ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ನಗರದ ಅಮೀರ್ ಅಹಮದ್ ವೃತ್ತ ಹಾಗೂ ಶಿವಪ್ಪ ನಾಯಕ ವೃತ್ತದಲ್ಲಿ ಶುಕ್ರವಾರ ತಡರಾತ್ರಿ ಕೇಸರಿ ಬಾವುಟ ತೆರವು ವಿಚಾರವಾಗಿ ಕೆಲಹೊತ್ತು ಗೊಂದಲದ ವಾತಾವರಣ ಸೃಷ್ಟಿಯಾಗಿತ್ತು. ಜಿಲ್ಲಾ ಪೊಲೀಸ್ ಅಧೀಕ್ಷಕ ಜಿ.ಕೆ.ಮಿಥುನ್ ಕುಮಾರ್ ಉಪಸ್ಥಿತಿಯಲ್ಲಿ ಕೆಲಹೊತ್ತಲ್ಲೇ ಗೊಂದಲ ನಿವಾರಣೆ ಮಾಡಲಾಗಿದೆ.
ಅಲಂಕಾರದ ವಿಚಾರವಾಗಿ ಸಣ್ಣ ಗೊಂದಲ ಉಂಟಾಗಿತ್ತು. ಎರಡೂ ಸಮುದಾಯಗಳ ಹಿರಿಯ ಮುಖಂಡರೊಂದಿಗೆ ಮಾತನಾಡಿ ಬಗೆಹರಿಸಲಾಗಿದೆ. ಯಾವುದೇ ಸಮಸ್ಯೆಗಳಿಲ್ಲ.
– ಜಿ.ಕೆ.ಮಿಥುನ್ ಕುಮಾರ್, ಎಸ್.ಪಿ
ಹಿಂದೂ ಮಹಾಸಭಾ ಗಣಪತಿ ವಿಸರ್ಜನಾ ಪೂರ್ವ ಮೆರವಣಿಗೆ ಹಿನ್ನೆಲೆಯಲ್ಲಿ ಇಡೀ ನಗರವನ್ನು ಕೇಸರಿ ಬಾವುಟ, ಭಗಧ್ವಜ ಹಾಗೂ ಬಂಟಿಂಗ್ಸ್ ಗಳಿಂದ ಅಲಂಕರಿಸಲಾಗಿತ್ತು. ಹಿಂದೂ ಮಹಾಸಭಾ ಹಾಗೂ ಓಂ ಗಣಪತಿ ವಿಸರ್ಜನೆ ಬಳಿಕ ಕೇಸರಿ ಬಾವುಟ, ಬಂಟಿಂಗ್ಸ್ ತೆರವುಗೊಳಿಸುವುದಾಗಿ ಅಲಂಕಾರ ಸಮಿತಿ ತಿಳಿಸಿತ್ತು.
READ | ಹಿಂದೂ ಮಹಾಸಭಾ ಗಣೇಶ ವಿಸರ್ಜನೆ ಎಷ್ಟು ಗಂಟೆಗಾಯ್ತು? ಮಹಾಮಂಡಳಿ ವಿಶೇಷ ಪ್ರಕಟಣೆಯಲ್ಲಿ ಏನಿದೆ?
ಬಾವುಟ ತೆಗೆದ ವಿಚಾರಕ್ಕೆ ಗೊಂದಲ
ನಗರದ ಕಸ್ತೂರ್ ಬಾ ಪ್ಲೆಕ್ಸ್ ಹೋರ್ಡಿಂಗ್ಸ್ ಮೇಲೆ ಕಟ್ಟಲಾಗಿದ್ದ ಕೇಸರಿ ಬಾವುಟವನ್ನು ತೆರವುಗೊಳಿಸಲಾಗಿದೆ ಎಂಬ ಕಾರಣಕ್ಕೆ ಗೊಂದಲ ಸೃಷ್ಟಿಯಾಗಿತ್ತು. ತೆರವುಗೊಳಿಸಿರುವ ಧ್ವಜವನ್ನು ಮತ್ತೇ ಅಲ್ಲೇ ಕಟ್ಟಬೇಕು. ನಾವೇ ಅದನ್ನು ತೆಗೆಯುತ್ತೇವೆ ಎಂದು ಹಿಂದೂ ಸಂಘಟನೆಯವರು ಪಟ್ಟು ಹಿಡಿದ್ದಿದ್ದರು ಎಂದು ತಿಳಿದುಬಂದಿದೆ. ಈ ವಿಚಾರ ತಿಳಿದಿದ್ದೇ ಎಸ್.ಪಿ ಮಿಥುನ್ ಕುಮಾರ್ ಘಟನಾ ಸ್ಥಳಕ್ಕೆ ಆಗಮಿಸಿದ್ದಾರೆ. ಎರಡು ಕೋಮಿನ ಮುಖಂಡರು, ಕಾರ್ಯಕರ್ತರೊಂದಿಗೆ ಮಾತನಾಡಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ.