ಸುದ್ದಿ ಕಣಜ.ಕಾಂ ತೀರ್ಥಹಳ್ಳಿ
THIRTHAHALLI: ಯುವತಿಯ ಖಾಸಗಿ ವಿಡಿಯೋ ಚಿತ್ರೀಕರಿಸಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾರೆ ಎನ್ನಲಾದ ಮೂರು ಜನ ಆರೋಪಿಗಳನ್ನು ಬಂಧಿಸಲಾಗಿದೆ.
ತೀರ್ಥಹಳ್ಳಿಯ ಸೌರಭ ಅಲಿಯಾಸ್ ಅನನ್ಯ(22), ಸಿದ್ದಿಕಿ(26), ಮೋಹಿತ್ ಗೌಡ(28) ಎಂಬುವವರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ.
READ | ಇಂದಿನಿಂದಲೇ ಕೆಲವು ರೈಲುಗಳ ಸಂಚಾರ ಸಮಯದಲ್ಲಿ ಬದಲಾವಣೆ, ಒಟ್ಟು 15 ರೈಲುಗಳ ಸಮಯ ಬದಲು, ಯಾವ್ಯಾವ ರೈಲಿಗೆ ಅನ್ವಯ?
ಏನಿದು ಘಟನೆ?
ತೀರ್ಥಹಳ್ಳಿ ತಾಲ್ಲೂಕಿನ ಉಂಟೂರುಕಟ್ಟೆ ಕೈಮರದ ವಾಸಿ ವ್ಯಕ್ತಿಯೊಬ್ಬರಿಗೆ ಯುವತಿಯೊಬ್ಬಳು ಮೊಬೈಲ್ ಮುಖಾಂತರ ಪರಿಚಯವಾಗಿ ಫೋನ್ ನಲ್ಲಿ ಸಲುಗೆಯಿಂದ ಮಾತನಾಡುತ್ತಿದ್ದು, ಏಪ್ರಿಲ್ 5ರಂದು ಆಕೆಯು ವ್ಯಕ್ತಿಯ ಮನೆಗೆ ಬಂದಿದ್ದು, ಆನಂತರ ಯುವತಿಯ ಕಡೆಯ ವ್ಯಕ್ತಿಗಳು ಏಕಾಏಕಿ ಆತನ ಮನೆಗೆ ನುಗ್ಗಿ, ಅವಾಚ್ಯ ಶಬ್ದಗಳಿಂದ ಬೈದು, ಕೊಲೆ ಬೆದರಿಕೆ ಹಾಕಿ ಯುವತಿಯೊಂದಿಗೆ ಅಶ್ಲೀಲವಾದ ಫೋಟೋ ಮತ್ತು ವೀಡಿಯೋಗಳನ್ನು ಚಿತ್ರೀಕರಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
“ಹಣ ಕೊಡದೆ ಇದ್ದರೆ ವಿಡಿಯೋಗಳನ್ನು ಹೆಂಡತಿಗೆ ಕಳುಹಿಸುತ್ತೇವೆ. ಅತ್ಯಾಚಾರ ಪ್ರಕರಣವನ್ನು ದಾಖಲಿಸುತ್ತೇವೆಂದು ಹೆದರಿಸಿ, ಹಣವನ್ನು ತೆಗೆದುಕೊಂಡು ಹೋಗಿದ್ದಾರೆ. ಪುನಾ ಬೆದರಿಸಿ ಹಣವನ್ನು ಪಡೆದಿದ್ದು, ಆನಂತರವೂ ಹಣ ಕೊಡದಿದ್ದರೆ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದುದಾಗಿ ಬೆದರಿಕೆ ಹಾಕಿರುತ್ತಾರೆ” ಎಂದು ನೊಂದ ವ್ಯಕ್ತಿಯು ನೀಡಿದ ದೂರಿನ ಮೇರೆಗೆ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿರುತ್ತದೆ.
ಪ್ರಕರಣ ಪತ್ತೆಗೆ ತಂಡ ರಚನೆ
ಪ್ರಕರಣದ ಆರೋಪಿತರ ಪತ್ತೆಗಾಗಿ ಎಸ್.ಪಿ. ಮಿಥುನ್ ಕುಮಾರ್, ಹೆಚ್ಚುವರಿ ಎಸ್.ಪಿ ಅನಿಲ್ ಕುಮಾರ್ ಭೂಮರಡ್ಡಿ ಮಾರ್ಗದರ್ಶನದಲ್ಲಿ ತೀರ್ಥಹಳ್ಳಿ ಡಿವೈಎಸ್.ಪಿ ಗಜಾನನ ವಾಮನ ಸುತಾರ ಮೇಲ್ವಿಚಾರಣೆಯಲ್ಲಿ ತೀರ್ಥಹಳ್ಳಿ ಸಿಪಿಐ ಅಶ್ವತ್ಥ ಗೌಡ, ಪಿಎಸ್.ಐಗಳಾದ ಸುಷ್ಮಾ, ಗಾದಿಲಿಂಗಪ್ಪ ಗೌಡ, ಸಾಗರ್ ಅತ್ತರವಾಲ, ಸಿಬ್ಬಂದಿ ಸುಧಾಕರ್ ಕುಮಾರ್, ಮನೀಷ್, ದೀಪಕ್, ಅವಿನಾಶ್, ರವಿ, ವೀರೇಂದ್ರ, ಸುರೇಶ್ ನಾಯ್ಕ ಮತ್ತು ಚಾಲಕ ವಿಜಯ್, ಅವಿನಾಶ್ ಇತರರ ತಂಡ ಕಾರ್ಯಾಚರಣೆ ನಡೆಸಿದ್ದಾರೆ.