ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ನಗರದ ಈಡಿಗರ ಭವನದಲ್ಲಿ ನ.26ರಂದು ಧೀರ ದೀವರ ಬಳಗ ಮತ್ತು ಹಳೆಪೈಕ ದೀವರ ಸಂಸ್ಕೃತಿ ಸಂವಾದ ಬಳಗ ವತಿಯಿಂದ ದೀವರ ಸಾಂಸ್ಕೃತಿಕ ವೈಭವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಬಳಗದ ಸಂಚಾಲಕ ಸುರೇಶ್ ಬಾಳೆಗುಂಡಿ ಹೇಳಿದರು.
ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾಂಸ್ಕೃತಿಕ ವೈಭವ ಕಾರ್ಯಕ್ರಮದಲ್ಲಿ ‘ಧೀರ ದೀವರು’ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಅದಕ್ಕಾಗಿ ಮೂವರನ್ನು ಆಯ್ಕೆ ಮಾಡಲಾಗಿದೆ ಎಂದರು.
ನ.26ರಂದು ಬೆಳಗ್ಗೆ 10 ಗಂಟೆಗೆ ನಿಟ್ಟೂರಿನ ನಾರಾಯಣಗುರು ಮಹಾಸಂಸ್ಥಾನದ ರೇಣುಕಾನಂದ ಸ್ವಾಮೀಜಿ ಅವರ ಸಾನ್ನಿಧ್ಯದಲ್ಲಿ ಸಾರಗನಜಡ್ಡು ಕಾರ್ತಿಕೇಯ ಪೀಠದ ಯೋಗೇಂದ್ರ ಅವದೂತರು ಸಮಾರಂಭವನ್ನು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ಮಾಜಿ ಶಾಸಕ ಹರತಾಳು ಹಾಲಪ್ಪ ಮತ್ತು ಕುಮಾರ್ ಬಂಗಾರಪ್ಪ ಆಗಮಿಸಲಿದ್ದಾರೆ. ಸಂಚಾಲಕ ನಾಗರಾಜ ನೇರಿಗೆ ಉಪಸ್ಥಿತರಿರುವರು. ದೀವರ ಸಾಂಸ್ಕೃತಿಕ ವೈಭವದ ಸಂಚಾಲಕರಾದ ಸುರೇಶ್ ಕೆ.ಬಾಳೇಗುಂಡಿ ಅಧ್ಯಕ್ಷತೆ ವಹಿಸುವರು ಎಂದು ತಿಳಿಸಿದರು.
ಧೀರ ದೀವರು ಪ್ರಶಸ್ತಿ ಪ್ರದಾನ
ಕಾರ್ಯಕ್ರಮದಲ್ಲಿ ಭೂಮಣ್ಣಿ ಬುಟ್ಟಿ, ಹಸೆ ಚಿತ್ತಾರ ಸ್ಪರ್ಧೆ ಮತ್ತು ಪ್ರದರ್ಶನವನ್ನು ಏರ್ಪಡಿಸಲಾಗಿದೆ. ಅಂದು ಮಧ್ಯಾಹ್ನ 3 ಗಂಟೆಗೆ ಧೀರ ದೀವರು ಪುರಸ್ಕಾರವನ್ನು ಸಿಗಂದೂರಿನ ಧರ್ಮದರ್ಶಿ ಡಾ. ಎಸ್. ರಾಮಪ್ಪ ಮತ್ತು ಜಾನಪದ ಕಲಾವಿದ ಟಾಕಪ್ಪ ಕಣ್ಣೂರು, ಹಿರಿಯ ಹಸೆ ಚಿತ್ತಾರೆ ಕಲಾವಿದೆ ಲಕ್ಷ್ಮಮ್ಮ ಗಡೆಮನೆ ಅವರಿಗೆ ಪ್ರದಾನ ಮಾಡಲಾಗುವುದು. ಶಿಕ್ಷಣ ಸಚಿವ ಮಧು ಬಂಗಾರಪ್ಪ ಪ್ರಶಸ್ತಿ ಪ್ರದಾನ ಮಾಡುವರು. ಸಿರಿವಂತೆ ಚಂದ್ರಶೇಖರ್ ಸಮಾರೋಪ ಭಾಷಣ ಮಾಡುವರು. ಅತಿಥಿಗಳಾಗಿ ಶಾಸಕರಾದ ಗೋಪಾಲಕೃಷ್ಣ ಬೇಳೂರು, ಭೀಮಣ್ಣ ನಾಯ್ಕ, ಗೃಹಸಚಿವರ ಆಪ್ತ ಕಾರ್ಯದರ್ಶಿ ಕೆ. ಚನ್ನಬಸಪ, ನಗರಾಭಿವೃದ್ಧಿ ಇಲಾಖೆಯ ಉಪಕಾರ್ಯದರ್ಶಿ ಎಚ್. ಕೆ. ಕೃಷ್ಣಮೂರ್ತಿ, ಜಿಲ್ಲಾ ಆರ್ಯ ಈಡಿಗರ ಸಂಘದ ಅಧ್ಯಕ್ಷ ಶ್ರೀಧರ್ ಹುಲ್ತಿಕೊಪ್ಪ ಇತರರು ಪಾಲ್ಗೊಳ್ಳುವರು.
ಈಡಿಗ ಸಮಾಜದ ಮುಖಂಡರಾದ ಲಕ್ಷ್ಮೀಕಾಂತ್ ಚಿಮಣೂರು, ಪುನೀತ್, ಕೃಷ್ಣಮೂರ್ತಿ, ಜಯದೇವಪ್ಪ ಉಪಸ್ಥಿತರಿದ್ದರು.