ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ನಗರದ ಹರಕೆರೆ ದೇವಸ್ಥಾನದಿಂದ ಆರಂಭಗೊಂಡ ಶೌರ್ಯ ಜಾಗರಣಾ ರಥಯಾತ್ರೆಯು ಬಿ.ಎಚ್.ರಸ್ತೆಯ ಮೂಲಕ ಶಿವಪ್ಪ ನಾಯಕ ವೃತ್ತಕ್ಕೆ ತಲುಪಿತು.
ವಿಶ್ವ ಹಿಂದಿನ ಪರಿಷತ್ ಹಾಗೂ ಬಜರಂಗ ದಳ ವತಿಯಿಂದ ರಾಜ್ಯದಾದ್ಯಂತ ನಡೆಯುತ್ತಿರುವ ‘ಶೌರ್ಯ ಜಾಗರಣ ರಥಯಾತ್ರೆ’ಯ ವೇದಿಕೆ ಕಾರ್ಯಕ್ರಮ ಶಿವಪ್ಪ ನಾಯಕ ವೃತ್ತದಲ್ಲಿ ನಡೆಯಿತು.
READ | 30 ಅಡಿ ಎತ್ತರದ ‘ಉಗ್ರ ನರಸಿಂಹ’ ವೀಕ್ಷಿಸಲು ಜನವೋ ಜನ, ಶಿವಮೊಗ್ಗ ನಗರ ಕೇಸರಿಮಯ, ಈ ಸಲದ ಘೋಷಣೆ ಏನು?
ಈ ವೇಳೆ ಮಾತನಾಡಿದ ರಾಷ್ಟ್ರೀಯ ಸ್ವಯಂ ಸೇವಕ ಸಂಘ (RSS) ಶಿವಮೊಗ್ಗ ಪ್ರಾಂತ ಪ್ರಮುಖ ಲೋಹಿತಾಶ್ವ, ‘ವಿಶ್ವ ಹಿಂದೂ ಪರಿಷತ್(VHP)ಯ ಹುಟ್ಟಿನ ಉದ್ದೇಶವೇ ಹಿಂದೂ ಧರ್ಮದ ರಕ್ಷಣೆ, ಹಿಂದೂ ಸಮಾಜದಲ್ಲಿ ಶೌರ್ಯ ಜಾಗರಣೆ ಮಾಡುವುದಾಗಿದೆ. ಅದಕ್ಕಾಗಿಯೇ ಶೌರ್ಯ ಜಾಗರಣೆ ರಥಯಾತ್ರೆ ಹಮ್ಮಿಕೊಳ್ಳಲಾಗಿದೆ. ಇದು ಹಿಂದೆಂದಿಗಿಂತ ಹೆಚ್ಚು ಪ್ರಸ್ತುತವಾಗಿದೆ’ ಎಂದು ತಿಳಿಸಿದರು.
ಹಿಂದೂಗಳೆಲ್ಲ ಒಂದಾದರೆ ರಾಷ್ಟ್ರ ರಕ್ಷಣೆ ಸಾಧ್ಯವಾಗಿದೆ. ಹಿಂದೂ ದೇವತೆಗಳೇ ಶೌರ್ಯದ ಸಂಕೇತವಾಗಿದ್ದಾರೆ. ಆದರೆ, ಆಧುನಿಕ ಪಠ್ಯಕ್ರಮದಲ್ಲಿನ ಅಂತಹ ವಿಚಾರಗಳನ್ನು ಕಲಿಸದೇ ಹಿಂದೂಗಳಲ್ಲಿದ್ದ ವ್ಯಕ್ತಿಸಹಜ ಶೌರ್ಯ ಈಗಿಲ್ಲದಂತಾಗಿದೆ. ನಮ್ಮ ಪಠ್ಯದಲ್ಲಿ ಸ್ವಾತಂತ್ರ್ಯ ಅಹಿಂಸೆಯಿಂದಲೇ ಬಂದಿದೆ ಎನ್ನುವುದನ್ನು ಮನದಟ್ಟು ಮಾಡಲಾಗಿದೆ ಎಂದು ಖೇದ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ವಿಶ್ವ ಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ಜೆ.ಆರ್.ವಾಸುದೇವ, ಶ್ರೀ ನಿರ್ಮಲ್ ಸುರತ್ ಮಹಾರಾಜ್, ಪ್ರಮುಖರಾದ ಆ.ರಾಮಪ್ಪ, ಚಂದ್ರಶೇಖರ್, ರಾಜೇಶ್, ನಾರಾಯಣ್, ಮಹಾಲಿಂಗಶಾಸ್ತ್ರಿ, ರಮೇಶ್ ಬಾಬು, ವಡಿವೇಲು ಸೇರಿದಂತೆ ಇತರರು ಉಪಸ್ಥಿತರಿದ್ದರು.