ಸುದ್ದಿ ಕಣಜ.ಕಾಂ ಬೆಂಗಳೂರು
BENGALURU: ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ದಿನಾಂಕ ಬೆನ್ನಲ್ಲೇ ನೀತಿಸಂಹಿತೆ (MODEL CODE OF CONDUCT) ಜಾರಿಯಾಗಿದೆ. ಚುನಾವಣೆ ಆಯೋಗವು ಹಲವು ಷರತ್ತುಗಳನ್ನು ವಿಧಿಸಿದೆ. ಎಲ್ಲ ರಾಜಕೀಯ ಪಕ್ಷಗಳು, ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು, ನಿಗಮ ಮಂಡಳಿಗಳು, ಸ್ಥಳೀಯ ಸಂಸ್ಥೆಗಳು, ಪಕ್ಷದ ಅಭ್ಯರ್ಥಿಗಳು ನೀತಿ ಸಂಹಿತೆಯ ವ್ಯಾಪ್ತಿಗೆ ಒಳಪಡಿಸಲಿದ್ದಾರೆ.
READ | ಕರ್ನಾಟಕ ವಿಧಾನಸಭೆ ಚುನಾವಣೆಗೆ ಡೇಟ್ ಫಿಕ್ಸ್, ಯಾವಾಗ ನಡೆಯಲಿದೆ ಎಲೆಕ್ಷನ್? ಇಲ್ಲಿದೆ ವೇಳಾಪಟ್ಟಿ
ನೀತಿ ಸಂಹಿತೆ ಬಳಿಕ ಜಾರಿಯಾಗಲಿರುವ ಷರತ್ತುಗಳು
- ರಾಜ್ಯದಲ್ಲಿ ಹೊಸ ಕಾರ್ಯಕ್ರಮಗಳನ್ನು ಘೋಷಿಸುವಂತಿಲ್ಲ, ಅನುಷ್ಠಾನಗೊಳಿಸುವಂತಿಲ್ಲ. ಯೋಜನೆಗಳ ಉದ್ಘಾಟನೆ, ಶಂಕುಸ್ಥಾಪನೆ ಸಹ ಮಾಡಲು ಅವಕಾಶವಿರುವುದಿಲ್ಲ.
- ಹೊಸ ಯೋಜನೆಗಳಿಗೆ ಹಣ ನೀಡುವಂತಿಲ್ಲ. ಹೊಸ ಟೆಂಡರ್ ಗಳನ್ನು ಕರೆಯುವಂತಿಲ್ಲ. ಈಗಾಗಲೇ ಕರೆದಿದ್ದ ಟೆಂಡರ್ ಫೈನಲ್ ಸಹ ಮಾಡುವಂತಿಲ್ಲ.
- ಸಚಿವರು, ಶಾಸಕರು ಸರ್ಕಾರಿ ವಾಹನ ಬಳಸುವಂತಿಲ್ಲ. ಅಧಿಕಾರಿಗಳ ಜೊತೆ ಸಭೆ ನಡೆಸುವಂತಿಲ್ಲ. ಸರ್ಕಾರಿ ವಸತಿ ಗೃಹ ಬಳಸುವಂತಿಲ್ಲ.
- ಬೆಳಗ್ಗೆ 6ರಿಂದ ರಾತ್ರಿ 10 ಗಂಟೆಯವರೆಗೆ ಮಾತ್ರ ಧ್ವನಿವರ್ಧಕ ಬಳಕೆ ಮಾಡಬೇಕು.
- ಮಂದಿರ, ಮಸೀದಿ, ಚರ್ಚ್ ಸೇರಿದಂತೆ ಯಾವುದೇ ಧಾರ್ಮಿಕ ಸ್ಥಳಗಳು ಚುನಾವಣಾ ಪ್ರಚಾರಕ್ಕೆ ಬಳಕೆ ಆಗಬಾರದು. ಧರ್ಮ, ಜಾತಿ ವಿಷಯ ಆಧಾರಿತವಾಗಿ ಮತ ಕೇಳುವಂತಿಲ್ಲ.
- ಸರ್ಕಾರದ ಬಳಿ ಇರುವ ಹಲವಾರು ಅಧಿಕಾರಗಳು ಕಡಿತಗೊಳ್ಳುತ್ತವೆ.
ಯಾವುದಕ್ಕೆಲ್ಲ ವಿನಾಯಿತಿ?
- ನೀತಿ ಸಂಹಿತೆ ವೇಳೆ ಕೆಲವೊಂದಕ್ಕೆ ವಿನಾಯಿತಿ ಇರಲಿದೆ. ಅಭಿವೃದ್ಧಿ ಕಾಮಗಾರಿಯಲ್ಲಿ ಕೆಲವೊಂದು ವಿನಾಯಿತಿ ನೀಡಲಾಗುತ್ತದೆ.
