ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಆತ್ಮಹತ್ಯೆಯೊಂದು ಮನೋ ಸಾಮಾಜಿಕ ಸಂಕೀರ್ಣ ಸಮಸ್ಯೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿ.ಎನ್.ಚಂದನ್ ಹೇಳಿದರು.
ಮಾನಸ ಟ್ರಸ್ಟ್ ನ ಕಟೀಲ್ ಅಶೋಕ್ ಪೈ ಸ್ಮಾರಕ ಸಂಸ್ಥೆಯು ಶಿವಮೊಗ್ಗ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಹಯೋಗದೊಂದಿಗೆ ‘ವಿಶ್ವ ಆತ್ಮಹತ್ಯೆ ತಡೆ ದಿನಾಚರಣೆ’ ಪ್ರಯುಕ್ತ ಕಾಲೇಜಿನ ಮನೋವಿಜ್ಞಾನ ಹಾಗೂ ಕ್ಲಿನಿಕಲ್ ಸೈಕಾಲಜಿ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಒಂದು ವಾರಗಳ ಕಾರ್ಯಾಗಾರ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ವಿಶ್ವದಲ್ಲಿ ಪ್ರತಿ 60 ಸೆಕೆಂಡ್ ಗಳಿಗೆ ಒಬ್ಬರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಈ ತೀವ್ರತರವಾದ ಸಮಸ್ಯೆ ತಡೆಯುವುದು ಅಗತ್ಯ.
– ಡಾ.ರಾಜೇಂದ್ರ ಚನ್ನಿ, ನಿರ್ದೇಶಕ, ಎಂ.ಸಿ.ಸಿ.ಎಸ್.
ಕಾನೂನಿನಲ್ಲಿ ಆತ್ಮಹತ್ಯೆ ಅಪರಾಧವೆಂದು ಪರಿಗಣಿಸಲ್ಪಟ್ಟರೂ ಇದರ ಯೋಚನೆಗಳು ಒಂದು ಮಾನಸಿಕ ಸಮಸ್ಯೆಯೂ ಹೌದು. ಆದುದರಿಂದ ಆತ್ಮಹತ್ಯೆಗೆ ಪ್ರಯತ್ನಿಸುವ ವ್ಯಕ್ತಿಗಳಿಗೆ ಮೂಲಭೂತವಾಗಿ ಮಾನಸಿಕ ತಜ್ಞರಿಂದ ಅನುಭೂತಿಯುಳ್ಳ ಚಿಕಿತ್ಸೆಯು ದೊರಕಬೇಕು ಎಂದು ಸಲಹೆ ನೀಡಿದರು.
ಆತ್ಮಹತ್ಯೆ ತಡೆಯುವಲ್ಲಿ ಸಮಾಜದ ಪ್ರತಿಯೊಬ್ಬರೂ ಜವಾಬ್ದಾರಿಯುತವಾಗಿ ಮಾತನಾಡಬೇಕು ಮತ್ತು ವರ್ತಿಸಬೇಕು ಎಂದರು.
READ | ಗಣೇಶ ಚತುರ್ಥಿ ಹಿನ್ನೆಲೆ ವಿಶೇಷ ರೈಲು ಸೇವೆ, ಇಲ್ಲಿದೆ ವೇಳಾಪಟ್ಟಿ
ಆತ್ಮಹತ್ಯೆಗೆ ಕಾರಣಗಳೇನು?
- ಅತಿಯಾದ ಅಸೂಯೆ, ಅತಿಯಾದ ನಿರೀಕ್ಷೆಗಳು ಹಾಗೂ ಬದುಕಿನ ಕುರಿತು ಅನಗತ್ಯ ಆಲೋಚನೆಗಳು ಆತ್ಮಹತ್ಯೆಗೆ ಕಾರಣ. ಅಲ್ಲದೆ, ಇಂದಿನ ಸಮಾಜದಲ್ಲಿ ಹೆಚ್ಚುತ್ತಿರುವ ಸ್ವಾರ್ಥಪರತೆ ಅನಗತ್ಯ ವಸ್ತುಗಳ ಕುರಿತು ಅತಿ ಆಸೆ ಹಾಗೂ ವಿವಿಧ ಆಮಿಷಗಳಿಗೆ ಬಲಿಯಾಗುವ ಪರಿಸ್ಥಿತಿಗಳು ಆತ್ಮಹತ್ಯೆಯ ಪ್ರಮಾಣವನ್ನು ಹೆಚ್ಚಿಸಿದೆ.
- ಜೀವನ ಮೌಲ್ಯದ ಕುರಿತು ಸಂಭಾಷಣೆ, ಪರಸ್ಪರ ಅವಲಂಬನೆಯ ಕುರಿತು ಗೌರವ ಋಣಾತ್ಮಕತೆಯಿಂದ ದೂರವಿರಬಲ್ಲ ಮನಸ್ಥಿತಿ ಹೆಚ್ಚಾಗಬೇಕಿದೆ. ಇದೆಲ್ಲದರ ಜೊತೆಗೆ ಮನೋಚಿಕಿತ್ಸೆಯ ಸೌಲಭ್ಯ ಹಾಗೂ ಆಪ್ತಸಮಾಲೋಚನೆ ಎಲ್ಲ ಕ್ಷೇತ್ರಗಳಲ್ಲೂ ದೊರಕುವಂತಾಗಬೇಕು.
ಸ್ಪರ್ಧೆಯಲ್ಲಿ ವಿಜೇತರು
ಭಿತ್ತಿಚಿತ್ರ ಸ್ಪರ್ಧೆಯಲ್ಲಿ ಆಲಿಯಾ (ಪ್ರಥಮ), ಅಕ್ಷತಾ ಕಾಮತ್ (ದ್ವಿತೀಯ) ಬಹುಮಾನ ಪಡೆದರು. ಕ್ಲಿನಿಕಲ್ ಸೈಕಾಲಜಿ ವಿಭಾಗದ ಮುಖ್ಯಸ್ಥ ಡಾ. ಪುಷ್ಪಲತಾ ಸ್ವಾಗತಿಸಿದರು. ಸ್ನೇಹಾ ನಿರೂಪಿಸಿದರು. ಎಂ.ಫಿಲ್ ಸೈಕಾಲಜಿ ವಿದ್ಯಾರ್ಥಿಗಳು ಪ್ರಾರ್ಥಿಸಿ, ಉಪನ್ಯಾಸಕಿ ಶ್ರೀದೇವಿ ವಂದಿಸಿದರು. ಇದೇ ಸಂದರ್ಭದಲ್ಲಿ ಎಂ.ಎಸ್ಸಿ ಮನ:ಶಾಸ್ತçದ ಪ್ರಥಮ ವರ್ಷದ ವಿದ್ಯಾರ್ಥಿಗಳು ಆತ್ಮಹತ್ಯೆಯ ಕುರಿತು ಕಿರುನಾಟಕವನ್ನು ಪ್ರದರ್ಶಿಸಿದರು. ಪ್ರಾಂಶುಪಾಲರಾದ ಡಾ.ಕೆ.ಸಂಧ್ಯಾ ಕಾವೇರಿ ಅಧ್ಯಕ್ಷತೆ ವಹಿಸಿದ್ದರು. ಮಾನಸ ಸಂಸ್ಥೆಯ ಡಾ.ರಜನಿ ಎ.ಪೈ, ಕ್ಲಿನಿಕಲ್ ಸೈಕಾಲಜಿ ವಿಭಾಗದ ಸಂಯೋಜಕಿ ಸಿಸ್ಟರ್ ಮಾರಿ ಇವ್ಲಿನ್ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.