ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ರಾಜ್ಯ ಸರ್ಕಾರವು ಮಹಿಳೆಯರಿಗೋಸ್ಕರ ‘ಶಕ್ತಿ’ ಯೋಜನೆ (Shakthi scheme) ಜಾರಿಗೆ ತಂದ ಬಳಿಕ ಮಹಿಳೆಯರ ಓಡಾಟವೇನೋ ಹೆಚ್ಚಾಗಿದೆ. ಆದರೆ, ಈ ಯೋಜನೆ ನೇರವಾಗಿ ಖಾಸಗಿ ಬಸ್(Private bus)ಗಳ ಮೇಲೆ ಪರಿಣಾಮ ಬೀರಿದೆ.
ಖಾಸಗಿ ಬಸ್ ನವರು ನಿತ್ಯ ನಿರ್ವಹಣೆ ಸಾಧ್ಯವಾಗದೇ ಶಿವಮೊಗ್ಗ ವಿಭಾಗ ವ್ಯಾಪ್ತಿಯ ಶಿವಮೊಗ್ಗ, ಚಿತ್ರದುರ್ಗ, ದಾವಣಗೆರೆ, ದಕ್ಷಿಣ ಕನ್ನಡ, ಉಡುಪಿ ಮತ್ತು ಚಿಕ್ಕಮಗಳೂರು ಜಿಲ್ಲಾ ವ್ಯಾಪ್ತಿಯ ಒಟ್ಟು 187 ಬಸ್ ಗಳನ್ನು ಸರ್ಕಾರಕ್ಕೆ ಸೆರೆಂಡರ್ ಮಾಡಲಾಗಿದೆ.
READ | ಶರಾವತಿ ಸಂತ್ರಸ್ತರ ಬಿಕ್ಕಟ್ಟು ಬಗೆಹರಿಸಲು ‘ಸೆಟಲ್ಮೆಂಟ್ ಆಫೀಸರ್’ ನೇಮಕ
ಸೆರೆಂಡರ್ ಮಾಡಲು ಕಾರಣಗಳೇನು?
ಮಹಿಳೆಯರು ಸರ್ಕಾರಿ ಬಸ್ ಗಳತ್ತ ಹೆಚ್ಚು ಒತ್ತು ನೀಡುತ್ತಿರುವುದರಿಂದ ಖಾಸಗಿ ಬಸ್’ಗಳಿಗೆ ಕೇಳುವವರೇ ಇಲ್ಲವಾಗಿದೆ. ಆದುದ್ದರಿಂದ ಖಾಸಗಿ ಬಸ್ ನಿರ್ವಹಣೆ ಕಷ್ಟವಾಗಿದೆ. ಚಾಲಕರು, ನಿರ್ವಾಹಕರು, ಕ್ಲೀನರ್ ಇನ್ನಿತರ ಸಿಬ್ಬಂದಿಯ ಸಂಬಳ, ಇಂಧನ ಖರ್ಚು, ತೆರಿಗೆ ಪಾವತಿಗೆ ಸಮಸ್ಯೆಯಾಗುತ್ತಿದೆ. ಖಾಸಗಿ ಬಸ್ ಗಳನ್ನೇ ನಂಬಿಕೊಂಡಿರುವವರ ಬದುಕು ಸಂಕಷ್ಟಕ್ಕೆ ಸಿಲುಕಿದೆ.
ಏನಿದು ಬಸ್ ಸೆರೆಂಡರ್?
ಯಾವುದೇ ಬಸ್ ರಸ್ತೆಗಿಳಿಯಬೇಕಾದರೆ ಅದಕ್ಕೆ ಬಸ್ ಮಾಲೀಕರು ರಸ್ತೆ ತೆರಿಗೆಯನ್ನು ಪಾವತಿ ಮಾಡಬೇಕಾಗುತ್ತದೆ. ಪ್ರತಿ ಮೂರು ತಿಂಗಳಿಗೊಮ್ಮೆ ಸರ್ಕಾರಕ್ಕೆ 40 ಸಾವಿರ ರೂ. ಪಾವಿಸಬೇಕಾಗುತ್ತದೆ.
ನಿರ್ವಹಣೆಯೇ ಸಾಧ್ಯವಿಲ್ಲದ ಗಂಭೀರ ಸ್ಥಿತಿ ನಿರ್ಮಾಣವಾಗಿದ್ದು, ಸುಖಾಸುಮ್ಮನೆ ರಸ್ತೆ ತೆರಿಗೆ ಪಾವತಿಸುವುದರಿಂದ ಮಾಲೀಕರ ಮೇಲೆ ಅನಗತ್ಯ ಹೊರೆಯಾಗುತ್ತಿದೆ. ಈ ಕಾರಣದಿಂದ ಬಸ್ ಗಳನ್ನು ಸೆರೆಂಡರ್ ಮಾಡಲಾಗುತ್ತದೆ. ಈ ವೇಳೆ, ರಸ್ತೆ ತೆರಿಗೆ, ಪರ್ಮಿಟ್ ಶುಲ್ಕದಿಂದಲೂ ವಿನಾಯಿತಿ ಇರುತ್ತದೆ. ಆದರೆ, ಯಾವುದೇ ಕಾರಣಕ್ಕೂ ಬಸ್ ಮಾಲೀಕರು ಸೆರೆಂಡರ್ ಮಾಡಿದ ಬಸ್ ಗಳನ್ನು ರಸ್ತೆಗಿಳಿಸುವಂತಿಲ್ಲ. ದಾಖಲೆಗಳು ಸಾರಿಗೆ ಇಲಾಖೆ ಬಳಿ ಇದ್ದರೆ ಬಸ್ ಮಾತ್ರ ತಮ್ಮ ಬಳಿ ಉಳಿದುಕೊಳ್ಳುತ್ತವೆ.