ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಕ್ರಾಂತಿದೀಪ ಪ್ರಾದೇಶಿಕ ಪತ್ರಿಕೆಯ ಮುದ್ರಣಾಲಯವನ್ನು ಶುಕ್ರವಾರ ಉದ್ಘಾಟಿಸಿದ ಶಿಕ್ಷಣ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ತಮ್ಮ ಪತ್ರಿಕೋದ್ಯಮ ಜರ್ನಿಯನ್ನು ಬಿಚ್ಚಿಟ್ಟರು.
ನಿರೀಕ್ಷಿತ ಜಾಹೀರಾತು ಸಿಗದೇ ಪತ್ರಿಕೆ ಕ್ಲೋಸ್ ಮಾಡಿದೆ
ನಾನು ಕೂಡ ಪತ್ರಿಕೆಯನ್ನು ನಡೆಸುತ್ತಿದ್ದೆ. ಪತ್ರಿಕೆ ನಡೆಸುವುದು ಅದೆಂತಾ ಕಷ್ಟ ಎಂಬ ಅರಿವು ನನಗಿದೆ ಎಂದು ಹಳೆಯ ನೆನಪುಗಳನ್ನು ಮಧು ಮೆಲುಕು ಹಾಕಿದರು.
ನಾನು ಮುದ್ರಣ ಮಾಧ್ಯಮವನ್ನು ಈ ಹಿಂದೆ ಆಕಾಶ್ ಸಂಸ್ಥೆ ಮಾಡುವಾಗ ನಡೆಸುತ್ತಿದ್ದೆ. ಆಗ ಪೆÇಲೀಟಿಕ್ಸ್ ಪಾಂಪ್ಲೇಟ್, ಬ್ಯಾನರ್ ಬಂಟಿಂಗ್ಸ್ ಗಳನ್ನು ಮಾಡುತ್ತಿದ್ದೆ. ಸದಾಶಿವ ನಗರದಲ್ಲಿ ಸ್ಟಾರ್ ದಿನಪತ್ರಿಕೆಯನ್ನು ಸಹ ಮಾಡಿದ್ದೆ. ಸಿನಿಮಾ ನಟರ ಫೋಟೋ ಶೂಟ್ ಅನ್ನು ಭಿನ್ನ ರೀತಿಯಲ್ಲಿ ಕ್ಲಿಕ್ಕಿಸಿ ಕ್ವಾಲಿಟಿ ಪೇಪರ್ ನಲ್ಲಿ ಮುದ್ರಿಸಿ ಪ್ರಕಟಿಸುತ್ತಿದ್ದೇವು. ಸಿನಿಮಾ ಲ್ಯಾಂಡ್ ನ ಜಾಹೀರಾತು ಮೂಲದಿಂದ ಬರುವ ಆದಾಯದಿಂದ ಪತ್ರಿಕೆ ಕಟ್ಟಬೇಕೆಂಬ ಉದ್ದೇಶ ನನ್ನದಾಗಿತ್ತು. ಆದರೆ, ಅಲ್ಲಿ ಕೂಡ ಆರಂಭದಲ್ಲಿ ಸಿಕ್ಕ ಜಾಹೀರಾತು ನಿರೀಕ್ಷಿಸಿದಂತೆ ಕೊನೆ ದಿನಗಳಲ್ಲಿ ಸಿಗಲಿಲ್ಲ. ಹೀಗಾಗಿ ಪತ್ರಿಕೆಯನ್ನು ಬಂದ್ ಮಾಡಬೇಕಾಯಿತು. ಆದರೆ, ಆ ಟೈಟಲ್ ಈಗಲೂ ನನ್ನ ಬಳಿ ಇದೆ ಎಂದು ಪತ್ರಿಕೋದ್ಯಮ ನೆನಪಿನ ಬುತ್ತಿಯನ್ನು ಉಣಬಡಿಸಿದರು.
