ಸುದ್ದಿ ಕಣಜ.ಕಾಂ ಶಿವಮೊಗ್ಗ: ಮಲೆನಾಡಿನ ಪಾಲಿಗೆ ಇದು ಹೆಮ್ಮೆಯ ಕ್ಷಣ. ಗ್ರಾಮೀಣ ಕ್ರೀಡೆಯಾದ ಖೊಖೊದಲ್ಲಿ ಶಿವಮೊಗ್ಗ ಜಿಲ್ಲೆಯಿಂದ ಜೀವಮಾನ ಪ್ರಶಸ್ತಿ ಪಡೆದಿರುವುದೂ ಇದೇ ಮೊದಲು. ತಮ್ಮ ಇಡೀ ಬದುಕನ್ನೇ ಕ್ರೀಡೆಗೋಸ್ಕರ ಸವೆಸಿ, ಹಲವರಿಗೆ ಮಾರ್ಗದರ್ಶಕರಾಗಿ ಸೇವೆ ಸಲ್ಲಿಸಿದ `ದ್ರೋಣ’ನಿಗೆ ರಾಜ್ಯ ಸರಕಾರ ಪ್ರಶಸ್ತಿಗಾಗಿ ಆಯ್ಕೆ ಮಾಡಿರುವುದು ಅವರ ಸೇವೆಗೆ ಸಾರ್ಥಕತೆ ನೀಡಿದೆ.
ಭಾರತೀಯ ಕ್ರೀಡಾ ಪ್ರಾಧಿಕಾರ (ಎಸ್ಎಐ) ಖೋ-ಖೋ ತರಬೇತುದಾರರಾಗಿ ಸತತ ಮೂರು ದಶಕಗಳ ಕಾಲ ಕ್ರೀಡಾ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿರುವ ಶಿವಮೊಗ್ಗದ ಗೋಪಾಲಗೌಡ ಬಡಾವಣೆ ನಿವಾಸಿ ಸಂಜೀವ್ ಆರ್. ಕನಕ ಅವರಿಗೆ ರಾಜ್ಯ ಸರಕಾರ 2019-20ನೇ ಸಾಲಿನ `ಜೀವಮಾನ ಸಾಧನೆ’ ಪ್ರಶಸ್ತಿ ನೀಡಿ ಗೌರವಿಸಿದೆ.
ಆಂಧ್ರ ಪ್ರದೇಶ, ಚಿಕ್ಕಮಗಳೂರು, ಕಲಬುರಗಿ, ಶಿವಮೊಗ್ಗ, ರಾಯಚೂರು, ತಮಕೂರು ಮತ್ತು ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸಿರುವ ಸಂಜೀವ್ ಅವರು, ಹಾಲಿ ಫ್ರೆಂಡ್ಸ್ ರಿಕ್ರಿಯೇಷನ್ ಅಸೋಸಿಯೇಶನ್ ಖೋ-ಖೋ ಕ್ಲಬ್ನ ಸದಸ್ಯರೂ ಆಗಿದ್ದಾರೆ.
ರಾಷ್ಟçಮಟ್ಟದಲ್ಲಿ 2, ಮೈಸೂರು ವಿಶ್ವವಿದ್ಯಾಲಯದಲ್ಲಿ 3, ಅಂತರ ವಿಶ್ವವಿದ್ಯಾಲಯ ಮಟ್ಟದಲ್ಲಿ 1 ಹಾಗೂ 19 ವರ್ಷದೊಳಗಿನ ರಾಷ್ಟಿçÃಯ ಅಥ್ಲೆಟಿಕ್ ಚಾಂಪಿಯನ್ಶಿಪ್ನಲ್ಲಿ 800 ಮೀಟರ್ ಓಟದ ಸ್ಪರ್ಧೆಯಲ್ಲಿ ಆಟಗಾರರಾಗಿ ಭಾಗವಹಿಸಿ ಸಾಧನೆಯ ಮೂಲಕ ಕ್ರೀಡಾ ಕ್ಷೇತ್ರದಲ್ಲಿ ಗಮನ ಸೆಳೆದ್ದರು.
* ಪದಕಗಳ ಸುರಿಮಳೆ: ಸಂಜೀವ್ ಅವರು ಶಿವಮೊಗ್ಗದಲ್ಲಿ ಕೋಚ್ ಆಗಿದ್ದ ಅವಧಿಯದು. ಆಗ ಖೊ ಖೊ ಕ್ರೀಡೆಯ ಸುವರ್ಣ ಅವಧಿ ಎಂದರೂ ಅತಿಶಯೋಕ್ತಿ ಆಗದು. ಹೊಸ ಕ್ರೀಡಾಪಟುಗಳನ್ನು ಬೆಳಕಿಗೆ ತಂದು ಅವರಿಗೆ ಮಾರ್ಗದರ್ಶನ ನೀಡಿದ್ದರು.
