ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಶಿವಮೊಗ್ಗ ನಗರ ವಿಧಾನಸಭೆ ಕ್ಷೇತ್ರದ ಶಾಸಕ ಎಸ್.ಎನ್.ಚನ್ನಬಸಪ್ಪ (ಚನ್ನಿ) ಅವರು ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಲು ವಿನೂತನ ಪ್ರಯತ್ನಕ್ಕೆ ಕೈಹಾಕಿದ್ದಾರೆ. ಅದಕ್ಕಾಗಿ ನಾಗರಿಕರ ಸಲಹಾ ಸಂಗ್ರಹ ಅಭಿಯಾನ ಆರಂಭಿಸಿದ್ದಾರೆ.
ಏನಿದು ಸಲಹಾ ಅಭಿಯಾನ?
ಸ್ವತಂತ್ರ ಭಾರತ 77ನೇ ಸ್ವಾತಂತ್ರ್ಯೋತ್ಸವ ಆಚರಿಸುತ್ತಿರುವ ಈ ಶುಭ ಸಂದರ್ಭದಲ್ಲಿ ಮುಂದಿನ ಐದು ವರ್ಷಗಳು ಶಿವಮೊಗ್ಗ ನಗರ ಹೇಗಿರಬೇಕು? ಎಂಬ ಚಿಂತನೆಯೊಂದಿಗೆ 15 ದಿನಗಳ ಕಾಲ ಶಿವಮೊಗ್ಗ ನಗರದ ನಾಗರಿಕರಿಂದ ಸಲಹಾ ಸಂಗ್ರಹ ಅಭಿಯಾನ ಕಾರ್ಯಕ್ರಮಕ್ಕೆ ಶಾಸಕ ಎಸ್.ಎನ್. ಚನ್ನಬಸಪ್ಪ, ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಅವರು ಚಾಲನೆ ನೀಡಿದರು.
READ | ಯಾರು ರಕ್ತದಾನ ಮಾಡಬಹುದು, ಯಾರು ಮಾಡುವಂತಿಲ್ಲ? ರಕ್ತದ ಮಹತ್ವವೇನು? ರಕ್ತದಾನ ಪ್ರಯೋಜನಗಳೇನು?
ಬಿಜೆಪಿ ಕಾರ್ಯಕರ್ತರ ಪಡೆಯಿಂದ ಅನುಷ್ಠಾನ
ಈ ವೇಳೆ ಮಾತನಾಡಿದ ಕೆ.ಎಸ್. ಈಶ್ವರಪ್ಪ ಮಾತನಾಡಿ, ಬಿಜೆಪಿ ಕಾರ್ಯಕರ್ತರ ಪಡೆ ನಾಗರಿಕರು ನೀಡಿದ ಸಲಹೆಗಳನ್ನು ಅನುಷ್ಠಾನಗೊಳಿಸುವಲ್ಲಿ ನೆರವು ನೀಡಲಿದೆ. ಸಂಬಂಧಪಟ್ಟ ಇಲಾಖೆ ಜೊತೆಗೆ ಶಾಸಕರ ನೇತೃತ್ವದಲ್ಲಿ ಸರ್ಕಾರದ ಗಮನ ಸೆಳೆದು ಹೆಚ್ಚಿನ ಮುತುವರ್ಜಿ ವಹಿಸಿ ಸಾರ್ವಜನಿಕರ ಕುಂದುಕೊರತೆಗಳನ್ನು ನಿವಾರಿಸಲು ಪ್ರಯತ್ನಿಸುತ್ತಾರೆ. ಸಾರ್ವಜನಿಕರು ಕೂಡ ತಮ್ಮ ಸಮಸ್ಯೆ ಬಗೆಹರಿದ ಕೂಡಲೇ ಅದನ್ನು ಮಾಧ್ಯಮಗಳ ಮೂಲಕ ಬೆಳಕಿಗೆ ತನ್ನಿ. ಇದರಿಂದ ಉಳಿದವರಿಗೂ ತಮ್ಮ ನಗರ ಮತ್ತು ವಠಾರದ ಸಮಸ್ಯೆ ಬಗೆಹರಿಸಲು ಅನುಕೂಲವಾಗುತ್ತದೆ ಎಂದರು.
