ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ರಾಜ್ಯದಲ್ಲಿ ಲೋಕಸಭೆ ಎರಡನೇ ಹಂತದ ಮತದಾನ ಮಂಗಳವಾರ ನಡೆಯುತ್ತಿದ್ದು, ಶಿವಮೊಗ್ಗ ಜಿಲ್ಲೆಯಾದ್ಯಂತ ಬೆಳಗ್ಗೆಯೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ್ದಾರೆ.
READ | ರಾಜ್ಯದಲ್ಲೇ ಓಟಿಂಗ್ನಲ್ಲಿ ಶಿವಮೊಗ್ಗ ನಂ.1, ಜಿಲ್ಲೆಯ ಎಲ್ಲೆಲ್ಲಿ ಎಷ್ಟಾಗಿದೆ ಮತದಾನ?
ಕೈಕೊಟ್ಟ ಮತಯಂತ್ರ
ನಗರದ ದುರ್ಗಿಗುಡಿ ಪ್ರೌಢ ಶಾಲೆಯಲ್ಲಿನ ಮತಗಟ್ಟೆಯಲ್ಲಿ ಮತಯಂತ್ರ ಕೈಕೊಟ್ಟಿತ್ತು. ಇದರಿಂದ ಮತದಾನ ಅರ್ಧ ಗಂಟೆ ವಿಳಂಬವಾಗಿ ಆರಂಭಗೊಂಡಿತು. ಇದರಿಂದಾಗಿ ಸ್ವಲ್ಪ ಗೊಂದಲ ಸೃಷ್ಟಿಯಾಗಿತ್ತು. ತಕ್ಷಣ ಎಲ್ಲ ಸಮಸ್ಯೆಗಳನ್ನು ಬಗೆಹರಿಸಿ ಮತದಾನ ಆರಂಭಿಸಲಾಯಿತು.
ಇಲ್ಲಿ ಅರಮನೆ ಹೋಲುವ ಮತಗಟ್ಟೆ!
ನಗರದ ಜಿಲ್ಲಾ ಪಚಾಯಿತಿ ಆವರಣದಲ್ಲಿ ಅರಮನೆಗೆ ಹೋಲುವ ಮತಗಟ್ಟೆಯನ್ನು ನಿರ್ಮಿಸಲಾಗಿದೆ. ಆಕರ್ಷಕವಾದ ಕಂಬಗಳನ್ನು ನಿರ್ಮಿಸಿ ಸಾಕ್ಷಾತ್ ಅರಮನೆಯನ್ನೇ ಪ್ರವೇಶಿಸಿದ ಅನುಭವ ನೀಡುತ್ತಿದೆ. ಪ್ರಾಚೀನ ಕಾಲದ ಉಡುಗೆ ತೊಟ್ಟ ಸಿಬ್ಬಂದಿ ಮತಕೇಂದ್ರಕ್ಕೆ ಆಗಮಿಸಿದರು. ಮಾದರಿ ಮತಗಟ್ಟೆಯಾಗಿ ಈ ಜಿಲ್ಲಾ ಪಂಚಾಯತಿ ಮತಗಟ್ಟೆಯನ್ನು ರಚಿಸಲಾಗಿದೆ.
ಸೆಲ್ಫಿಗೋಸ್ಕರ ಮತದಾನ ಪ್ರಭು ಹೆಸರಿನಲ್ಲಿ ವೇದಿಕೆ ಮಾಡಿದ್ದು, ಒಂದು ಕಿರೀಟ ಮತ್ತು ಸಿಂಹಾಸನವನ್ನು ಇಡಲಾಗಿದೆ. ಮತದಾರರು ತಮ್ಮ ಹಕ್ಕು ಚಲಾಯಿಸಿದ ನಂತರ ಸಿಂಹಾಸನದ ಮೇಲೆ ಕುಳಿತು ಕಿರೀಟ ಧರಿಸಿ ಸೆಲ್ಫಿ ಕ್ಲಿಕ್ಕಿಸಿಕೊಂಡರು.
ಬೆಳಗ್ಗೆಯಿಂದಲೇ ಕ್ಯೂ ಕ್ಯೂ
ಬೆಳಗ್ಗೆಯಿಂದಲೇ ಮತದಾರರು ಮತಗಟ್ಟೆಗಳತ್ತ ಧಾವಿಸುತ್ತಿದ್ದು, ಮತದಾನ ಮಾಡುತ್ತಿದ್ದಾರೆ. ಅತಿಯಾದ ಬಿಸಿಲಿನಿಂದಾಗಿ ಬೆಳಗ್ಗೆಯೇ ಮತದಾನ ಮಾಡುವತ್ತ ಜನ ಒಲವು ತೋರಿದ್ದಾರೆ.
ರವೀಂದ್ರನಗರ, ನವುಲೆ, ಟ್ಯಾಂಕ್ ಮೊಹಲ್ಲಾ, ಬಸವನಗುಡಿ ಸಾಯಿ ಬಾಬಾ ಶಾಲೆ, ಮೈನ್ ಮಿಡ್ಲ್ಲ್ ಶಾಲೆ, ಜಿಪಂ ಆವರಣ ವಿವಿಧೆಡೆ ಭರ್ಜರಿ ಮತದಾನ ನಡೆಯುತ್ತಿದೆ. ಹಲವರು ಮೊದಲ ಮತದಾನ ಮಾಡಿದರು. ಮೈಸೂರು, ಬೆಂಗಳೂರಿನಿಂದ ಬಂದು ತಮ್ಮ ಹಕ್ಕು ಚಲಾಯಿಸಿದರು.
ವಯೋವೃದ್ಧರು ವ್ಹೀಲ್ ಚೇರ್ ನಲ್ಲಿ ಬಂದು ಮತದಾನ ಮಾಡಿದರು.
ಗಣ್ಯರ ಮತದಾನ
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಸಂಸದ ರಾಘವೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಶಿಕಾರಿಪುರದಲ್ಲಿ ಮತ ಚಲಾಯಿಸಿದರು. ಕೆ.ಎಸ್.ಈಶ್ವರಪ್ಪ ಸೈನ್ಸ್ ಮೈದಾನದ ಸರ್ಕಾರಿ ಪೂರ್ವ ಕಾಲೇಜಿನಲ್ಲಿ ಮತದಾನ ಮಾಡಿದರು.
ನಗರದ ಬಸವನಗುಡಿಯ ಸತ್ಯ ಸಾಯಿ ಶಾಲೆಯ ಮತಗಟ್ಟೆಯಲ್ಲಿ ವಿಧಾನ ಪರಿಷತ್ ಮಾಜಿ ಸಭಾಪತಿ ಡಿ.ಎಚ್.ಶಂಕರಮೂರ್ತಿ ಅವರು ಪತ್ನಿ ಸತ್ಯವತಿ, ವಿಧಾನ ಪರಿಷತ್ ಸದಸ್ಯ ಮತ್ತು ರಾಜ್ಯ ಬಿಜೆಪಿ ಕಾರ್ಯದರ್ಶಿ ಡಿ.ಎಸ್.ಅರುಣ್, ಪತ್ನಿ ಪ್ರತಿಭಾ ಅರುಣ್, ಪುತ್ರಿ ಡಿ.ಎ. ಸುಪ್ರಿಯಾ ಮತದಾನ ಮಾಡಿದರು.