ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಸಿಮ್ಸ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕುಷ್ಠರೋಗ ನಿವಾರಣೆ ಕಾರ್ಯಕ್ರಮ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಇವರುಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಕುಷ್ಠರೋಗ (Leprosy ) ನಿವಾರಣೆ ಕಾರ್ಯಕ್ರಮದಲ್ಲಿ ಡಿಎಚ್.ಓ ಡಾ.ರಾಜೇಶ್ ಸುರಗಿಹಳ್ಳಿ ಲಕ್ಷಣ(leprosy symptoms), ಕಾರಣ ಮತ್ತು ಪರಿಹಾರಗಳನ್ನು ವಿವರಿಸಿದರು.
ಕುಷ್ಠರೋಗದ ಲಕ್ಷಣಗಳೇನು?
ಸ್ಪರ್ಶರಹಿತ ಮಚ್ಚೆ, ದೇಹದ ಯಾವುದೇ ಭಾಗದಲ್ಲಿ ತಿಳಿಬಿಳಿ ಅಥವಾ ತಾಮ್ರ ಬಣ್ಣದ ಒಂದು ಅಥವಾ ಹಲವು ಮಚ್ಚೆಗಳು ಇದ್ದು, ಅವು ಸ್ಪರ್ಶ ಜ್ಞಾನ ಹೊಂದಿಲ್ಲದಿದ್ದರೆ, ಕೈಕಾಲುಗಳಲ್ಲಿ ಜೋಮು ಕಂಡುಬರುವ ಸೂಚನೆ ಇದ್ದವರು ಈ ಭೇಟಿ ಸಂದರ್ಭದಲ್ಲಿ ಆರೋಗ್ಯ ಸಹಾಯಕರು, ಆಶಾ ಹಾಗೂ ಸ್ವಯಂಸೇವಾ ಕಾರ್ಯಕರ್ತರುಗಳಿಂದ ಪರೀಕ್ಷಿಸಿ, ಖಚಿತವಾಗಿದ್ದರೆ ಯಾವುದೇ ಆತಂಕವಿಲ್ಲದೆ ಬಹುವಿಧ ಔಷಧಿ ಚಿಕಿತ್ಸೆಯಿಂದ ಈ ರೋಗವನ್ನು ಗುಣಪಡಿಸಿಕೊಳ್ಳಬಹುದಾಗಿದೆ.
READ | ಜುಲೈ 10ರೊಳಗೆ ಮಳೆಯಾಗದಿದ್ದರೆ ಶಿವಮೊಗ್ಗಕ್ಕೆ ಕಾದಿದೆ ಆಪತ್ತು
ಕುಷ್ಠರೋಗಕ್ಕೆ ಕಾರಣಗಳೇನು?
ಈ ಕಾಯಿಲೆ ವಂಶಪಾರಂಪರ್ಯವಾಗಿ ಬರುವಂತಹದ್ದಲ್ಲ. ಲೆಪ್ರೆ ಎಂಬ ಸೂಕ್ಷ್ಮಾಣು ಬ್ಯಾಕ್ಟೀರಿಯಾ, ಮೈಕೋಬ್ಯಾಕ್ಟೀರಿಯಂ ಲೆಪ್ರೆನಿಂದ ಬರುವ ಕಾಯಿಲೆ ಇದಾಗಿದೆ. ಸಾರ್ವಜನಿಕರಲ್ಲಿ ರೋಗಿಗಳ ಬಗ್ಗೆ ಬೇಧ-ಭಾವ, ತಾರತಮ್ಯ ತೋರುವುದು ಸಲ್ಲದು.
ರೋಗ ಗುರುತಿಸಿದ ನಂತರ ಅತ್ಯಲ್ಪ ಅವಧಿಯ ಹಾಗೂ ಸಕಾಲಿಕ ಚಿಕಿತ್ಸೆ ಪಡೆಯುವುದರಿಂದ ಕುಷ್ಟರೋಗದಿಂದ ಮುಕ್ತರಾಗಿ ನೆಮ್ಮದಿಯ ಹಾಗೂ ಆರೋಗ್ಯಯುವ ಜೀವನವನ್ನು ಸಾಗಿಸಲು ಸಾಧ್ಯವಿದೆ.
– ಡಾ.ರಾಜೇಶ್ ಸುರಗೀಹಳ್ಳಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ
ಪರಿಹಾರಗಳೇನು?
ರಾಜ್ಯದ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲಿ ಕುಷ್ಟರೋಗಕ್ಕೆ ಉಚಿತ ಚಿಕಿತ್ಸೆ ನೀಡಲಾಗುತ್ತಿದೆ.