ಖೊ ಖೊ ತರಬೇತುದಾರರಾಗಿ ಸಂಜೀವ್ ಅವರು, 6 ಸಲ ಚಿನ್ನ, 11 ಸಲ ಬೆಳ್ಳಿ ಮತ್ತು 5 ಸಲ ಕಂಚಿನ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದರು.
ಸಾಧನೆಗಳ ಸುರಿಮಳೆ
* ಕ್ರೀಡಾಪಟುವಾಗಿ: 1986-87ರಲ್ಲಿ ಬೆಂಗಳೂರು ವಿವಿ ಮಟ್ಟದಲ್ಲಿ ಶ್ರೀಮತಿ ಪಾರ್ವತಮ್ಮ ಮಲ್ಲಾರಾಧ್ಯ ಚಿನ್ನದ ಪದಕ
* 2013-14ರಲ್ಲಿ ಕ್ರೀಡಾ ರತ್ನ ಯೂಥ್ ಅಸೋಸಿಯೇಶನ್ ಕನಕ ಅವರ ಜೀವಮಾನದ ಸಾಧನೆಯನ್ನು ಪರಿಗಣಿಸಿ `ಕ್ರೀಡಾ ರತ್ನ ಪ್ರಶಸ್ತಿ’ ನೀಡಿದೆ.
* ತರಬೇತುದಾರರಾಗಿ: ಕರ್ನಾಟಕ ರಾಜ್ಯ ಗ್ರಾಮೀಣ ರಾಜ್ಯ ಖೊ ಖೊ ತಂಡಕ್ಕೆ ಐದು ಸಲ ತರಬೇತುದಾರರಾಗಿದ್ದರು. ಈ ಅವಧಿಯಲ್ಲಿ ಅಖಿಲ ಭಾರತ ಗ್ರಾಮೀಣ ಕ್ರೀಡೆಗಳ ಟೂರ್ನಿಯಲ್ಲಿ ಮೂರು ಸಲ ತಂಡ ಜಯ ಗಳಿಸಿತ್ತು.
* ಕರ್ನಾಟಕ ರಾಜ್ಯ ಜೂನಿಯರ್ ಪುರುಷರ ತಂಡದ ತರಬೇತುದಾರರಾಗಿದ್ದರು. ಆಗ, ಜ್ಯೂ. ನ್ಯಾಶನಲ್ ಖೊ ಖೊ ಚಾಂಪಿಯನ್’ಶಿಪ್ ನಲ್ಲಿ ತಂಡ ಎರಡನೇ ಸ್ಥಾನ ಗಳಿಸಿತ್ತು.
* ಸೀನಿಯರ್ ನ್ಯಾಶನಲ್ ಖೊಖೊ ಚಾಂಪಿಯನ್ ಶಿಪ್ ನಲ್ಲಿ ಕರ್ನಾಟಕ ರಾಜ್ಯ ಸೀನಿಯರ್ ಪುರುಷರ ತಂಡ ದ್ವಿತೀಯ ಸ್ಥಾನ ಗಿಟ್ಟಿಸಿಕೊಂಡಿತ್ತು.
* ಬೆಂಗಳೂರಿನಲ್ಲಿ (1997) ಹಮ್ಮಿಕೊಳ್ಳಲಾಗಿದ್ದ ನ್ಯಾಷನಲ್ ಗೇಮ್ಸ್ ನಲ್ಲಿ ಸಹಾಯಕ ತರಬೇತುದಾರರಾಗಿದ್ದರು. ಅಲ್ಲಿಯೂ ಪ್ರಥಮ ಸ್ಥಾನ.
* ಜಾರ್ಖಂಡ್ ನ ರಾಂಚಿಯಲ್ಲಿ 2011ರಲ್ಲಿ ನಡೆದ ನ್ಯಾಷನಲ್ ಗೇಮ್ಸ್ನಲ್ಲಿ ಇವರು ಮ್ಯಾನೇಜರ್ ಆಗಿದ್ದ ಕರ್ನಾಟಕ ರಾಜ್ಯ ಪುರುಷರ ತಂಡ ದ್ವಿತೀಯ ಸ್ಥಾನ ಪಡೆದಿತ್ತು.