ಸುದ್ದಿ ಕಣಜ.ಕಾಂ
ಭದ್ರಾವತಿ: ತಿನ್ನಲು ಆಹಾರವಿಲ್ಲದೇ, ದುಡಿಯಲು ಮೈಯಲ್ಲಿ ಕಸುವಿಲ್ಲದೇ ಇತ್ತ ಮಗನ ಆರೈಕೆಯೂ ಸಿಗದೇ ದಂಪತಿ ವಿಷಪ್ರಾಶನ ಮಾಡಿದ ದಾರುಣ ಘಟನೆ ತಾಲೂಕಿನ ದೊಡ್ಡೇರಿ ಸಮೀಪ ಸಂಭವಿಸಿದೆ.
ಸಂತೆಬೆನ್ನೂರಿನ ಪಂಚಣ್ಣ(67) ಮೃತಪಟ್ಟಿದ್ದು, ಈತನ ಪತ್ನಿ ಪ್ರೇಮಾ(60) ಅವರನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಹೀಗಾಗಿ, ಈಕೆ ಅಪಾಯದಿಂದ ಪಾರಾಗಿದ್ದಾರೆ.
ಇವರು ಉದ್ಯೋಗ ಅರಸಿ ಭದ್ರಾವತಿಗೆ ಆಗಮಿಸಿದ್ದರು. ಎರಡು ದಿನಗಳ ಕೆಲಸಕ್ಕಾಗಿ ಹುಡುಕಾಟ ನಡೆಸಿದರೂ ದುಡಿಯಲು ಉದ್ಯೋಗ ಸಿಗಲಿಲ್ಲ. ಹಸಿವಿನ ಬಾಧೆ ಬಿಡಲಿಲ್ಲ. ಅದಕ್ಕಾಗಿ ಬೆಂಗಳೂರಿಗೆ ಉದ್ಯೋಗ ಹುಡುಕಿ ಹೊರಟಾಗ ದಾರಿ ಮಧ್ಯೆ ಉದ್ದಾಂಜನೇಯ ದೇವಸ್ಥಾನ ಸಮೀಪದ ದೊಡ್ಡೇರಿ ಬಳಿ ವಿಷ ಸೇವನೆ ಮಾಡಿದ್ದಾರೆ. ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.