ಸುದ್ದಿ ಕಣಜ.ಕಾಂ ಶಿಕಾರಿಪುರ
SHIKARIPURA: ಪಟ್ಟಣದಲ್ಲಿ ಇತ್ತೀಚೆಗೆ ನಡೆದ ಕೊಲೆ ಪ್ರಕರಣ ಸಂಬಂಧ ಏಳು ಜನ ಆರೋಪಿಗಳನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂದನಕ್ಕೆ ಒಪ್ಪಿಸಲಾಗಿದೆ.
READ | ಚಕ್ರವರ್ತಿ ಸೂಲಿಬೆಲೆ ವಿರುದ್ಧ ಶಿವಮೊಗ್ಗ ಪೊಲೀಸ್ ಠಾಣೆಯಲ್ಲಿ ದೂರು, ಏನೇನು ಆರೋಪಗಳಿವೆ?
ಜನ್ನತ್ತ ಗಲ್ಲಿಯ ಮೊಹಮ್ಮದ್ ಜಾಫರ್(32) ಎಂಬಾತನ ಕೊಲೆ ಮಾಡಲಾಗಿತ್ತು. ತಕ್ಷಣ ಜಾಗೃತರಾದ ಪೊಲೀಸರು ಪ್ರಕರಣ ದಾಖಲಿಸಿ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದರು.
ಸೊಸೈಟಿ ಕರಿಯ ಭಾಷಾ (42) ಎಂಬಾತನನ್ನು ಮೊದಲು ಬಂಧಿಸಲಾಯಿತು. ನಂತರ, ಇಲಿಯಾಸ್ ನಗರದ ರೋಷನ್(19), ಸೊಸೈಟಿ ಕೇರಿಯ ಸದಾಂ ಹುಸೇನ್(31), ಸಲ್ಮಾನ್ ಸಲೀಮ್(22), ಇಮ್ರಾನ್(30), ಆರಿಫ್ ಜಾನ್(33), ವಿನಾಯಕ ನಗರದ ಎಸ್.ಎನ್.ಬಾಬು ಅಲಿಯಾಸ್ ಸಾಬರ್ ಅಹಮ್ಮದ್(42) ಬಂಧಿಸಲಾಗಿದೆ.
ಕೊಲೆಯ ಹಿಂದಿನ ಕಾರಣವೇನು?
ಈದ್ ಮಿಲಾದ್ ಕಮಿಟಿ ಅಧ್ಯಕ್ಷ ಸ್ಥಾನದ ವಿಚಾರವಾಗಿ ಸೊಸೈಟಿ ಕೇರಿ ಮತ್ತು ಗಗ್ರಿ ಏರಿಯಾದವರ ನಡುವೆ ವೈಮನಸ್ಸು ಇದ್ದು, ಇದೇ ವಿಚಾರವಾಗಿ ರೋಷನ್ ಮತ್ತು ಇತರರು ಸೇರಿಕೊಂಡು ಒಳ ಸಂಚು ರೂಪಿಸಿ ಪೂರ್ವ ಸಿದ್ಧತೆ ಮಾಡಿಕೊಂಡು, ಕೆ.ಎಚ್.ಬಿ ಕಾಲೋನಿಗೆ ಚಾಫರ್, ಶಾಹೀದ್, ದಸ್ತಗಿರ್ ಮತ್ತು ಇತರರನ್ನು ಕರೆಸಿಕೊಂಡು ಅವರೊಂದಿಗೆ ಗಲಾಟೆ ತೆಗೆದು ಮೊಹಮ್ಮದ್ ಜಾಫರ್ ಎಂಬಾತನಿಗೆ ಜಾಕುವಿನಿಂದ ಎದೆಗೆ ಚುಚ್ಚಿ ಕೊಲೆ ಮಾಡಿರುತ್ತಾರೆಂದು ದೂರಿನಲ್ಲಿ ಆರೋಪಿಸಲಾಗಿತ್ತು.
ಪ್ರಕರಣ ಬೇಧಿಸಿದ ತಂಡ
ಆರೋಪಿಗಳ ಪತ್ತೆಗಾಗಿ ಪೊಲೀಸ್ ಅಧೀಕ್ಷಕ ಜಿ.ಕೆ. ಮಿಥುನ್ ಕುಮಾರ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಅನಿಲ್ ಕುಮಾರ್ ಭೂಮರಡಿ ಮಾರ್ಗದರ್ಶನದಲ್ಲಿ ಶಿಕಾರಿಪುರ ಉಪ ವಿಭಾಗ ಪೊಲೀಸ್ ಉಪಾಧೀಕ್ಷಕ ಶಿವಾನಂದ ಮದರಂಡಿ ಮೇಲ್ವಿಚಾರಣೆಯಲ್ಲಿ ಆರೋಪಿಗಳನ್ನು ಪತ್ತೆ ಹಚ್ಚಲಾಗಿದೆ.