35 ವಾರ್ಡ್ 50 ಸಲಹಾ ಪೆಟ್ಟಿಗೆ
ಈ ಕರ್ತವ್ಯ ಪಡೆಯಲ್ಲಿ ಇಂಜಿನಿಯರ್, ವೈದ್ಯರು, ವಿಷಯತಜ್ಞರು ಇರುತ್ತಾರೆ. ನಮ್ಮ ನಗರ ಸುಸಜ್ಜಿತ, ಸುಂದರ ಮತ್ತು ಮೂಲಭೂತ ಸೌಲಭ್ಯಗಳು ಲಭ್ಯವಾಗುವ ರೀತಿಯಲ್ಲಿ ಎಲ್ಲರೂ ಕೈ ಜೋಡಿಸೋಣ. ಇದಕ್ಕೆ ನಾಗರಿಕರ ಸಹಕಾರ ಅತಿ ಮುಖ್ಯ. ಈ ಅಭಿಯಾನವು ಗುರುವಾರದಿಂದ ಆ.31ರವರೆಗೆ ನಡೆಯುತ್ತದೆ. ಇದರ ಭಾಗವಾಗಿ ಶಿವಮೊಗ್ಗ ನಗರದ 35 ವಾರ್ಡ್ಗಳು ಹಾಗೂ 50 ಪ್ರಮುಖ ಸ್ಥಳಗಳಲ್ಲಿ ಸಲಹಾ ಪೆಟ್ಟಿಗೆಯನ್ನಿಡಲಾಗುತ್ತದೆ. ನಿಮ್ಮ ಸಲಹೆಗಳು ಶಿವಮೊಗ್ಗವನ್ನು ಸ್ಮಾರ್ಟ್ ಮಾಡುವಲ್ಲಿ ಸಹಕಾರಿಯಾಗುತ್ತದೆ. ನಗರದ ನಾಗರಿಕರು ಈ ಅಭಿಯಾನದಲ್ಲಿ ಪಾಲ್ಗೊಂಡು, ಅಭಿಯಾನವನ್ನು ಯಶಸ್ವಿಗೊಳಿಸಿ ಎಂದು ವಿನಂತಿಸಿದರು
– ಎಸ್.ಎನ್. ಚನ್ನಬಸಪ್ಪ, ಶಾಸಕರು
ಮಹಾನಗರ ಪಾಲಿಕೆಯ ಮೇಯರ್ ಶಿವಕುಮಾರ್, ಉಪಮೇಯರ್ ಲಕ್ಷ್ಮೀಶಂಕರ ನಾಯಕ್, ಬಿಜೆಪಿ ನಗರ ಅಧ್ಯಕ್ಷ ಜಗದೀಶ್, ವಿಭಾಗ ಪ್ರಭಾರಿ ಗಿರೀಶ್ ಪಟೇಲ್, ಮಹಾನಗರ ಪಾಲಿಕೆ ಆಡಳಿತ ಪಕ್ಷದ ನಾಯಕರಾದ ಜ್ಞಾನೇಶ್ವರ್, ಬಿಜೆಪಿ ಮುಖಂಡರು, ಕಾರ್ಯಕರ್ತರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
Exams | KPSC ಯಿಂದ ರೇಷ್ಮೆ ವಿಸ್ತರಣಾಧಿಕಾರಿ ಹುದ್ದೆಗಳ ಪರೀಕ್ಷೆ, ಪರೀಕ್ಷಾರ್ಥಿಗಳು ಗಮನಿಸಿಬೇಕಾದ ಅಂಶಗಳಿವು