ಕುಷ್ಟರೋಗದಿಂದ ಅಂಗವಿಕಲತೆಯಾಗಿ ನರಳುತ್ತಿರುವವರು ಆಯ್ದ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಬಹುದಾಗಿದೆ. ಸೋಂಕಿತರಿಗೆ ಉಚಿತ ವೈದ್ಯಕೀಯ ಸಲಹೆ-ಸೂಚನೆಗಳಲ್ಲದೆ ಎಂ.ಸಿ.ಆರ್. ಪಾದರಕ್ಷೆ, ಔಷಧಿಗಳನ್ನು ಉಚಿತವಾಗಿ ನೀಡಲಾಗುವುದು ಎಂದ ಅವರು, ಸೋಂಕಿನ ಅನುಮಾನ ಕಂಡುಬಂದಲ್ಲಿ ಮಚ್ಚೆಗಳನ್ನು ಗುಪ್ತವಾಗಿಟ್ಟುಕೊಳ್ಳದೆ ವೈದ್ಯರಿಗೆ ತೋರಿಸಿ, ರೋಗದ ಪ್ರಾರಂಭಿಕ ಹಂತದಲ್ಲಿ ಚಿಕಿತ್ಸೆ ಪಡೆದು ರೋಗವನ್ನು ನಿಯಂತ್ರಿಸಬಹುದಲ್ಲದೆ ಅಂಗವಿಕಲತೆಯನ್ನು ತಪ್ಪಿಸಬಹುದಾಗಿದೆ.
ಜುಲೈ 6ರ ವರೆಗೆ ಆಂದೋಲನ
ಜೂ 19ರಿಂದ ಜುಲೈ 06ರವರೆಗೆ ಪ್ರತಿದಿನ ಬೆಳಗ್ಗೆ 7ರಿಂದ 10 ಗಂಟೆಯವರೆಗೆ ನಡೆಯಲಿರುವ ಕುಷ್ಟರೋಗ ಪತ್ತೆಹಚ್ಚುವ ಆಂದೋಲನಕ್ಕೆ ಶರಾವತಿ ನಗರದ ಚಾನಲ್ ಏರಿಯಾದ ಅಂಗನವಾಡಿ ಕೇಂದ್ರದಲ್ಲಿ ನಡೆಯಲಿದೆ.
READ | ಅಡಿಕೆ ದರದಲ್ಲಿ ಮತ್ತೆ ಏರಿಕೆ, ಇಂದು ಮಾರುಕಟ್ಟೆಯಲ್ಲಿ ಧಾರಣೆ ಎಷ್ಟಿದೆ?
300 ಜನರ ತಂಡದಿಂದ ಸಮೀಕ್ಷೆ
ಕುಷ್ಠರೋಗಿಗಳನ್ನು ಪತ್ತೆಹಚ್ಚಲು ಈಗಾಗಲೇ ಜಿಲ್ಲೆಯ ಎಲ್ಲ ಆರೋಗ್ಯ ಮತ್ತು ಆಶಾ ಕಾರ್ಯಕರ್ತರಿಗೆ ಸೂಕ್ತ ತರಬೇತಿ ನೀಡಲಾಗಿದೆ. ಪ್ರತಿ ತಾಲೂಕಿಗೆ ಸುಮಾರು 300ಹೆಚ್ಚು ಜನರ ತಂಡ ಮನೆಮನೆಗೆ ಭೇಟಿ ನೀಡಿ ಸಮೀಕ್ಷೆ ನಡೆಸಿ, ಕುಷ್ಠರೋಗಿಗಳನ್ನು ಗುರುತಿಸಿ, ಚಿಕಿತ್ಸೆ ಪಡೆದುಕೊಳ್ಳಲು ನೆರವಾಗಲಿದ್ದಾರೆ. ಪ್ರತಿ ತಂಡಕ್ಕೆ ಓರ್ವ ಮೇಲ್ವಿಚಾರಕರು ಇದ್ದು, ತಾಲೂಕು ಆರೋಗ್ಯಾಧಿಕಾರಿಗಳ ಮೇಲ್ವಿಚಾರಣೆಯಲ್ಲಿ ರೋಗ ಪತ್ತೆಹಚ್ಚುವ ಕಾರ್ಯಕ್ರಮ ನಡೆಸಲಾಗುವುದು. ಪ್ರಸ್ತುತ ಜಿಲ್ಲೆಯ 53ಜನರು ನಿರಂತರವಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ ಎಂದು ತಿಳಿಸಿದರು.
ಡಾ. ಶಮಾಬೇಗಂ, ಡಾ. ಚಂದ್ರಶೇಖರ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ದೊಡ್ಡವೀರಪ್ಪ, ಮಾಜಿ ಮೇಯರ್ ಶ್ರೀಮತಿ ಸುವರ್ಣಶಂಕರ್ ಸೇರಿದಂತೆ ವೈದ್ಯಕೀಯ ಪ್ರಶಿಕ್ಷಣಾರ್ಥಿಗಳು, ಆರೋಗ್ಯ ಮತ್ತು ಆಶಾ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.