ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಒಂದು ಬೈಕ್ ಕಳ್ಳತನ (Bike theft) ಪ್ರಕರಣ ಪತ್ತೆ ಹಚ್ಚಲು ಪೊಲೀಸರು ಇಬ್ಬರನ್ನು ಬಂಧಿಸಿದ್ದು, ಆರೋಪಿಗಳಿಂದ 12 ಬೈಕ್ ಗಳನ್ನು ವಶಕ್ಕೆ ಪಡೆದಿದ್ದಾರೆ.
ಜುಲೈ 29ರಂದು ಆನವಟ್ಟಿಯ (Anavatti) ಜಡೆ ಗ್ರಾಮದ ನಿವಾಸಿ ಚಂದ್ರು ಅವರು ಜಡೆ ಗ್ರಾಮದ ಸಂತೆ ಮೈದಾನದ ಹತ್ತಿರ ನಿಲ್ಲಿಸಿದ್ದ ಸ್ಪ್ಲೆಂಡರ್ ಪ್ಲಸ್ ಬೈಕ್ ಅನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಆನವಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
READ | ಗೃಹ ರಕ್ಷಕ ದಳದಲ್ಲಿ 112 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ, ಯಾವ ತಾಲೂಕಿನಲ್ಲಿ ಎಷ್ಟು ಸ್ಥಾನ ಖಾಲಿ?
₹4.85 ಲಕ್ಷ ಮೌಲ್ಯದ ಬೈಕ್ ಗಳು ಸೀಜ್
ಸೊರಬ ತಾಲ್ಲೂಕು ಕಮನವಳ್ಳಿ ಗ್ರಾಮದ ಮಂಜುನಾಥ್ ಅಲಿಯಾಸ್ ಮಂಜ(25), ಹಿರೇಚೌಟಿ ಗ್ರಾಮದ ಸಿ.ಕೆ.ಅನಿಲ್ (22) ಬಂಧಿಸಲಾಗಿದೆ. ಆರೋಪಿತರಿಂದ ಆನವಟ್ಟಿ ಪೊಲೀಸ್ ಠಾಣೆಯ 3, ಸೊರಬ ಪೊಲೀಸ್ ಠಾಣೆಯ 2, ಶಿಕಾರಿಪುರ ಟೌನ್ ಪೊಲೀಸ್ ಠಾಣೆಯ 1, ಕುಂಸಿ ಪೊಲೀಸ್ ಠಾಣೆಯ 1, ಸಾಗರ ಟೌನ್ ಪೊಲೀಸ್ ಠಾಣೆಯ 1, ಹಿರೆಕೆರೂರು ಪೊಲೀಸ್ ಠಾಣೆಯ 1, ಆಡೂರು ಪೊಲೀಸ್ ಠಾಣೆಯ 1 ಪ್ರಕರಣ ಮತ್ತು ಹಂಸಭಾವಿ ಪೊಲೀಸ್ ಠಾಣೆಯ 2 ಪ್ರಕರಣಗಳು ಸೇರಿದಂತೆ ಒಟ್ಟು 12 ದ್ವಿಚಕ್ರ ವಾಹನ ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದ ಅಂದಾಜು ₹4.85 ಲಕ್ಷ ಮೌಲ್ಯದ 12 ದ್ವಿಚ ಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.
READ | ಶಿವಮೊಗ್ಗದಲ್ಲಿ ಪಾರ್ಕಿಂಗ್ ವ್ಯವಸ್ಥೆಗೆ ಮೇಜರ್ ಸರ್ಜರಿ, ಏನೆಲ್ಲ ಬದಲಾವಣೆ? ಇಲ್ಲಿದೆ ಕಂಪ್ಲೀಟ್ ರಿಪೋರ್ಟ್
ಪ್ರಕರಣ ಬೇಧಿಸಿದ ತಂಡ
ಆರೋಪಿತರು ಹಾಗೂ ಕಳುವಾದ ಬೈಕ್ ಪತ್ತೆಗಾಗಿ ಎಸ್.ಪಿ ಜಿ.ಕೆ.ಮಿಥುನ್ ಕುಮಾರ್, ಹೆಚ್ಚುವರಿ ಎಸ್.ಪಿ ಅನಿಲ್ ಕುಮಾರ್ ಭೂಮರಡ್ಡಿ ಮಾರ್ಗದರ್ಶನದಲ್ಲಿ ಶಿಕಾರಿಪುರ ಉಪ ವಿಭಾಗ ಡಿವೈಎಸ್ಪಿ ಶಿವಾನಂದ ಮದರಖಂಡಿ, ಸೊರಬ ಸಿಪಿಐ ರಾಜಶೇಖರ್ ಮೇಲ್ವಿಚಾರಣೆಯಲ್ಲಿ ಆನವಟ್ಟಿ ಪಿಎಸ್ಐ ರೆಡ್ಡಿ ಬೆನ್ನೂರು, ವಿಠಲ್ ಎಂ.ಅಗಾಸಿ ನೇತೃತ್ವದಲ್ಲಿ ಸಿಬ್ಬಂದಿ ಎಚ್.ಸಿ ಗಿರೀಶ್, ಖಲಂದರ್, ಹರೀಶ್, ಪಿಸಿ ಜಗದೀಶ್, ಮಂಜುನಾಥ್ , ಮಲ್ಲೇಶ್, ಹರಿಪ್ರಸಾದ್, ಹನುಮಂತ್, ಕೃಷ್ಣ, ಇಂದ್ರೇಶ್, ಗುರುರಾಜ್, ವಿಜಯ್ ಕುಮಾರ್ ಅವರುಗಳನ್ನೊಳಗೊಂಡ ತನಿಖಾ ತಂಡ ಪ್ರಕರಣ ಬೇಧಿಸಲು ಯಶಸ್ವಿಯಾಗಿದೆ.
