ಸುದ್ದಿ ಕಣಜ.ಕಾಂ ಬೆಂಗಳೂರು
BENGALURU: ವಿರೋಧ ಪಕ್ಷ ಹಾಗೂ ರೈತರ ನಿರಂತರ ಒತ್ತಾಯದ ಬಳಿಕ ರಾಜ್ಯ ಸರ್ಕಾರ 195 ತಾಲೂಕುಗಳನ್ನು ಬರ ಪೀಡಿತ ಎಂದು ಘೋಷಿಸಿ ಆದೇಶಿಸಿದೆ. ಇದರಲ್ಲಿ 161 ತಾಲೂಕುಗಳು ತೀವ್ರ ಬರಪೀಡಿತ, 34 ಸಾಧಾರಣ ಬರ ಪೀಡಿತ ಎಂದು ಉಲ್ಲೇಖಿಸಲಾಗಿದೆ.
ರಾಜ್ಯದಲ್ಲಿ ಬರ ಅಧ್ಯಯನಕ್ಕೆ ಸಂಪುಟ ಉಪ ಸಮಿತಿಯನ್ನು ರಚಿಸಲಾಗಿತ್ತು. ಸಮಿತಿ ನೀಡಿದ ಅಧ್ಯಯನ ವರದಿಯ ಆಧಾರದ ಮೇಲೆ ತಾಲೂಕುಗಳನ್ನು ಘೋಷಿಸಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರದ ನಿಯಮಗಳ ಅನುಸಾರವಾಗಿ ಪಟ್ಟಿ ಮಾಡಲಾಗಿದೆ.
READ | ಮಲೆನಾಡಿನ ಬೆಳೆಗಳ ಮೇಲೆಬರದ ಛಾಯೆ, ಅನ್ನದ ಬಟ್ಟಲಿಗೆ ಬೆಂಕಿ
ಶಿವಮೊಗ್ಗ ಜಿಲ್ಲೆಯಲ್ಲಿ ಯಾವ ತಾಲೂಕುಗಳು ಪಟ್ಟಿಯಲ್ಲಿವೆ?
ಶಿವಮೊಗ್ಗ ಜಿಲ್ಲೆಯ ಏಳೂ ತಾಲೂಕುಗಳು ತೀವ್ರ ಬರಪೀಡಿತ ಪಟ್ಟಿಯಲ್ಲಿವೆ. ಶಿವಮೊಗ್ಗ, ಭದ್ರಾವತಿ, ಶಿಕಾರಿಪುರ, ಸೊರಬ, ತೀರ್ಥಹಳ್ಳಿ, ಸಾಗರ ಮತ್ತು ಹೊಸನಗರ ತಾಲೂಕುಗಳ ಹೆಸರುಗಳನ್ನು ಶಿಫಾರಸು ಮಾಡಲಾಗಿದೆ.
ಜಿಲ್ಲೆಯಲ್ಲಿ ಹೇಗಿದೆ ಸ್ಥಿತಿ?
ಇಷ್ಟೊತ್ತಿಗಾಗಲೇ ಭಾರಿ ಮಳೆಯಿಂದ ಮಲೆನಾಡು ಸಮೃದ್ಧವಾಗಿರಬೇಕಿತ್ತು. ಜಲಾಶಯ, ಝರಿ, ನದಿಗಳು ತುಂಬಿ ಹರಿಯಬೇಕಿತ್ತು. ಆದರೆ, ಮುಂಗಾರು ಮಳೆ ನಿರೀಕ್ಷಿತ ಪ್ರಮಾಣದಲ್ಲಿ ಸುರಿದಿಲ್ಲ. ಹೀಗಾಗಿ, ಕೃಷಿ ಸೇರಿದಂತೆ ಕುಡಿಯುವ ನೀರಿಗೂ ಪರದಾಡುವಂತಾಗಿದೆ.
ಭತ್ತಕ್ಕೆ ನೀರಿಲ್ಲ, ಅಡಿಕೆ ಸಸಿಗಳು ಒಣಗುತ್ತಿವೆ, ಮೆಕ್ಕೆ ಜೋಳ ಸಹ ಒಣಗುತ್ತಿದೆ. ತೋಟಗಳಿಗೆ ನೀರು ಹಾಯಿಸುವುದು ಹೇಗೆಂಬ ಚಿಂತೆ ಕಾಡುತ್ತಿದೆ.