READ | ಕರ್ನಾಟಕ ಸಂಘದ ಪುಸ್ತಕ ಬಹುಮಾನ ಘೋಷಣೆ, ಯಾವೆಲ್ಲ ಪುಸ್ತಕಗಳು ಆಯ್ಕೆಯಾಗಿವೆ? ಇಲ್ಲಿದೆ ಪಟ್ಟಿ
ನಾನು ವಾಣಿಜ್ಯ ಉದ್ದೇಶದಿಂದಲೇ ಸ್ಟಾರ್ ದಿನ ಪತ್ರಿಕೆಯನ್ನು ಆರಂಭಿಸಿದ್ದೆ. ಅವಾರ್ಡ್ ಮತ್ತು ರಿವಾರ್ಡ್ ಎರಡು ಉದ್ದೇಶಗಳನ್ನಿಟ್ಟುಕೊಂಡು ಪತ್ರಿಕೆಯನ್ನು ಕಟ್ಟಬೇಕೆಂದುಕೊಂಡಿದ್ದೆ. ಜಾಹೀರಾತು ಇಲ್ಲದೆ ಒಂದು ಪತ್ರಿಕೆಯನ್ನು ಉಳಿಸಿಕೊಳ್ಳುವುದು ಕಷ್ಟಸಾಧ್ಯ. ಸೋಷಿಯಲ್ ಮೀಡಿಯಾ ಅಬ್ಬರದಲ್ಲಿ ಜಾಹೀರಾತುಗಳು ಕೂಡ ಪತ್ರಿಕೆಗಳಿಗೆ ಕಡಿಮೆಯಾಗುತ್ತಿದೆ. ಇಂತಹ ಸವಾಲಿನ ಸಂದರ್ಭದಲ್ಲೂ ಪತ್ರಿಕೆಗಳು ತಮ್ಮ ಜೀವಂತಿಕೆಯನ್ನು ಉಳಿಸಿಕೊಂಡು ಸಮಾಜದ ಪ್ರತಿನಿಧಿಗಳಂತೆ ಕೆಲಸ ಮಾಡುತ್ತಿರುವುದು ನಿಜಕ್ಕೂ ಶ್ಲಾಘನೀಯ ಎಂದು ಹೇಳಿದರು.
ಸಿನಿ ಜರ್ನಿ ಮೆಲುಕು
ನಾನು ನಿರ್ಮಿಸಿದ ಕಲ್ಲರಳಿ ಹೂವಾಗಿ ಸಿನಿಮಾಕ್ಕೆ ನ್ಯಾಷನಲ್ ಅವಾರ್ಡ್ ಬಂತು. ಗುಡ್ ಕ್ರಿಟಿಕ್ ಗಾಗಿ ಆ ಅವಾರ್ಡ್ ಬಂದಾಗ ನನಗೆ ಅತೀವ ಸಂತೋಷವಾಗಿತ್ತು ಎಂದು ಮಧು ತಿಳಿಸಿದರು.
ಯಾರು ಏನು ಹೇಳಿದರು?
ಸೃಜನಶೀಲತೆ ಕಳೆದುಕೊಳ್ಳುತ್ತಿರುವ ಕೆಲ ಪತ್ರಿಕೆಗಳು
ಕಾರ್ಯಕ್ರಮದಲ್ಲಿ ಮಾತನಾಡಿದ ಮಾಜಿ ಸಚಿವ ಕಿಮ್ಮನೆ ರತ್ನಾಕರ್, ನಮ್ಮ ಮುಖ ಹೇಗಿದೆ ಎಂಬುದಕ್ಕೆ ಕನ್ನಡಿ ನೋಡುತ್ತೇವೆ. ಅದೇ ರೀತಿ ಸಮಾಜ ಹೇಗಿದೆ ಎಂಬುದಕ್ಕೆ ಪ್ರತಿದಿನ ಪತ್ರಿಕೆ ಓದುತ್ತೇವೆ. ಪ್ರಸ್ತುತ ದಿನಗಳಲ್ಲಿ ಕೆಲ ಪತ್ರಿಕೆಗಳು ತಮ್ಮ ಸೃಜನಶೀಲತೆಯನ್ನು ಕಳೆದುಕೊಳ್ಳುತ್ತಿವೆ. ನಾನು ಈಗಲೂ ಪ್ರಜಾವಾಣಿ ಪತ್ರಿಕೆಯ ಪರ್ಮನೆಂಟ್ ಸಬ್ ಸ್ಕೈಬರ್. ಹಾಗಂತ ಬೇರೆಯವರು ಅಪಾರ್ಥ ಮಾಡಿಕೊಂಡರೂ ಚಿಂತೆಯಿಲ್ಲ. ಪ್ರಜಾವಾಣಿ ಪತ್ರಿಕೆಯು ಸುದ್ದಿ ವಿಚಾರದಲ್ಲಿ ಎಲ್ಲಿ ಕೂಡ ರಾಜೀ ಮಾಡಿಕೊಂಡಿಲ್ಲ. ನೈಜ ಸುದ್ದಿಯನ್ನೇ ನೀಡುತ್ತಾ ಬಂದಿರುವುದರಿಂದ ಪತ್ರಿಕೆ ಮೇಲಿನ ವಿಶ್ವಾಸ ಗಟ್ಟಿಯಾಗಿದೆ. ಕ್ರಾಂತಿದೀಪ ಪತ್ರಿಕೆ ಸಂಪಾದಕರ ಕಷ್ಟದ ದಿನಗಳಲ್ಲಿ ನಾನು ಅವರ ಜೊತೆಗಿದ್ದೆ ಎಂದು ಹೇಳಿದರು.
ಕೋವಿಡ್ ಕಾಲದಲ್ಲಿ ಸಾಕಷ್ಟು ಕಳೆದುಕೊಂಡಿದ್ದೇವೆ
ಕರಾವಳಿ ಮುಂಜಾವು ಪತ್ರಿಕೆ ಗಂಗಾಧರ್ ಹಿರೇಗುತ್ತಿ ಮಾತನಾಡಿ, ಕ್ರಾಂತಿದೀಪ ಪತ್ರಿಕೆ ಸಂಪಾದಕ ಮಂಜಣ್ಣ ಅವರು ಇಂದು ಮುದ್ರಾಣಾಲಯವನ್ನು ಮಾಡಿರುವುದು ಓದುಗರಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸುವಂತೆ ಮಾಡಿದೆ. ಓದುಗರ ವಿಶ್ವಾಸ ಮತ್ತಷ್ಟು ಗಟ್ಟಿಯಾಗುವಂತೆ ಮಾಡುತ್ತದೆ. ಕೋವಿಡ್ ಸಂದರ್ಭದಲ್ಲಿ ಪತ್ರಿಕೆಗಳು ಕಳೆದುಕೊಂಡಿದ್ದನ್ನು ಮತ್ತೆ ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಆದರೆ ನಿರಾಸೆ ಎಂಬುದು ಜಾಹಿರಾತುಗಳಿಲ್ಲದೆ ಪುರವಣಿಗಳಿಲ್ಲದೆ ಪತ್ರಿಕೆಗಳನ್ನು ಮುನ್ನೆಡುಸುವುದು ಕಷ್ಟವಾಗುತ್ತದೆ ಎಂದರು.
‘ಚೆಕ್ಕು’ ಬೆಕ್ಕಾಯಿತು!
ಈಶಾನ್ಯ ಟೈಮ್ಸ್ ಸಂಪಾದಕ ನಾಗರಾಜ್ ಮಾತನಾಡಿ, ಮುದ್ರಣ ಮಾಧ್ಯಮವು ಆಧುನಿಕ ಕಾಲಘಟ್ಟಕ್ಕೆ ತಕ್ಕಂತೆ ಬದಲಾಗಬೇಕು. ಹಿಂದೆ ತನ್ನ ಸ್ನೇಹಿತ ಸಂಪಾದಕರೊಬ್ಬರ ಅಚ್ಚುಮೊಳೆ ಮುದ್ರಣವಿದ್ದ ಸಂದರ್ಭದಲ್ಲಿ ಮುದ್ರಣದಲ್ಲಾದ ತೊಂದರೆಯನ್ನು ಹಾಸ್ಯದ ಮೂಲಕ ಮೆಲಕು ಹಾಕಿದರು. “ಅಚ್ಚುಮೊಳೆಯಿದ್ದ ಕಾಲದಲ್ಲಿಯೇ ವೆಬ್ ಪ್ರಿಂಟಿಂಗ್ ಬಂದಿತ್ತು. ಅಂದು ಜಿಲ್ಲಾ ಪಂಚಾಯಿತಿ ಕಾರ್ಯಕ್ರಮದ ಹಿಂದಿನ ದಿನ ಅರ್ಹ ಫಲಾನುಭವಿಗಳಿಗೆ ಚೆಕ್ ವಿತರಣೆ ಎಂದು ಹೆಡ್ ಲೈನ್ ಮುದ್ರಣವಾಗಬೇಕಿತ್ತು. ಆದರೆ, ಅಚ್ಚುಮೊಳೆಗೆ ಅವಲಂಬಿತರಾಗಿದ್ದ ಸ್ನೇಹಿತರಿಗೆ ”ಚೆ” ಎನ್ನುವ ಅಚ್ಚುಮೊಳೆ ಸವೆದು ಹೋಗಿತ್ತು. ಅಷ್ಟೆ ಹುಡುಕಿ ತಡಕಾಡಿ ಹೊಂದಿಸಿ ಮುದ್ರಿಸಿದ್ದರು. ಮಾರನೆ ದಿನ ”ಚೆ” ಜಾಗದಲ್ಲಿ “ಬೆ” ಎಂದು ಮುದ್ರಿತವಾಗಿತ್ತು. ಅಂದರೆ ಜಿಲ್ಲಾ ಪಂತಾಯಿತಿ ನಿಂದ “ಬೆಕ್ಕು ವಿತರಣೆ” ಎಂದು ಮುದ್ರಿತವಾಗಿತ್ತು ಎಂದು ಹಾಸ್ಯದ ಮೂಲಕವೇ ಮುದ್ರಣ ಲೋಪದ ಬಗ್ಗೆ ಹೇಳಿದರು.
ಹೋರಾಟದ ಫಲ ಪತ್ರಿಕೆ ಮತ್ತಷ್ಟು ಗಟ್ಟಿ
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಗೋಪಾಲ್ ಯಡಿಗೆರೆ, ಕ್ರಾಂತಿದೀಪ ಸಂಪಾದಕ ಮಂಜುನಾಥ್ ಅವರದ್ದು ಹೋರಾಟದ ಬದುಕು. ಅವರು ಹೋರಾಟದಿಂದ ಪತ್ರಿಕೆಯನ್ನು ಮತ್ತಷ್ಟು ಗಟ್ಟಿಗೊಳಿಸಿದವರು. ಅವರಿಗೆ ಶುಭವಾಗಲಿ ಎಂದು ಹಾರೈಸಿದರು.
ಕಷ್ಟ ಕಾಲದಲ್ಲಿ ಕೈಹಿಡಿದರು
ಕ್ರಾಂತಿದೀಪ ಪತ್ರಿಕೆ ಸಂಪಾದಕ ಎನ್. ಮಂಜುನಾಥ್ ಮಾತನಾಡಿ, ಪತ್ರಿಕೆ ಬೆಳೆದು ಬಂದ ಹಾದಿ, ಕಷ್ಟದಲ್ಲಿ ಕೈಹಿಡಿದ ರಾಜಕಾರಣಿ ಸ್ನೇಹಿತರ ನೆನಪುಗಳನ್ನು ಮೆಲುಕು ಹಾಕಿದರು.
ಕಾರ್ಯಕ್ರಮದಲ್ಲಿ ಮಾಜಿ ಮೇಯರ್ ಮರಿಯಪ್ಪ, ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಎನ್.ಗೋಪಿನಾಥ್, ಶೇಷಾಚಲ, ವಕೀಲ ಶ್ರೀಪಾಲ್, ಕಾಂಗ್ರೆಸ್ ಮುಖಂಡ ಎಸ್.ಪಿ.ದಿನೇಶ್ ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡಿದ್ದರು. ನಾಗರಾಜ್ ನೇರಿಗೆ ನಿರೂಪಿಸಿದರು.