ಟೆಕ್ನಾಲಜಿಯಿಂದ ಪೊಲೀಸರ ವಶವಾದ ಆರೋಪಿ
BHADRAVATHI: ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅರಳಿಯಲ್ಲಿ ಗ್ರಾಮದ ಸರ್ಕಲ್ ನ ಹತ್ತಿರ ಅನುಮಾನಾಸ್ಪದ ವ್ಯಕ್ತಿಗಳ ಬೆರಳು ಮುದ್ರೆಗಳನ್ನು ಪರಿಶೀಲಿಸುತ್ತಿದ್ದ ಸಂದರ್ಭದಲ್ಲಿ ಮಂಡ್ಯ ಜಿಲ್ಲೆಯ ಸತನೂರ ಗ್ರಾಮದ ಆಕಾಶ್ ಗೌಡ ಅಲಿಯಾಸ್ ಅಪ್ಪು(26) ಎಂಬಾತನನ್ನು ಬಂಧಿಸಲಾಗಿದೆ. ಈತ ಹಲವು ಅಪರಾಧ ಪ್ರಕರಣದಲ್ಲಿ ಭಾಗಿಯಾಗಿರುವುದು ಪತ್ತೆಯಾಗಿರುತ್ತದೆ.
ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯ ಸಿಬ್ಬಂದಿ ಮಂಜುನಾಥ್, ಗಂಗಾಧರ್ ನಾಶಿ ಅವರು ರಾತ್ರಿ ಗಸ್ತು* ಕರ್ತವ್ಯದಲ್ಲಿದ್ದಾಗ ಅನುಮಾನಾಸ್ಪದ ವ್ಯಕ್ತಿಗಳ ಗುರುತು ಪತ್ತೆ ಹಚ್ಚುವ ಸಂಬಂಧ ಕೇಂದ್ರ ಸರ್ಕಾರದ ಸಹಯೋಗದೊಂದಿಗೆ ಅನುಷ್ಠಾನ ಮಾಡಲಾದ MCCTNS (Mobile Crime Criminal Tracking Network System) ತಂತ್ರಾಂಶದ ಫಿಂಗರ್ ಪ್ರಿಂಟ್ ಸ್ಕ್ಯಾನರ್ ನಲ್ಲಿ ಈತನ ವಿರುದ್ಧ ಇರುವ ಪ್ರಕರಣಗಳ ಬಗ್ಗೆ ಮಾಹಿತಿ ಲಭಿಸಿದೆ.
ವಿಚಾರಣೆಗೆ ಹಾಜರಾಗದೇ ತಲೆಮರೆಸಿಕೊಂಡಿದ್ದ
ವ್ಯಕ್ತಿಯ ಪೂರ್ವಾಪರವನ್ನು ಪರಿಶೀಲಿಸಿದಾಗ ಆತನ ವಿರುದ್ಧ ಮಂಡ್ಯ ಜಿಲ್ಲೆಯಲ್ಲಿ 4 ಮನೆಗಳ್ಳತನ ಮತ್ತು 1 ದರೋಡೆಗೆ ಯತ್ನ ಪ್ರಕರಣ ಹಾಗೂ ತುಮಕೂರು ಜಿಲ್ಲೆಯಲ್ಲಿ 1 ಮನೆಗಳ್ಳತನ ಪ್ರಕರಣದಲ್ಲಿ ಆರೋಪಿಯಾಗಿರುವುದು ಕಂಡು ಬಂದಿರುತ್ತದೆ.
ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆಯ ಪ್ರಕರಣವೊಂದರಲ್ಲಿ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೇ ತಲೆ ಮರೆಸಿಕೊಂಡಿದ್ದು, ನ್ಯಾಯಾಲಯವು ಈತನ ವಿರುದ್ಧ ಬಂಧನ ವಾರೆಂಟ್ ಅನ್ನು ಸಹ ಹೊರಡಿಸಿರುವುದು ತಿಳಿದು ಬಂದಿರುತ್ತದೆ. ನಂತರ ಆರೋಪಿತನು ಪತ್ತೆಯಾಗಿರುವ ಬಗ್ಗೆ ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆಗೆ ಮಾಹಿತಿ ನೀಡಿ, ಆರೋಪಿಯನ್ನು ಅವರ ವಶಕ್ಕೆ ನೀಡಲಾಗಿರುತ್ತದೆ.