ಸುದ್ದಿ ಕಣಜ.ಕಾಂ ಸಾಗರ
SAGAR: ಜಿಲ್ಲೆಯ ವಿವಿಧ ಕಡೆಗಳಲ್ಲಿ ದೇವಸ್ಥಾನ ಮತ್ತು ಮನೆಗಳಲ್ಲಿ ಕಳ್ಳತನ ಮಾಡಿದ ಪ್ರಕರಣ ಸಂಬಂಧ ಕಾನೂನು ಸಂಘರ್ಷಕ್ಕೆ ಒಳಪಟ್ಟ ಬಾಲಕನನ್ನು ಭಾನುವಾರ ವಶಪಡಿಸಿಕೊಳ್ಳಲಾಗಿದೆ.
ಸಾಗರ ಪಟ್ಟಣದ ಎಸ್.ಎನ್.ನಗರದ ಷಣ್ಮುಖ ಅಲಿಯಾಸ್ ರೆಡ್ಡಿ(22) ಹಾಗೂ ಒಬ್ಬ ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ವಶಕ್ಕೆ ಪಡೆಯಲಾಗಿದೆ.
ಯಾವೆಲ್ಲ ಪ್ರಕರಣಗಳಲ್ಲಿ ಭಾಗಿ?
ಇವರಿಂದ ಸಾಗರ ಗ್ರಾಮಾಂತರ ಠಾಣೆಯಲ್ಲಿ ವರದಿಯಾದ ಕರ್ಕಿಕೊಪ್ಪ ಗ್ರಾಮದ ಕಳ್ಳತನಕ್ಕೆ ಯತ್ನ ಪ್ರಕರಣ, ಉಂಬ್ಳೆಬೈಲು ಗ್ರಾಮದ ಕಳ್ಳತನ ಪ್ರಕರಣ, ಯಳವರಸೆ ಗ್ರಾಮದ ಕಳ್ಳತನ ಪ್ರಕರಣ ಮತ್ತು ಕಾನ್ಲೆ ಗ್ರಾಮದ ಕಳ್ಳತನ ಪ್ರಕರಣಗಳು ಸೇರಿ ಒಟ್ಟು 4 ಪ್ರಕರಣಗಳು ಮತ್ತು ಆನಂದಪುರ ಪೊಲೀಸ್ ಠಾಣೆಯಲ್ಲಿ ವರದಿಯಾದ ನೇದರವಳ್ಳಿ ಗ್ರಾಮದ 1 ಕಳ್ಳತನ ಪ್ರಕರಣ ಸೇರಿ ಒಟ್ಟು 5 ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದ ಅಂದಾಜು ಮೌಲ್ಯ ₹4,18,000 ಒಟ್ಟು 51 ಗ್ರಾಂ ತೂಕದ ಬಂಗಾರದ ಆಭರಣಗಳು, ಅಂದಾಜು ₹1,000 ಮೌಲ್ಯದ 20 ಗ್ರಾಂ ತೂಕದ ಬೆಳ್ಳಿ ಆಭರಣ, ಅಂದಾಜು ₹1,000 ಮೌಲ್ಯದ ಮೊಬೈಲ್ ಫೋನ್ ಮತ್ತು ಅಂದಾಜು ₹1,00,000 ಮೌಲ್ಯದ ಕೃತ್ಯಕ್ಕೆ ಬಳಸಿದ ಬೈಕ್ ಸೇರಿ ಒಟ್ಟು ₹5,20,000 ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ.
ಸಾಗರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇತ್ತೀಚಿನ ದಿನಗಳಲ್ಲಿ ವರದಿಯಾದ ಕಳ್ಳತನ ಪ್ರಕರಣಗಳಲ್ಲಿ ಮಾಲು ಮತ್ತು ಆರೋಪಿಗಳ ಪತ್ತೆಗಾಗಿ ಪೊಲೀಸ್ ಅಧೀಕ್ಷಕ ಜಿ.ಕೆ.ಮಿಥುನ್ ಕುಮಾರ್, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಅನಿಲ್ ಕುಮಾರ್ ಭೂಮಾರೆಡ್ಡಿ, ಎ.ಜಿ.ಕಾರಿಯಪ್ಪ ಮಾರ್ಗದರ್ಶದಲ್ಲಿ ಸಾಗರ ಡಿವೈಎಸ್.ಪಿ ಟಿ.ಗೋಪಾಲಕೃಷ್ಣ ನಾಯ್ಕ ಮೇಲ್ವಿಚಾರಣೆಯಲ್ಲಿ ಸಾಗರ ಗ್ರಾಮಾಂತರ ಪೊಲೀಸ್ ಠಾಣೆ ಸಿಪಿಐ ಮಹಾಬಲೇಶ್ವರ ನೇತೃತ್ವದಲ್ಲಿ ಪಿಎಸ್ಐ ನಾರಾಯಣ ಮಧುಗಿರಿ, ಸುಜಾತಾ ಸಿದ್ದರಾಮಪ್ಪ, ಸಿಬ್ಬಂದಿ ಸನಾವುಲ್ಲಾ, ಫೈರೋಜ್ ಅಹಮದ್, ರವಿಕುಮಾರ್, ಪ್ರವೀಣ್ ಕುಮಾರ್, ಚಾಲಕ ಎ.ಹೆಚ್.ಸಿ ಗಿರೀಶ್ ಬಾಬು, ಜಿಲ್ಲಾ ಪೊಲೀಸ್ ಕಚೇರಿ ತಾಂತ್ರಿಕ ಸಿಬ್ಬಂದಿ ಗುರುರಾಜ್, ಇಂದ್ರೇಶ್, ವಿಜಯ್ ಕುಮಾರ್ ಅವರನ್ನೊಳಗೊಂಡ ವಿಶೇಷ ತನಿಖಾ ತಂಡ ಪ್ರಕರಣವನ್ನು ಬೇಧಿಸಿದೆ.