ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಸೋಮಿನಕೊಪ್ಪ ಗ್ರಾಮದ ಭೋವಿ ಕಾಲೋನಿಯ ಆಂಜನೇಯ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಸಭೆ ನಡೆಸಿದ್ದಾರೆನ್ನಲಾದ ಕೆಲವರ ವಿರುದ್ಧ ರಿಲಿಜಿಯಸ್ ಇನ್ ಸ್ಟಿಟ್ಯೂಶನ್ ಆಕ್ಟ್ ( Religious institution Act) ಮತ್ತು ರಿಪ್ರಸೆಂಟೇಶನ್ ಆಫ್ ಪೀಪಲ್ಸ್ ಆಕ್ಟ್ (Representation of peoples Act) ಅಡಿ ಪ್ರಕರಣ ದಾಖಲಾಗಿದೆ.
ರಂಗನಾಥ್, ಗಿರೀಶ್, ಲೋಕೇಶ್ ಮತ್ತು ಮೋಹನ್ ಎಂಬುವವರ ವಿರುದ್ಧ ವಿನೋಬನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
READ | ಶಿವಮೊಗ್ಗ ಪೊಲೀಸರ ಭರ್ಜರಿ ಬೇಟೆ, ಎಷ್ಟು ಹಣ, ಸರಕು ಸೀಜ್?
ಆಂಜನೇಯ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಸ್ಥಳೀಯರು ಗುಂಪಾಗಿ ಸಭೆ ನಡೆಸಿರುವ ಫೋಟೋ ಮೊಬೈಲ್ ನಲ್ಲಿ ವೈರಲ್ ಆಗಿರುವ ಬಗ್ಗೆ ಫ್ಲೈಯಿಂಗ್ ಸ್ಕ್ವಾಡ್ ತಂಡದ ಅಧಿಕಾರಿ ಮಹೇಶ್ ಅವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಫ್ಲೈಯಿಂಗ್ ಸ್ಕ್ವಾಡ್ ಸದಸ್ಯರಾದ ಎಂ.ಸಿ. ನಟರಾಜ್ ಹಾಗೂ ವಿನೋಬನಗರ ಠಾಣೆಯ ಕಾನ್ಸ್ ಟೆಬಲ್ ಉಮೇಶ್ ಅವರೊಂದಿಗೆ ಸ್ಥಳಕ್ಕೆ ಹೋಗಿ ವಿಚಾರ ಮಾಡಿದ ಬಳಿಕ ಪ್ರಕರಣ ದಾಖಲಿಸಲಾಗಿದೆ.
ಯಾವ ಕಾರಣಕ್ಕಾಗಿ ಪ್ರಕರಣ ದಾಖಲು?
ಕಾಂಗ್ರೆಸ್ ಪಕ್ಷದ ಮುಖಂಡರಾದ ರಂಗನಾಥ್, ಗಿರೀಶ್, ಲೋಕೇಶ್ ಮತ್ತು ಮೋಹನ್ ಅವರು ಅಲ್ಲಿ ನೆರೆದಿದ್ದ ಸಾರ್ವಜನಿಕರಿಗೆ ಭಿತ್ತಿ ಪತ್ರಗಳನ್ನು ಹಂಚಿಕೆ ಮಾಡಿರುವುದು ತಿಳಿದುಬಂದಿದೆ. ದೇವಸ್ಥಾನವು ಧಾರ್ಮಿಕ ಚಟುವಟಿಕೆಗಳಿಗೆ ಸೀಮಿತವಾಗಿದ್ದರೂ ಸಹ ಚುನಾವಣಾಧಿಕಾರಿಗಳಿಂದ ಅನುಮತಿ ಪಡೆಯದೇ ರಾಜಕೀಯ ಸಭೆ ಮತ್ತು ಚಟುವಟಿಕೆಗಳನ್ನು ಮಾಡಿ, ಧಾರ್ಮಿಕ ಸ್ಥಳವನ್ನು ದುರುಪಯೋಗಪಡಿಸಿಕೊಂಡು ಕಾಂಗ್ರೆಸ್ ಪಕ್ಷದ ಪರವಾಗಿ ಪ್ರಚಾರ ಮಾಡಿ ಮಾದರಿ ನೀತಿ ಸಂಹಿತೆ ಉಲಂಘನೆ ಮಾಡಿರುತ್ತಾರೆಂದು ಮಹೇಶ್ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. ಈ ಕುರಿತು ತನಿಖೆ ನಡೆಸಲಾಗುತ್ತಿದೆ.
MCC | ಏನಿದು ನೀತಿಸಂಹಿತೆ, ಏನೆಲ್ಲ ಮಾಡುವಂತಿಲ್ಲ, ಯಾವುದಕ್ಕೆ ವಿನಾಯಿತಿ ಇರಲಿದೆ?