ಸುದ್ದಿ ಕಣಜ.ಕಾಂ
ಶಿವಮೊಗ್ಗ: ಕರ್ಫ್ಯೂ ಹೇರಿದಾಗಲೂ ಎಪಿಎಂಸಿ ಮಾರ್ಕೆಟ್ ನಲ್ಲಿ ಜನಜಂಗುಳಿ ನಿಯಂತ್ರಿಸುವುದೇ ಪಾಲಿಕೆ ಹಾಗೂ ಪೊಲೀಸರಿಗೆ ದೊಡ್ಡ ಕೆಲಸವಾಗಿ ಮಾರ್ಪಟ್ಟಿದೆ. ಹೀಗಾಗಿ, ಸೋಮವಾರದಿಂದಲೇ ಅನ್ವಯವಾಗುವಂತೆ ಎಪಿಎಂಸಿ ಒಳಗೆ ಸಗಟು ವ್ಯವಹಾರಕ್ಕೆ ಮಾತ್ರ ಅವಕಾಶವಿದೆ. ಇನ್ನು ಚಿಲ್ಲರೆ ವ್ಯಾಪಾರಕ್ಕೆ ಅಲ್ಲಿ ಅವಕಾಶ ನೀಡಲಾಗುವುದಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಸೂಚನೆ ನೀಡಿದರು.
READ | ನಾಳೆಯಿಂದ ವಾಹನ ರಸ್ತೆಗಿಳಿದರೆ 14 ದಿನ ಸೀಜ್
ಜಿಲ್ಲಾಧಿಕಾರಿ ಹೊಸ ಸಭಾಂಗಣದಲ್ಲಿ ಭಾನುವಾರ ನಡೆದ ಸಭೆಯಲ್ಲಿ ಮಾತನಾಡಿದ ಅವರು, ತರಕಾರಿ ಮಾರಾಟಕ್ಕೆ ಪಾಲಿಕೆ ವ್ಯಾಪ್ತಿಯಲ್ಲಿ ಆರು ಕಡೆ ವ್ಯವಸ್ಥೆ ಮಾಡಲಾಗುವುದು. ಜತೆಗೆ, ತಳ್ಳುಗಾಡಿಯವರೇ ಪ್ರತಿಯೊಂದು ಬಡಾವಣೆಗೆ ಮಾರಾಟ ಮಾಡಿಕೊಂಡು ಬರಲಿದ್ದಾರೆ. ಸಾರ್ವಜನಿಕರಿಗೆ ತೊಂದರೆ ಆಗದಂತೆ ಹಾಗೂ ಜನಸಂದಣಿಸೇರುವುದನ್ನು ತಡೆಯಲು ಈ ಕ್ರಮ ಕೈಗೊಳ್ಳಲಾಗಿದೆ. ಈ ನಿಟ್ಟಿನಲ್ಲಿ ಅಗತ್ಯ ಕ್ರಮ ವಹಿಸಲು ಪಾಲಿಕೆ ಆಯುಕ್ತ ಚಿದಾನಂದ್ ವಟಾರೆ ಅವರಿಗೆ ನಿರ್ದೇಶನ ನೀಡಿದರು.
ಆರು ಸ್ಥಳಗಳನ್ನು ಗುರುತಿಸಿ ಆ ಬಗ್ಗೆ ಸಾರ್ವಜನಿರಿಗೆ ಮಾಹಿತಿ ನೀಡಲಾಗುವುದು. ಜತೆಗೆ, ಅಲ್ಲಿಯೂ ಪೊಲೀಸ್ ಬಿಗಿ ಬಂದೋಬಸ್ತ್ ವಿಧಿಸಲಾಗುವುದು ಎಂದು ಮಾಹಿತಿ ನೀಡಿದರು.
ಎಲ್ಲೆಲ್ಲಿ ತರಕಾರಿ ಮಾರಾಟಕ್ಕೆ ಅವಕಾಶ | 100 ರಸ್ತೆಯಲ್ಲಿರುವ ಶಿವಾಲಯ ಸಮೀಪ, ಕಾಶಿಪುರ, ಸೈನ್ಸ್ ಮೈದಾನ, ಖಾಸಗಿ ಬಸ್ ನಿಲ್ದಾಣ, ತುಂಗಾ ನಗರ ಪಿಎಸ್ಸಿ ಎದುರು, ಮಹಾದೇವಿ ಟಾಕೀಸ್ ಎದುರು. ಈ ಪ್ರದೇಶಗಳಲ್ಲಿ ವ್ಯಾಪಾರಕ್ಕೆ ಅವಕಾಶ ನೀಡಲಾಗಿದೆ. ಸಾರ್ವಜನಿಕರು ಸಾಮಾಜಿಕ ಅಂತರ ಕಾಪಾಡಬೇಕೆಂದು ಕೋರಲಾಗಿದೆ.
ಸಂಸದ ಬಿ.ವೈ.ರಾಘವೇಂದ್ರ, ಡಿಸಿ ಶಿವಕುಮಾರ್, ಎಡಿಸಿ ಜಿ.ಅನುರಾಧ ಮತ್ತಿತರರು ಉಪಸ್ಥಿತರಿದ್ದರು.
https://www.suddikanaja.com/2021/05/05/no-covid-vaccine-first-dose/