ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಶಾರ್ಟ್ ಕಟ್ ಯಾವಾಗಲೂ ಶಾರ್ಟ್ ಟರ್ಮಿಗೇ ಸೀಮಿತ ಎಂದು ಕಾಲೇಜು ಶಿಕ್ಷಣ ಇಲಾಖೆ ಹೆಚ್ಚುವರಿ ನಿರ್ದೇಶಕ ಪ್ರೊ.ಸಿ.ರಾಜಶೇಖರ್ ಹೆಬ್ಬಾರ್ ಹೇಳಿದರು.
ನಗರದ ಆಚಾರ್ಯ ತುಳಸಿ ರಾಷ್ಟ್ರೀಯ ವಾಣಿಜ್ಯ ಕಾಲೇಜು(acharya tulsi national college of commerce), ಐಕ್ಯೂಎಸಿ ವಿಭಾಗ, ಸಾಂಸ್ಕೃತಿಕ ವಿಭಾಗ, ಎನ್ಎಸ್ಎಸ್, ಎನ್ಸಿಸಿ ವಿಭಾಗಗಳ ಸಂಯುಕ್ತ ಆಶ್ರಯದಲ್ಲಿ 2022-23ನೇ ಸಾಲಿನ ಕಾಲೇಜಿನ ರ್ಯಾಂಕ್ ವಿಜೇತರು, ಎನ್ಎಸ್ಎಸ್ ಹಾಗೂ ಎನ್ಸಿಸಿ ವಿಭಾಗದ ಸಾಧಕರಿಗೆ ಹಮ್ಮಿಕೊಳ್ಳಲಾಗಿದ್ದ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
READ | ಶಿವಮೊಗ್ಗ ಜಿಲ್ಲೆಗೆ ಒಲಿದ ಸಚಿವ ಸ್ಥಾನ. ಮಧು ಬಂಗಾರಪ್ಪಗೆ ಮಂತ್ರಿ ಸ್ಥಾನ ಸಿಗಲು ಕಾರಣಗಳೇನು?
ಸಕ್ಸಸ್ ಗುಟ್ಟನ್ನು ಬಿಚ್ಚಿಟ್ಟ ಹೆಬ್ಬಾರ್
- ವಿದ್ಯಾರ್ಥಿಗಳು ಉತ್ಸಾಹದ ಚಿಲುಮೆಗಳಾಗಿ ಏನಾದರೂ ಸಾಧನೆ ಮಾಡುವ ಸಂದರ್ಭದಲ್ಲಿ ತಣ್ಣೀರೆರಚುವವರು ಬಹಳ ಮಂದಿ ಇರುತ್ತಾರೆ. ಆದರೆ ಸಾಧಕನಿಗೆ ನಿರ್ದಿಷ್ಟ ಗುರಿ ಇರಬೇಕು. ಅಡ್ಡ ದಾರಿ ಹಿಡಿಯದೆ ಪರಿಶ್ರಮದಿಂದಲೇ ಯಶಸ್ಸನ್ನು ಪಡೆಯಬೇಕು.
- ವಿದ್ಯಾಭ್ಯಾಸ ಒಂದೇ ಮನುಷ್ಯನಿಗೆ ಚೈತನ್ಯ ತುಂಬುತ್ತದೆ. ಆತನ ಬದುಕಿಗೆ ಅನ್ನ ನೀಡುತ್ತದೆ. ಪೋಷಕರ ಕನಸಿಗೆ ಪೂರಕವಾಗಿ ಮಕ್ಕಳು ಸ್ಪಂದಿಸಬೇಕು. ಪ್ರೀತಿ, ಪ್ರೇಮ ಎಂದು ಮರ ಸುತ್ತಿದರೆ ವಿದ್ಯಾಭ್ಯಾಸ ಮರೆತರೆ ನಿಮ್ಮ ಅನ್ನದ ತಟ್ಟೆಗೆ ನೀವೇ ಕಲ್ಲು ಹಾಕಿಕೊಂಡ ಹಾಗೆ.
- ಆಸೆ ಆಸೆಯಾಗಿಯೇ ಉಳಿಯಬಾರದು. ಕನಸು ನನಸಾಗಬೇಕಾದರೆ ಪರಿಶ್ರಮ ಪಡಬೇಕು. ಪರಿಶ್ರಮವೊಂದೇ ಯಶಸ್ಸಿಗೆ ಸಮೀಪದ ದಾರಿ
- ತಂದೆ ತಾಯಿಯನ್ನು ಮೊದಲು ಪ್ರೀತಿಸಿ. ಅವರ ಕಣ್ಣಲ್ಲಿ ನೀರು ತರಿಸಬೇಡಿ. ತಂದೆ ತಾಯಿಯ ಸೇವೆ ಮಾಡಿದರೆ ಪ್ರಪಂಚವೇ ನಿಮ್ಮನ್ನು ಪ್ರೀತಿಸುತ್ತದೆ. ನಿಮಗೆ ಎಲ್ಲ ರೀತಿಯ ಯಶಸ್ಸು ಸಿಗುತ್ತದೆ.
- ಸಾಧನೆ ಇಲ್ಲದೆ ಸತ್ತರೆ ಸಾವಿಗೇ ಅವಮಾನ. ಸ್ವಾರ್ಥವಿಲ್ಲದ ಬದುಕು ಸರ್ವಕಾಲಕ್ಕೂ ಶ್ರೇಷ್ಠ. ಹೆತ್ತ ತಂದೆ ತಾಯಿಯನ್ನು ಮತ್ತು ವಿದ್ಯೆ ಕಲಿಸಿದ ಗುರುಗಳನ್ನು ಎಂದಿಗೂ ಮರೆಯಬಾರದು.
ಬಿಕಾಂ ಮತ್ತು ಬಿಬಿಎ ಪರೀಕ್ಷೆಗಳಲ್ಲಿ ರ್ಯಾಂಕ್ ಪಡೆದ ಎಸ್.ರಮ್ಯ, ಸಿ.ಜೆ.ಕಾರ್ತಿಕ್, ಎಂ.ಜಿ.ಗೌತಮಿ, ಎಚ್.ಡಿ.ಚೈತ್ರ, ವಿ.ಸೋನಿಕಾ, ಜಿ.ದಿವ್ಯಾ ಎನ್ಎಸ್ಎಸ್ ಹಾಗೂ ಎನ್ಸಿಸಿ ವಿಭಾಗದಲ್ಲಿ ಸಾಧನೆಗೈದ ಎಸ್.ಕೆ.ದೀಕ್ಷಿತ್ ಮತ್ತು ಎಂ.ಮೋನಿಕಾ ಅವರಿಗೆ ಅಭಿನಂದಿಸಲಾಯಿತು.
ಪ್ರಾದೇಶಿಕ ಜಂಟಿ ನಿರ್ದೇಶಕ ಪ್ರೊ. ಓಂಪ್ರಕಾಶ್ ರಾಜೋಳ, ನಿಕಟಪೂರ್ವ ಪ್ರಾಂಶುಪಾಲ ಪ್ರೊ.ಎಚ್.ಎಂ. ಸುರೇಶ್, ಪ್ರೊ. ಕಾಜೀಂ ಷರೀಫ್, ರೊ.ವಿಜಯಕುಮಾರ್, ವಾಗೀಶ್, ಪ್ರೊ. ಜಗದೀಶ್, ಪ್ರೊ.ಕೆ.ಎಂ.ನಾಗರಾಜ್ ಉಪಸ್ಥಿತರಿದ್ದರು.