲಿಸಿ ಹಣ ಗುಳುಂ, ವಿಮಾ ಕಂಪನಿಗೆ ಚಾಟಿ ಬೀಸಿದ ಗ್ರಾಹಕರ ನ್ಯಾಯಾಲಯ, ಏನಿದು ಪ್ರಕರಣ?

ಏನೇನಾಯ್ತು?
ಅರ್ಜಿದಾರ ಜೀವನ್‍ಧಾರ್ ಕುಮಾರ್ ಎಂಬುವವರು ರಾಮನಾಥ್ ಪಿ ಎಮ್ ಇವರಲ್ಲಿ ವಜ್ರ ಸೂಪರ್ ಇ-ಬೈಕ್‍ನ್ನು ₹54,000 ಗಳಿಗೆ ಖರೀದಿಸಿದ್ದು, ಈ ಎಲೆಕ್ಟ್ರಿಕ್ ಬೈಕ್ ಖರೀದಿಯ ನಂತರ ಉಪಯೋಗಿಸಿದ ಕೆಲ ದಿನಗಳಲ್ಲಿಯೇ ಪದೆ ಪದೆ ಸಮಸ್ಯೆ ಉಂಟುಮಾಡುತ್ತಿದ್ದು, ಕೊನೆಗೆ ರಿಪೇರಿಯಾಗಲಾರದಂತ ಹಂತವನ್ನು ತಲುಪಿರುತ್ತದೆ. ಹೀಗಾಗಿ ಫಿರ್ಯಾದಿದಾರರು ತಯಾರಿ ನ್ಯೂನ್ಯತೆ ಇರುವ ಸರಕು ಎಂದು ಆಪಾದಿಸಿ ಪ್ರಕರಣವನ್ನು ದಾಖಲಿಸಿರುತ್ತಾರೆ.
ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗವು ಈ ಪ್ರಕರಣವನ್ನು ಕೂಲಂಕಷವಾಗಿ ಪರಿಶೀಲಿಸಿ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎದುರುದಾರರು ಯಾವುದೇ ಸಾಕ್ಷ್ಯಾಧಾರಗಳನ್ನು ಹಾಜರುಪಡಿಸಿರುವುದಿಲ್ಲ. ಆದರೆ ಅರ್ಜಿದಾರರು ತಮ್ಮ ಪರ ಒಟ್ಟು 11 ದಾಖಲೆಗಳನ್ನು ಹಾಜರು ಪಡಿಸಿರುತ್ತಾರೆ. ಈ ದಾಖಲೆಗಳನ್ನು ಪರಿಶೀಲಿಸಿದ ನಂತರ ತಯಾರಿಕಾ ನ್ಯೂನ್ಯತೆಯಿಂದ ಕೂಡಿರುತ್ತದೆ ಎಂದು ತೀರ್ಮಾನಿಸಿ ಪ್ರಕರಣವನ್ನು ಭಾಗಶಃ ಪುರಸ್ಕರಿಸಿರುತ್ತದೆ.
ಗ್ರಾಹಕರಿಗೆ ಪರಿಹಾರ ನೀಡಲು ಸೂಚನೆ
ಎದುರುದಾರರು ಅರ್ಜಿದಾರರಿಗೆ ಎಲೆಕ್ಟ್ರಿಕ್ ಬೈಕ್ ಖರೀದಿಯ ಮೊತ್ತವನ್ನು ಶೇ.9 ಬಡ್ಡಿ ಸಮೇತ ₹51,428.50 ಗಳನ್ನು ಮರುಪಾವತಿಸುವಂತೆ ಹಾಗೂ ₹15,000 ಗಳನ್ನು ಮಾನಸಿಕ ಹಿಂಸೆ ಸಂಬಂಧಿಸಿದಂತೆ ಮತ್ತು ₹10,000 ಗಳನ್ನು ವ್ಯಾಜ್ಯದ ಖರ್ಚು ವೆಚ್ಚಗಳ ಮೊತ್ತವೆಂದು ಅರ್ಜಿದಾರರಿಗೆ ಪಾವತಿಸಬೇಕೆಂದು ಆಯೋಗದ ಅಧ್ಯಕ್ಷರಾದ ಟಿ.ಶಿವಣ್ಣ, ಸದಸ್ಯರಾದ ಸವಿತಾ ಬಿ. ಪಟ್ಟಣಶೆಟ್ಟಿ ಮತ್ತು ಬಿ.ಡಿ.ಯೋಗಾನಂದ ಭಾಂಡ್ಯ ಇವರ ಪೀಠವು ಫೆ.1 ರಂದು ಆದೇಶಿಸಿದೆ.

error: Content is protected !!