- ನೀರಾವರಿ, ಲೋಕೋಪಯೋಗಿ ಸೇರಿದಂತೆ ಈಗಾಗಲೇ ಕೆಲವೊಂದು ಯೋಜನೆಗಳ ಕಾರ್ಯ ಪ್ರಗತಿಯಲ್ಲಿದ್ದರೆ ಅವುಗಳನ್ನು ಮುಂದುವರಿಸಬಹುದು.
- ಮಧ್ಯಾಹ್ನದ ಬಿಸಿಯೂಟ ಸೇರಿದಂತೆ ಯಾವೆಲ್ಲ ಯೋಜನೆಗಳು ಈಗಾಗಲೇ ಜಾರಿಯಲ್ಲಿ ಇವೆಯೋ ಅವೆಲ್ಲ ಕಾರ್ಯಕ್ರಮಗಳನ್ನೂ ಮುಂದುವರಿಸಬಹುದು.
- ಸಚಿವರು ಬೆಂಗಳೂರನ್ನು ಬಿಟ್ಟು ಹೊರಗಡೆ ಹೋಗೋದಕ್ಕೆ ಚುನಾವಣೆ ಆಯೋಗದ ಅನುಮತಿ ಪಡೆಯಲೇಬೇಕು. ಸಚಿವರು, ಶಾಸಕರಿಗೆ ಕೆಲವೊಂದು ವಿನಾಯಿತಿಗಳೂ ಇವೆ. ಬರ ಮತ್ತು ಪ್ರವಾಹ ಪರಿಸ್ಥಿತಿಯ ಪರಿಶೀಲನೆ ನಡೆಸುವುದಕ್ಕೆ ಚುನಾವಣೆ ಆಯೋಗ ಅಡ್ಡಿ ಮಾಡಲ್ಲ. ಪರಿಹಾರ ಬಿಡುಗಡೆ ಮಾಡೋದಕ್ಕೂ ಅಡ್ಡಿಯಿಲ್ಲ.
- ಕುಡಿಯುವ ನೀರು ಪೂರೈಕೆ ಮಾಡೋದಕ್ಕೆ ಗೋಶಾಲೆ ತೆರೆಯೋದಕ್ಕೂ ನೀತಿ ಸಂಹಿತೆ ಅಡ್ಡಿ ಆಗಲ್ಲ. ಆದರೆ, ಎಲ್ಲದಕ್ಕೂ ಚುನಾವಣಾ ಆಯೋಗದ ಅನುಮತಿ ಬೇಕೇ ಬೇಕು. ಇನ್ನು ಸೇತುವೆ, ರಸ್ತೆ ಸೇರಿದಂತೆ ಯಾವುದೇ ಕಾಮಗಾರಿ ಕೆಲಸ ಪೂರ್ಣ ಆಗಿದ್ದರೆ ಅಧಿಕಾರಿಗಳು ಉದ್ಘಾಟನೆ ಮಾಡಬಹುದು. ಸಾರ್ವಜನಿಕರ ಸೇವೆಗೆ ಅರ್ಪಣೆ ಮಾಡಬಹುದು.
- ಮುಖ್ಯಮಂತ್ರಿ ಅವರಿಗೆ ಕೆಲವು ಅಧಿಕಾರಗಳು ಮುಂದುವರಿಯಲಿವೆ. ಆದರೆ ಆದೇಶ ಮಾಡುವ, ಸಹಿ ಹಾಕುವ, ಸರ್ಕಾರಿ ಕಾರ್ಯಕ್ರಮ ಕರೆಯುವ, ಭಾಗವಹಿಸುವ ಅಧಿಕಾರ ಇರುವುದಿಲ್ಲ. ಸಿಎಂ ಸರ್ಕಾರಿ ಕಾರ್ ಅನ್ನು ತಮ್ಮ ಕಚೇರಿ, ವಿಧಾನಸೌಧಕ್ಕೆ ಬಳಸಬೇಕು. ಜಿಲ್ಲಾ ಪ್ರವಾಸ, ಪ್ರಚಾರಗಳಿಗೆ ಸರ್ಕಾರಿ ವಾಹನ ಬಳಕೆ ನಿರ್ಬಂಧ ಇರಲಿದೆ.
Railway | ಶಿವಮೊಗ್ಗದಿಂದ ಎರಡು ರೈಲುಗಳ ಸಂಚಾರ ಪುನರಾರಂಭ, ಇಲ್ಲಿದೆ ವೇಳಾಪಟ್ಟಿ